ರೌಡಿ ಶೀಟರ್ ಸೈಲೆಂಟ್ ಸುನೀಲ್ ಜತೆ ವೇದಿಕೆ ಹಂಚಿಕೊಂಡ ಬಿಜೆಪಿ ನಾಯಕರು: ಕಾಂಗ್ರೆಸ್ ಕಿಡಿ
ಬೆಂಗಳೂರು, ನವೆಂಬರ್ 29: ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ಸೇರಿದಂತೆ ಬಿಜೆಪಿಯ ಇತರೆ ನಾಯಕರು ರೌಡಿ ಪಟ್ಟಿಯಲ್ಲಿದ್ದ ಸೈಲೆಂಟ್ ಸುನೀಲ್ ಜತೆಗೆ ವೇದಿಕೆ ಹಂಚಿಕೊಂಡಿದ್ದು , ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.
ಚಾಮರಾಜಪೇಟೆಯ ಬಿ.ಎಸ್. ವೆಂಕಟರಾಮ್ ಕಲಾಭವನದಲ್ಲಿಸೈಲೆಂಟ್ ಸುನೀಲ್ ಭಾನುವಾರ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದ. ಈ ಕಾರ್ಯಕ್ರಮದಲ್ಲಿ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್, ಬಿಜೆಪಿ ಶಾಸಕ ಉದಯ್ ಗರುಡಾಚಾರ್, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್ ಹಾಗೂ ಇತರರು ಸೈಲೆಂಟ್ ಸುನೀಲ್ ಜತೆಗೆ ವೇದಿಕೆ ಹಂಚಿಕೊಂಡಿದ್ದ ಬಗ್ಗೆ ವ್ಯಾಪಕ ಆಕ್ಷೇಪ ಕೇಳಿಬಂದಿದೆ.
ಮಲೆನಾಡಿನ ರೈತರು ಹಾಗೂ ಎಲ್ಲಾ ವರ್ಗದ ಜನರ ರಕ್ಷಣೆಗೆ ಕಾಂಗ್ರೆಸ್ ಪಕ್ಷ ನಿಲ್ಲಲಿದೆ: ಡಿಕೆಶಿ
ಬಿಜೆಪಿ ನಾಯಕರು ರೌಡಿ ಸೈಲೆಂಟ್ ಸುನೀಲ್ ಜತೆ ವೇದಿಕೆಯಲ್ಲಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಬಿಜೆಪಿ ವಿರುದ್ಧ ಹಲವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಕೂಡ ಟ್ವೀಟ್ ಮೂಲಕ ಬಿಜೆಪಿ ನಾಯಕರಿಗೆ ಕುಟುಕಿದೆ.
ರೌಡಿಶೀಟರ್ ಸೈಲೆಂಟ್ ಸುನೀಲ್ ರಾಜಕೀಯ ಕ್ಷೇತ್ರ ಪ್ರವೇಶಕ್ಕೆ ಸಿದ್ಧತೆ ನಡೆಸಿದ್ದಾನೆ. ಚಾಮರಾಜಪೇಟೆ ಕ್ಷೇತ್ರದ ವಾರ್ಡ್ವೊಂದರಿಂದ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗುತ್ತಿದ್ದಾನೆ ಎಂಬ ಮಾತುಗಳ ಬೆನ್ನಲ್ಲೇ ಬಿಜೆಪಿ ನಾಯಕರು ಸುನೀಲ್ ಜತೆಗೆ ವೇದಿಕೆ ಹಂಚಿಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಕಿಡಿ
ಬಿಜೆಪಿ ನಾಯಕರು ಸೈಲೆಂಟ್ ಸುನೀಲ್ನೊಂದಿಗೆ ವೇದಿಕೆ ಹಂಚಿಕೊಂಡ ಬಗ್ಗೆ ಕಾಂಗ್ರೆಸ್ ಕಿಡಿಕಾರಿದೆ. ''ಕ್ರಿಮಿನಲ್ಗಳೊಂದಿಗೆ ಬಿಜೆಪಿಯ ನೆಂಟಸ್ತಿಕೆ ಇರುವಾಗ ರಾಜ್ಯದಲ್ಲಿಅಪರಾಧ ಪ್ರಕರಣ ಸಂಖ್ಯೆ ಏರದೇ ಇರುತ್ತದೆಯೇ? ಗೃಹ ಸಚಿವರೇ, ರೌಡಿಗಳನ್ನು ಹಿಡಿಯುವ ಯೋಗ್ಯತೆ ನಿಮ್ಮ ಇಲಾಖೆಗೆ ಇಲ್ಲವೇ ಅಥವಾ ನೀವೇ ಪೊಲೀಸರನ್ನು ಕಟ್ಟಿಹಾಕಿದ್ದೀರಾ? ಸಿಸಿಬಿ ಪೊಲೀಸರ ಕೈಗೆ ಸಿಗದ ರೌಡಿ ಬಿಜೆಪಿ ನಾಯಕರ ಕೈಗೆ ಸಿಕ್ಕಿದ್ದು ಹೇಗೆ?,'' ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಬಿಜೆಪಿಯ ಕೃಪಾಕಟಾಕ್ಷದಿಂದ ಸೈಲೆಂಟ್ ಸುನೀಲ್ ಎಂಬ ರೌಡಿಯ ಮುಂದೆ ಈಗ ಪೊಲೀಸರೇ ಸೈಲೆಂಟ್ . ಗೃಹ ಸಚಿವರೇ ಸೈಲೆಂಟ್ ಸುನೀಲನಿಗಾಗಿ ಪೊಲೀಸರು ಹುಡುಕುತ್ತಿರಲಿಲ್ಲವೇ. ಬಿಜೆಪಿ ನಾಯಕರೊಂದಿಗೆ ವೇದಿಕೆಯಲ್ಲಿದ್ದಾಗ ಅಲ್ಲಿ ಪೊಲೀಸರಿರಲಿಲ್ಲವೇ. ಬಂಧಿಸದಂತೆ ಪೊಲೀಸರಿಗೆ ತಡೆದವರು ಯಾರು? ಪೊಲೀಸರಿಗಿಂತ ರೌಡಿಗಳೇ ಪ್ರಭಾವಿಗಳಾದರೆ? ಎಂದು ಪ್ರಶ್ನಿಸಿದೆ.
