ಬಿಜೆಪಿ ಮಾಜಿ ಸಚಿವ ರಾಮದಾಸ್ ಆತ್ಮಹತ್ಯೆಗೆ ಯತ್ನ
ನಡೆದಿದ್ದೇನು: ಪ್ರೇಮಕುಮಾರಿ ಎಂಬ 35 ವರ್ಷದ ಮಹಿಳೆಯೊಬ್ಬರು ಮಂಗಳವಾರ ಮಧ್ಯಾಹ್ನ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಾಜಿ ಸಚಿವ ರಾಮದಾಸ್ ಅವರು ತಮ್ಮನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾರೆ ಎಂದು ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದರು.
ಅದೇ ವೇಳೆ ಅವರ ಮೊಬೈಲಿಗೆ ಕರೆಯೊಂದು ಬಂದಿದ್ದು, ತನ್ನ ಮಾನ ಹರಾಜು ಹಾಕಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬರು ಬೆದರಿಸಿದ್ದಾರೆ. ಅದನ್ನು ಲೌಡ್ ಸ್ಪೀಕರ್ ಗೆ ಹಾಕಿದ ಮಹಿಳೆ ಮತ್ತೊಂದು ಬದಿಯಲ್ಲಿದ್ದ ವ್ಯಕ್ತಿಯ ಅಷ್ಟೂ ಮಾತುಗಳನ್ನು ಸುದ್ದಿಗಾರರ ಕಿವಿಗೂ ಹಾಕಿದ್ದಾರೆ.
ಅದಾದ ನಂತರ ಸಂಜೆ ವೇಳೆಗೆ 54 ವರ್ಷದ ಬ್ರಹ್ಮಚಾರಿ ರಾಮದಾಸ್ ಅವರು ಅತಿಥಿಗೃಹವೊಂದಕ್ಕೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಮನೆಯವರು ಅವರನ್ನು ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರೇಮಕುಮಾರಿ ಹೇಳಿದ್ದೇನು?: ಐದು ವರ್ಷದಿಂದ ನಾನು ರಾಮದಾಸ್ ಅವರನ್ನು ಬಲ್ಲೆ. ಪೊಲೀಸ್ ಪೇದೆಯಾಗಿದ್ದ ತನ್ನ ಗಂಡ ಸತ್ತ ನಂತರ ರಾಮದಾಸ್ ತನ್ನನ್ನು ಮದುವೆಯಾಗುವುದಾಗಿ ಹೇಳಿ ವಂಚಿಸಿದ್ದಾರೆ. ನನಗೆ ಇಬ್ಬರು ಮಕ್ಕಳಿದ್ದಾರೆ. ಚಿಕ್ಕಮಗಳೂರು ಮೂಲ... ಗಂಡ ಸತ್ತ ನಂತರ ಅನುಕಂಪದ ಆಧಾರದಲ್ಲಿ ನಾನು ಸರಕಾರಿ ಕೆಲಸದಲ್ಲಿದ್ದೆ.
2 ವರ್ಷದ ಹಿಂದೆ ರಾಮದಾಸ್ ಕೆಸಲ ಬಿಡಿಸಿದರು. ಗೋಕುಲಂನಲ್ಲಿರುವ ಅವರ ಮನೆಯಲ್ಲಿ ತಾಯಿಯ ಎದುರು ತಿಲಕವಿಟ್ಟು ಮದುವೆಯಾಗಿರುವುದಾಗಿ ಘೋಷಿಸಿದರು. ಆದರೆ ಮುಂದೆ ನನ್ನನ್ನು ಅಧಿಕೃತವಾಗಿ ಮದುವೆಯಾಗಲು ನಿರಾಕರಿಸಿದರು. ಆ ವೇಳೆಗೆ ನನ್ನನ್ನು ಕೆಲಸದಿಂದ ಬಿಡಿಸಿದ್ದರು. ನಾನೀಗ ಅತಂತ್ರಗೊಂಡಿದ್ದೇನೆ.
ಈ ಹಿಂದೆಯೂ ಇಬ್ಬರೂ ಇದೇ ವಿಷಯವಾಗಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ.