ಮಂಡ್ಯ ಟಿಕೆಟ್ ಫೈಟ್ : ಇದು ಕೊನೆಯಲ್ಲಾ, ಮುಂದೆ ಏನಾಗುತ್ತೆ ನೋಡಿ ಎಂದ ಸುಮಲತಾ ಮಾತಿನ ಮರ್ಮವೇನು?
ಮಂಡ್ಯ , ಫೆಬ್ರವರಿ 26: 2019 ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಜಿದ್ದಾಜಿದ್ದಿನ ಕ್ಷೇತ್ರವಾದ ಮಂಡ್ಯ ಲೋಕಸಭಾ ಕ್ಷೇತ್ರ ಈ ಬಾರಿಯ ಸಹ ಚುನಾವಣಾ ರಂಗು ಜೋರಾಗಿದೆ. ಮಂಡ್ಯ ರಾಜಕಾರಣ ಅಂದರೆ ಇಂಡಿಯಾನೇ ತಿರುಗಿ ನೋಡುತ್ತೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲೂ ಸುಮಲತಾ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ಜಿದ್ದಾಜಿದ್ದಿ ಏರ್ಪಡುತ್ತಾ ಎನ್ನುವ ಪ್ರಶ್ನೆಗೆ ಹುಟ್ಟಿಕೊಂಡಿದೆ.
ಲೋಕಸಭಾ ಚುನಾವಣೆಗಾಗಿ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಈಗಾಗಲೇ ಕ್ಷೇತ್ರ ಹಂಚಿಕೆ ಕುರಿತು ಬಿಜೆಪಿ ಹೈಕಮಾಂಡ್ ಅಂತಿಮಗೊಳಿಸಿದ್ದು, ಮಂಡ್ಯ ಜೆಡಿಎಸ್ ನಾಯಕರ ಕೈ ಸೇರಲಿದೆ ಎನ್ನುವ ಮಾತುಗಳು ಕೇಳಿ ಬಂದಿದೆ. ಆದರೆ, ಮಂಡ್ಯ ಕ್ಷೇತ್ರದಿಂದ ಹಾಲಿ ಸಂಸದೆ ಸುಮಲತಾ ಅಂಬರೀಷ್ ಸ್ಪರ್ಧಿಸುವ ಕುರಿತು ಒಲವು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾಧ್ಯಮಗಳ ಜೊತೆಗೆ ಸುಮಲತಾ ಮಾತನಾಡಿ, ಟಿಕೆಟ್ ಸಿಗುತ್ತೊ, ಸಿಗಲ್ವೋ ಎಂಬ ಅನುಮಾನ ನನಗೆ ಇಲ್ಲ. ನನಗೆ ಬಿಜೆಪಿ - ಜೆಡಿಎಸ್ ಮೈತ್ರಿ ಟಿಕೆಟ್ ಸಿಗುತ್ತೆ ಎಂಬ ವಿಶ್ವಾಸ ಇದೆ. ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಆದರೆ ನನ್ನ ಜೊತೆ ದ್ವೇಷ ಇರುತ್ತಾ? ಜೆಡಿಎಸ್ ಎನ್ಡಿಎನ ಒಂದು ಭಾಗ. ಅದೇ ರೀತಿ ನಾನು ಸಹ ಎನ್ಡಿಎ ಒಂದು ಭಾಗ. ಇದು ಕೊನೆಯಲ್ಲಾ, ಮುಂದೆ ಏನಾಗುತ್ತೆ ನೋಡಿ ಎಂದು ಹೇಳಿರುವುದು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಮತ್ತಷ್ಟು ಕುತೂಹಲ ಕೆರಳಿಸಿದೆ.
ಒಂದು ಕಾಲದಲ್ಲಿ ರೈಲ್ವೆಯಲ್ಲಿ ಓಡಾಡುವುದು ಕಷ್ಟ ಇತ್ತು.ಆದರೆ, ಈಗ ಆ ಪರಿಸ್ಥಿತಿ ಇಲ್ಲ, ಸುಸಜ್ಜಿತವಾದ ರೆಲ್ವೆ ವ್ಯವಸ್ಥೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದಿದೆ.