ಸೈಲೆಂಟ್ ಸುನೀಲ್ ಜತೆಗೆ ಬಿಜೆಪಿ ನಾಯಕರು ವೇದಿಕೆ ಹಂಚಿಕೊಂಡಿದ್ದು ಹಾಗೂ ಹಿಂದೆ ಬೆಟ್ಟಿಂಗ್ ದಂಧೆಯಲ್ಲಿ ಹೆಸರು ಕೇಳಿಬಂದಿದ್ದ ನಾಗಮಂಗಲದ ಫೈಟರ್ ರವಿ ಸೋಮವಾರ ಬಿಜೆಪಿ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ, ಕಾನೂನು ಎಲ್ಲರಿಗೂ ಅನ್ವಯವಾಗುತ್ತದೆ. ಕಾನೂನಿನಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರು ತಪ್ಪಿತಸ್ಥರೇ. ಸಮಾಜದಲ್ಲಿಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕಿ ಬಾಳಲು ಅವಕಾಶವಿದೆ. ಅದಕ್ಕೆ ಯಾವುದೋ ರೀತಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಅವರ ಮೇಲೆ ಯಾವುದಾದರೂ ಚಾಜ್ರ್ಶೀಟ್ ಇಲ್ಲವೇ ಶಿಕ್ಷೆಯಾಗಿದ್ದರೆ ಒಪ್ಪಿಕೊಳ್ಳಬಹುದು. ಯಾವುದೂ ಇಲ್ಲದ ವ್ಯಕ್ತಿಗಳಿಗೆ ಬದುಕಲೂ ಅವಕಾಶ ಕೊಡದೇ ನಿಂದಿಸುವ ಕೆಲಸ ಆಗಬಾರದು. ಯಾವುದೇ ತಪ್ಪು, ಆಪಾದನೆ ಇಲ್ಲದಿದ್ದರೆ ವ್ಯಕ್ತಿ ಬದುಕಲು ಅವಕಾಶವಿದೆ. ಕಾನೂನಿನ ಚೌಕಟ್ಟಿನಲ್ಲಿ ಬದುಕಲು ಅವಕಾಶ ಮಾಡಿ ಕೊಡೋಣ ಎಂದು ತಿಳಿಸಿದರು.
ಇನ್ನೂ ಈ ವಿಚಾರವಾಗಿ ಸಂಸದ ಪಿ.ಸಿ. ಮೋಹನ್ ಅವರು, ಮಾತನಾಡಿ, ಅಂಬೇಡ್ಕರ್ ಅಸೋಸಿಯೇಷನ್, ಆಟೋ ರಿಕ್ಷಾ ಮತ್ತು ಟೆಂಪೋ ಚಾಲಕರ ಗುಂಪುಗಳು ನನ್ನನ್ನು ರಕ್ತದಾನ ಶಿಬಿರಕ್ಕೆ ಆಹ್ವಾನಿಸಿದವು, ಅದು ರಾಷ್ಟ್ರೋತ್ಥಾನದ ಸಹಯೋಗದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು. ಬೇರೆ ಯಾರು ಬರುತ್ತಿದ್ದಾರೆ ಎಂದು ನಾನು ಅವರನ್ನು ಕೇಳಿದೆ. ಅವರು ಆರೋಗ್ಯ ಸಚಿವ ಕೆ ಸುಧಾಕರ್, ತೇಜಸ್ವಿ ಸೂರ್ಯ, ಉದಯ್ ಗರುಡಾಚಾರ್ ಮತ್ತು ಇತರರನ್ನು ಆಹ್ವಾನಿಸಿದ್ದಾರೆ ಎಂದು ಮೋಹನ್ ಹೇಳಿದರು. ನನ್ನ ಮಟ್ಟಿಗೆ ಇದು ಕೇವಲ ರಕ್ತದಾನ ಶಿಬಿರವಾಗಿತ್ತು. ಆದರೆ ಅಲ್ಲಿಗೆ ಹೋದ ನಂತರ ಅದು ತಪ್ಪು ಎಂದು ನನಗೆ ಅರಿವಾಯಿತು ಎಂದು ಹೇಳಿದರು.