ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಕ: ವಿಚಾರಣೆ ಮುಂದೂಡಿದ ಕೋರ್ಟ್
ಬೆಂಗಳೂರು, ಜನವರಿ 03; ಚಿತ್ರದುರ್ಗದ ಮುರಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ. ಎಸ್. ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ತಿದ್ದುಪಡಿ ಮಾಡಲು ಅರ್ಜಿದಾರರಿಗೆ ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ವಿಚಾರಣೆಯನ್ನು ಜನವರಿ 12ಕ್ಕೆ ಮುಂದೂಡಿದೆ.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ನಾಯಪೀಠ ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು. ಇದೀಗ ಅರ್ಜಿದಾರರ ಮನವಿಯ ಮೇರೆಗೆ ಮತ್ತೊಮ್ಮೆ ವಿಚಾರಣೆ ನಡೆಸುವುದಕ್ಕೆ ಸಮ್ಮತಿಸಿ ವಿಚಾರಣೆಗೆ ದಿನಾಂಕ ನಿಗದಿ ಪಡಿಸಿದೆ. ಚಿತ್ರದುರ್ಗದವರೇ ಆದ ಡಿ. ಎಸ್. ಮಲ್ಲಿಕಾರ್ಜುನ ಸೇರಿ ಮೂವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಸೋಮವಾರ ವಿಚಾರಣೆ ನಡೆಸಿತು.
ಮುರುಘಾ ಶ್ರೀ ಕೇಸ್: ಮಾಜಿ ಶಾಸಕ ಬಸವರಾಜನ್ಗೆ ಜಾಮೀನು
ಅರ್ಜಿದಾರರ ಪರ ವಕೀಲರು, ಹಿಂದೂ ಕಾನೂನಿನಡಿಯಲ್ಲಿ ಪೀಠಾಧಿಪತಿಗಳ ಅಧಿಕಾರ, ವ್ಯಾಪ್ತಿ ಸಂಬಂಧ ಹಲವು ಅಂಶಗಳನ್ನು ಅರ್ಜಿಯಲ್ಲಿ ಸೇರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿಅರ್ಜಿಯ ತಿದ್ದುಪಡಿಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಮನವಿ ಪುರಸ್ಕರಿಸಿದ ನ್ಯಾಯಪೀಠ, ಮುಂದಿನ ಮೂರು ದಿನಗಳಲ್ಲಿ ಅರ್ಜಿ ತಿದ್ದುಪಡಿ ಮಾಡಲು ಅವಕಾಶ ನೀಡಿತು. ಅಲ್ಲದೆ, ಅರ್ಜಿ ಸಂಬಂಧ ಸಂಪೂರ್ಣ ವಿವರವನ್ನು ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ, ತೀರ್ಪು ಕಾಯ್ದಿರಿಸಿದ ಹೈಕೋರ್ಟ್
ಈ ಹಿಂದೆ ಸರಕಾರದ ಪರ ವಾದಿಸಿದ್ದ ಅಡ್ವೋಕೇಟ್ ಜನರಲ್, ಮುರುಘಾ ಮಠದ ಪೀಠಾಧಿಪತಿಗಳು, ಪೊಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಅವರು ಜೈಲಿನಿಂದಲೇ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರೀ ಹಾನಿಯುಂಟಾಗಲಿದೆ, ಹಾಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ
ಆಡಳಿತಾಧಿಕಾರಿ ನೇಮಕ ಕಾನೂನು ಬಾಹಿರ
ಅರ್ಜಿದಾರರ ಪರ ವಕೀಲರು ಸರ್ಕಾರ ಸಂವಿಧಾನದ 162ನೇ ವಿಧಿಯಡಿ ಆಡಳಿತಾಧಿಕಾರಿ ನೇಮಕ ಮಾಡಿರುವುದು ಕಾನೂನು ಬಾಹಿರ. ಮಠಗಳ ಮೇಲೆ ನಿಯಂತ್ರಣ ಹೊಂದಲು ಕಾನೂನಿನಡಿ ಅವಕಾಶವಿಲ್ಲ. ಸಿವಿಲ್ ಪ್ರೊಸೀಜರ್ ಕೋಡ್ ಅನುಸಾರ ಕಲಂ 92ರ ಅಡಿಯಲ್ಲಿ ನಿಯಂತ್ರಣ ಹೊಂದಬಹುದು. ಆದ್ದರಿಂದ ಈ ಪ್ರಕರಣದಲ್ಲಿ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಅಲ್ಲದೆ, ಪ್ರತಿಯೊಂದು ಧಾರ್ಮಿಕ ಪಂಗಡಗಳಿಗೆ (ರಿಲಿಜಿಯಸ್ ಡಿನಾಮಿನೇಷನ್? ಮಠ) ಸಂವಿಧಾನದತ್ತವಾದ ಕೆಲವೊಂದು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಅವಕಾಶವಿರುತ್ತದೆ. ಇದನ್ನು ಸುಪ್ರೀಂಕೋರ್ಟ್ ಶಿರೂರು ಮಠ ಪ್ರಕರಣದಲ್ಲಿ ಈಗಾಗಲೇ ಸ್ಪಷ್ಟಪಡಿಸಿದೆ. ಹೀಗಾಗಿ, ಮುರುಘಾಮಠ ಬಸವತತ್ವ ಅನುಸರಿಸುವ ಧಾರ್ಮಿಕವಾಗಿ ಅಲ್ಪಸಂಖ್ಯಾತರನ್ನು ಅವೈದಿಕ ಪರಂಪರೆಯ ಲಿಂಗಾಯತ ಮಠವಾಗಿದ್ದು, ಆಡಳಿತಾಧಿಕಾರಿ ನೇಮಕ ಸಂವಿಧಾನಬಾಹಿರ ಕ್ರಮ ಎಂದರು.