ಕೇಂದ್ರಕ್ಕೆ ಪ್ರತ್ಯೇಕ ರಾಜ್ಯಗಳಿಲ್ಲ. ಅವರು ಅಭಿವೃದ್ಧಿ ಮಾಡುವುದೆ ರಾಜ್ಯಗಳನ್ನ ತೆರಿಗೆ ಹಣವನ್ನ ಬ್ಯಾಂಕ್ನಲ್ಲಿಟ್ಟು ಕೊಂಡು ಬೇರೆಡೆ ಖರ್ಚು ಮಾಡಲು ಆಗಲ್ಲ. ಎಲ್ಲಾ ರಾಜ್ಯಗಳಿಗೂ ಅಭಿವೃದ್ಧಿ ಮಾಡ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ.
ತೆರಿಗೆ ಹಣ ಎಷ್ಟು ವಾಪಾಸ್ ಬಂತು ಅನ್ನೋದರ ಜೊತೆಗೆ ರಾಜ್ಯಕ್ಕೆ ಸಿಗುತ್ತಿರುವ ಯೋಜನೆಗಳನ್ನು ಗಮನಿಸಬೇಕು. ಪ್ರಧಾನಿ ಮೋದಿ ಅವರು ಎಲ್ಲರನ್ನು ಸಮನಾಗಿ ಕಾಣ್ತಿದ್ದಾರೆ, ಅಲ್ಲದೇ ಮಂಡ್ಯ ಅಭಿವೃದ್ಧಿ ಹಾದಿಯಲ್ಲಿ ಸಾಗುತ್ತಿದೆ. ವಿಶ್ವದಲ್ಲೇ ದೇಶದ ಬಗ್ಗೆ ಮೆಚ್ಚುಗೆ ಮಾತು ಆಡ್ತಿದ್ದಾರೆ, ಮೊದಲೆಲ್ಲಾ ಭಾರತ ಎಂದ್ರೆ ಬಡದೇಶ ಅನ್ನೋರು. ಈಗ ಇಂಡಿಯಾ ಅಂತಕೂ ಹೇಳಲ್ಲ ಭಾರತದಿಂದ ಬಂದ್ರಾ ಅಂತ ಹೆಮ್ಮೆ ಪಡ್ತಾರೆ. ಪ್ರಧಾನ ಸೇವಕ ಎಂದು ಹೇಳಿಕೊಂಡು ಮೋದಿ ಅವರು ಸೇವೆ ಮಾಡ್ತಿದ್ದಾರೆ. ಭಾರತವನ್ನು ನಂ1 ಮಾಡುವುದು ಮೋದಿ ಅವರ ಗುರಿ, ಅದರಲ್ಲಿ ಸ್ವಾರ್ಥ ಇಲ್ಲ ಎಂದು ಹೇಳಿದ್ದಾರೆ.
ಯಾವುದೇ ಜಾತಿ, ಪಕ್ಷ, ಧರ್ಮ ಎಲ್ಲರೂ ನಮ್ಮವರೆ. ಮಂಡ್ಯದಲ್ಲಿ ಎಲ್ಲರೂ ನಮ್ಮವರೆ, ಮಂಡ್ಯ ಅಭಿವೃದ್ಧಿ ಆದರೆ ಎಲ್ಲರಿಗೂ ತಲುಪುತ್ತದೆ. ಅಭಿವೃದ್ಧಿಯಲ್ಲಿ ಭೇದ ಇರಬಾರದು, ಮೊನ್ನೆಯಷ್ಟೇ ಪ್ರಧಾನಿಗಳನ್ನ ಭೇಟಿಯಾಗಿದ್ದೆ. ಮದ್ದೂರು ಭೇಟಿಯನ್ನ ನೆನಪಿಟ್ಟುಕೊಂಡು ಜನರ ಪ್ರೀತಿಯ ಸ್ವಾಗತ ಸ್ಮರಿಸಿದ್ರು. ಇಂಡಿಯಾ ಜಗತ್ತಿನಲ್ಲಿ ನಂ1 ಆದರೆ ಮಂಡ್ಯ ಕರ್ನಾಟಕದಲ್ಲಿ ನಂ1 ಆಗಬೇಕು ಎಂದು ಸುಮಲತಾ ಅಂಬರೀಶ್ ಹೇಳಿದರು.












Click it and Unblock the Notifications