ವಾಹನ ಅಪಘಾತ: ಪರಿಹಾರ ಮೊತ್ತದಲ್ಲಿ ಜೀವವಿಮೆ ಕಡಿತಗೊಳಿಸುವಂತಿಲ್ಲ- ಹೈಕೋರ್ಟ್
ಬೆಂಗಳೂರು, ಅ.25. ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ಪರಿಹಾರವನ್ನು ನಿಗದಿ ಮೊತ್ತದಲ್ಲಿ ಅವರು ಜೀವ ವಿಮಾ ಯೋಜನೆ ಮತ್ತು ಪಾಲಿಸಿಗಳಿಂದ ಪಡೆದಿರುವ ಮೊತ್ತವನ್ನು ಕಡಿತಗೊಳಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ.
ಇದರಿಂದಾಗಿ ವಿಮಾ ಕಂಪನಿಗಳು ಇನ್ನು ಮುಂದೆ ಪರಿಹಾರ ನಿಗದಿ ಮಾಡುವಾಗ ಸಂತ್ರಸ್ತರು ಎಲ್ ಐಸಿ ಮತ್ತಿತರ ವಿಮಾ ಕಂಪನಿಗಳಿಂದ ಪಡೆಯುವ ಮೊತ್ತವನ್ನು ಪರಿಗಣಿಸುವಂತಿಲ್ಲ.
ಈ ಕುರಿತಂತೆ ಸುಪ್ರೀಂಕೋರ್ಟ್ ಹಾಗೂ ಹಲವು ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾ. ರಾಜೇಂದ್ರ ಬದಾಮಿಕರ್ ಅವರಿದ್ದ ಏಕಸದಸ್ಯಪೀಠ ಇತ್ತೀಚೆಗೆ ಈ ಆದೇಶವನ್ನು ನೀಡಿದೆ.
"ಕುಟುಂಬದ ಪಿಂಚಣಿ, ನಗದು ಉಳಿತಾಯ, ಷೇರುಗಳು ಮತ್ತು ನಿಶ್ಠಿತ ಠೇವಣಿ ಮತ್ತಿತರವುಗಳನ್ನು ಮೋಟಾರು ವಾಹನ ಅಪಘಾತ ಪ್ರಕರಣಗಳಲ್ಲಿ ಪರಿಗಣಿಸುವಂತಿಲ್ಲ. ಅವುಗಳಿಗೂ ಪರಿಹಾರ ಮೊತ್ತಕ್ಕೂ ಸಂಬಂಧವಿಲ್ಲ. ಸಂತ್ರಸ್ತರಿಗೆ ನ್ಯಾಯಯುತವಾಗಿ ಸಲ್ಲಬೇಕಾದ ಪರಿಹಾರವನ್ನು ಒದಗಿಸಿಕೊಡಲೇಬೇಕು" ಎಂದು ಹೇಳಿರುವ ನ್ಯಾಯಾಲಯು ಯುನೈಟೆಡ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಬೆಂಗಳೂರಿನ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿ(ಎಂಎಸಿಟಿ) ಮೈಂಡ್ ಟ್ರೀಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾಫ್ಟ್ ವೇರ ಎಂಜಿನಿಯರ್ ವಿಶಾಲ್ ಸಿಂಗ್ ಕುಟುಂಬಕ್ಕೆ 42,64,000 ರೂ. ಪರಿಹಾರವನ್ನು ಶೇ.9ರ ಬಡ್ಡಿ ಸೇರಿಸಿ ನೀಡಬೇಕೆಂದು ಆದೇಶಿಸಿತ್ತು.
ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದ ವಿಮಾ ಕಂಪನಿ, ಗುಂಪು ವಿಮೆಯಿಂದ ಮೃತಪಟ್ಟವರ ಕುಟುಂಬದವರಿಗೆ 15 ಲಕ್ಷ ಹಣ ಸಂದಾಯವಾಗಿದೆ. ಹಾಗಾಗಿ ಆ ಹಣವನ್ನು ಪರಿಹಾರದ ಮೊತ್ತದಿಂದ ಕಡಿತಕ್ಕೆ ಆದೇಶ ನೀಡಬೇಕೆಂದು ನ್ಯಾಯಾಲಯದ ಮೊರೆ ಹೋಗಿತ್ತು.
ಪ್ರಕರಣದ ಹಿನ್ನೆಲೆ:
2016ರ ಮೇ 31ರಂದು ರಾತ್ರಿ ಉತ್ತರಹಳ್ಳಿ ಕಡೆಗೆ ನೈಸ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಆತನ ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವಿಶಾಲ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದನು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಬದುಕುಳಿಯದೆ ಜೂ.5ಕ್ಕೆ ಕೊನೆಯುಸಿರೆಳೆದಿದ್ದನು. ಕುಟುಂಬದವರು 50 ಲಕ್ಷ ಪರಿಹಾರ ಕೋರಿ ಎಂಎಸಿಟಿ ಮೊರೆ ಹೋಗಿದ್ದರು. ಆತನಿಗೆ ಪ್ರತಿ ತಿಂಗಳು 26 ಸಾವಿರ ವೇತನವಿತ್ತು ಹಾಗಾಗಿ ಅಧಿಕ ಪರಿಹಾರ ನೀಡಬೇಕೆಂದು ಕೋರಿದ್ದರು.