ಅಭಿವೃದ್ಧಿ ಕುರಿತ ಪುಸ್ತಕ ತರಲಿದ್ದಾರಂತೆ ಪ್ರತಾಪ್ ಸಿಂಹ
ಬೆಂಗಳೂರು, ಮೇ 27: ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆದ ಕೆಲಸಗಳ ಬಗ್ಗೆ ಪುಸ್ತಕ ಹೊರತರುವುದಾಗಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ಲೈವ್ ವಿಡಿಯೋದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರದಿಂದ ಆದ ಅಭಿವೃದ್ಧಿ ಕಾರ್ಯಗಳ ಕುರಿತು ಪುಸ್ತಕದಲ್ಲಿ ವಿವರವಾಗಿ ಬರೆಯುವುದಾಗಿ ಹೇಳಿದರು.
ಬಳಿಕ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಬಿಜೆಪಿಯ ತುಳಸಿ ಮುನಿರಾಜು ಗೌಡ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ರಾಜರಾಜೇಶ್ವರಿ ನಗರಕ್ಕೆ ಆಗಾಗ ಬರುತ್ತಿದ್ದೆ. ಹನ್ನೆರಡು ಹದಿಮೂರು ವರ್ಷದ ಹಿಂದೆ ಅಭಿವೃದ್ಧಿ ಆಗಿರಲಿಲ್ಲ. ಕೆಲವೇ ಮನೆಗಳಿದ್ದವು. ಈಗ ಸದಾಶಿವನಗರ, ಮಲ್ಲೇಶ್ವರ, ಬಿಟಿಎಂ ಲೇಔಟ್ಗಳು ಹೊಂದಿರುವಂತೆಯೇ ನಗರದ ಹೊರವಲಯದಲ್ಲಿ ಇರುವ ರಾಜರಾಜೇಶ್ವರಿ ನಗರ ಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಸುಶಿಕ್ಷಿತರು, ಉತ್ತಮ ನಾಗರಿಕರು ಇದ್ದಾರೆ.
ಈ ಕ್ಷೇತ್ರಕ್ಕೆ ಯಾವ ರೀತಿ ಪ್ರತಿನಿಧಿ ಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಇಲ್ಲಿ ತುಳಸಿ ಮುನಿರಾಜು ಗೌಡ ಮತ್ತು ಮುನಿರತ್ನ ನಡುವೆ ನಿಮ್ಮ ಆಯ್ಕೆ ತುಳಸಿ ಮುನಿರಾಜು ಗೌಡ ಎಂದು ಬಹಳ ಸ್ಪಷ್ಟವಾಗಿ ಗೊತ್ತಿದೆ.
ಇಂದು ಟ್ವಿಟ್ಟರ್, ಫೇಸ್ಬುಕ್ ತೆಗೆದು ನೋಡಿದಾಗ ದೆಹಲಿ-ಮೀರತ್ ನಡುವಣ ಹದಿನಾಲ್ಕು ಪಥದ ರಸ್ತೆಯ ಚರ್ಚೆ ಕಾಣಿಸುತ್ತಿದೆ. ಇಷ್ಟು ಉದ್ದದ ರಸ್ತೆಯನ್ನು ಕೇವಲ 18 ತಿಂಗಳಲ್ಲಿ ನಿರ್ಮಿಸಲು ಸಾಧ್ಯವೇ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ನಿಮಗೊಂದು ಸಿಹಿ ಸುದ್ದಿ ಹೇಳುತ್ತೇನೆ.
ಮೀರತ್-ದೆಹಲಿ ಹೈವೆಯಂತೆಯೇ ಬೆಂಗಳೂರು-ಮೈಸೂರು ನಡುವೆ 8 ಪಥಗಳ ಹೈವೆ ಇನ್ನು ಕೇವಲ 24 ತಿಂಗಳಲ್ಲಿ ಸಿದ್ಧವಾಗಲಿದೆ. ಮೈಸೂರು, ಕೇರಳ, ಕೊಡಗು, ಊಟಿ ಮುಂತಾದೆಡೆ ಹೋಗುವವರಿಗೆ ಇದು ಸಿಹಿ ಸುದ್ದಿ.
30 ತಿಂಗಳ ಯೋಜನೆಯ ಗುರಿ ಹಾಕಿಕೊಂಡಿದ್ದರೂ, 24 ತಿಂಗಳಲ್ಲಿಯೇ ಪೂರ್ಣಗೊಳಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ನಿಗದಿತ ಕಾಲಾವಧಿಗೆ ಮುನ್ನವೇ ಕೆಲಸ ಮುಗಿಸುತ್ತೇವೆ.
ರಾಜರಾಜೇಶ್ವರಿ ನಗರದ ಆರ್ಚ್ನಿಂದ ನೈಸ್ ರಸ್ತೆಯವರೆಗೆ ಎಲಿವೇಟೆಡ್ ಫ್ಲೈಓವರ್ ಮತ್ತು ಅಲ್ಲಿಂದ ಲೇನ್ಗಳು ಬರಲಿವೆ. ಇದು ನಾವು ಅಭಿವೃದ್ಧಿ ಬಗ್ಗೆ ಇಟ್ಟಿರುವ ಬದ್ಧತೆ.
ಮುನಿರತ್ನ ಎಂದರೆ ಕಣ್ಣಿಗೆ ಬರುವುದು ನಕಲಿ ವೋಟರ್ ಐಡಿ ಕಾರ್ಡ್, ಫಿಲಂನಲ್ಲಿ ನಿರ್ಮಾಪಕನಾಗಿ ಅವರು ಮಾಡಿರುವ ಕೆಲಸಗಳು ಗೊತ್ತಿದೆ. ಅವರೊಬ್ಬ ಗುತ್ತಿಗೆದಾರ. ಸರ್ಕಾರಿ ದಾಖಲೆಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವ ವ್ಯಕ್ತಿ. ಪೋಲಿ ಪುಂಡಾಟಿಕೆ, ಜಗಳ ಮಾಡುವುದು, ಧಮಕಿ ಹಾಕುವುದು, ಅದು ಬಿಟ್ಟರೆ ಬೇರೆ ಸಾಧನೆ ಕಾಣುವುದಿಲ್ಲ.
ರಾಜರಾಜೇಶ್ವರಿ ನಗರ ಪ್ರತಿಷ್ಠಿತ ಬಡಾವಣೆಯಾಗಿದ್ದರೂ ದೃಷ್ಟಿಬೊಟ್ಟು ಇಟ್ಟಂತೆ ಸ್ಲಂಗಳಿವೆ. ಅವುಗಳನ್ನು ಅಭಿವೃದ್ಧಿಪಡಿಸಬೇಕಿದೆ. ಅದಕ್ಕೆ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.











Click it and Unblock the Notifications