ಕರ್ನಾಟಕ ಹೈಕೋರ್ಟ್ ಕೇಳಿದ್ದೇನು?
ನ್ಯಾಯಪೀಠ, ರಾಜ್ಯದ ಮಠಗಳ ಇತಿಹಾಸದಲ್ಲೇ ಈ ಮಠಕ್ಕೆ ಅತ್ಯಂತ ಮಹತ್ವದ ಮತ್ತು ಗೌರವ ಘನತೆಯಿದೆ. ಈ ಮಠಕ್ಕೆ ಯಾರು ಪೀಠಾಧಿಪತಿ ಎಂಬುದು ಮುಖ್ಯವಲ್ಲ. ಇದು ಅಲ್ಲಮಪ್ರಭುಗಳು ಸ್ಥಾಪಿಸಿದ ಮಠ. ಈ ಮಠಕ್ಕೆ 1,600 ಕೋಟಿ ಮೌಲ್ಯದ ಸ್ಥಿರ ಮತ್ತು ಚರಾಸ್ತಿ ಹೊಂದಿದೆ ಎಂದು ನೀವೇ ಹೇಳುತ್ತಿದ್ದೀರಿ, ವಿರಕ್ತ ಮಠ ಎನ್ನುತ್ತಿದ್ದೀರಿ, ಆದರೆ ಅವಿರಕ್ತ ನಡೆ ಸರಿಯೇ ಎಂದು ಪ್ರಶ್ನಿಸಿತು.
ಅಷ್ಟೇ ಅಲ್ಲದೆ, ಇನ್ನೂ ಮುಂದುವರಿದು ಒಂದು ವೇಳೆ ಶರಣರು ಜಾಮೀನು ಪಡೆದು ಹೊರಬಂದರೆ ಆಗ ಆಡಳಿತವನ್ನು ಬಿಟ್ಟುಕೊಡುತ್ತೀರಾ? ಎಂದು ಅಡ್ವೊಕೇಟ್ ಜನರಲ್ ಅವರನ್ನು ಪ್ರಶ್ನಿಸಿತು. ಅದಕ್ಕೆ ಉತ್ತರಿಸಿದ ಎಜಿ, ರಾಜ್ಯದ ಮಠಗಳ ಇತಿಹಾಸದಲ್ಲೇ ಪೀಠಾಧಿಪತಿಯೊಬ್ಬರು ಇಂತಹ ಗಂಭೀರ ಕ್ರಿಮಿನಲ್ ಪ್ರಕರಣದಲ್ಲಿ ಜೈಲು ಪಾಲಾದ ಉದಾಹರಣೆಗಳಿಲ್ಲ. ಒಂದು ವೇಳೆ ಶರಣರಿಗೆ ಜಾಮೀನು ದೊರೆತದ್ದೇ ಆದರೆ, ಆಗ ಸರ್ಕಾರ ಈ ಅಂಶವನ್ನು ಪರಿಶೀಲಿಸಲಿದೆ ಎಂದು ಕೋರ್ಟ್ಗೆ ವಿವರಿಸಿದರು.
ರಾಜ್ಯ ಸರ್ಕಾರ ಹೇಳಿದ್ದೇನು?
ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪೊಕ್ಸೊ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಜೈಲಿನಿಂದಲೇ ತಮ್ಮ ಆಣತಿಯ ಅನುಸಾರ ಮಠ ಮತ್ತು ವಿದ್ಯಾಸಂಸ್ಥೆಗಳ ಆಡಳಿತ ನಡೆಸುವುದಾದರೆ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿಗೆ ಭಾರೀ ಹಾನಿಯುಂಟಾಗುತ್ತದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿತು.
ಟ್ರಸ್ಟ್ ಅನ್ನು ಸರ್ಕಾರ ರಕ್ಷಣೆ ಮಾಡಬೇಕು
ಶರಣರು ಮಠ ಮತ್ತು ವಿದ್ಯಾಪೀಠಕ್ಕೆ ಏಕೈಕ (ಸೋಲ್) ಟ್ರಸ್ಟೀ ಮತ್ತು ಅಧ್ಯಕ್ಷರಾಗಿ ತಕ್ಕದ್ದು ಎಂದು 2010ರ ನವೆಂಬರ್ 26ರಂದು ಟ್ರಸ್ಟ್ ಡೀಡ್ ನಿಗದಿಪಡಿಸಲಾಗಿದೆ. ಇದರ ಅನುಸಾರ ಶರಣರು ಮಠ ಮತ್ತು ವಿದ್ಯಾಪೀಠಗಳ ಆಡಳಿತದ ಸಂಪೂರ್ಣ ಅಧಿಕಾರ ಹೊಂದಿದ್ದಾರೆ.
ವಿದ್ಯಾಪೀಠದ ಅಡಿಯಲ್ಲಿ ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ 150 ವಿದ್ಯಾಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಸಾವಿರಾರು ನೌಕರರು ದುಡಿಯುತ್ತಿದ್ದಾರೆ. ಈ ಟ್ರಸ್ಟ್ ಸಾರ್ವಜನಿಕ ಟ್ರಸ್ಟ್. ಹೀಗಾಗಿ ಶರಣರು ಜೈಲು ಸೇರಿರುವ ಕಾರಣ ಈ ಸಾರ್ವಜನಿಕ ಟ್ರಸ್ಟ್ ಅನ್ನು ಸರ್ಕಾರ ರಕ್ಷಣೆ ಮಾಡಬೇಕಿದ್ದು ಅದಕ್ಕಾಗಿಯೇ ಆಡಳಿತಾಧಿಕಾರಿ ನೇಮಕ ಮಾಡಿದೆ ಎಂದು ವಿವರಿಸಿದರು.