ಜೂನ್ ಮೊದಲ ವಾರ ಮುಂಗಾರು ಆಗಮನ ಪಕ್ಕಾ
ಬೆಂಗಳೂರು, ಮೇ. 06: ಕಳೆದ ಸಾರಿಗಿಂತ ಈ ಬಾರಿ ಮಾನ್ಸೂನ್ ಆರ್ಭಟಿಸಲಿದ್ದು ಜೂನ್ 5ರಿಂದ ಮುಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ಜೂನ್ 1ಕ್ಕೆ ಕೇರಳ ಪ್ರವೇಶಿಸುವ ನೈಋತ್ಯ ಮಾನ್ಸೂನ್ ಮಾರುತಗಳು ಜೂನ್ 5 ರೊಳಗೆ ರಾಜ್ಯವನ್ನೂ ಪ್ರವೇಶಿಸಲಿವೆ. ಅಂತೆಯೇ ಈ ಬಾರಿ ಮುಂಗಾರು ತಡಮಾಡದೆ ಸರಿಯಾದ ಸಮಯಕ್ಕೆ ರಾಜ್ಯ ಪ್ರವೇಶಿಸಲಿದೆ. ಕಳೆದ ವರ್ಷ 4 ದಿನ ತಡವಾಗಿ ಅಂದರೆ ಜೂನ್9ಕ್ಕೆ ಮುಂಗಾರು ಪ್ರವೇಶ ಮಾಡಿತ್ತು.[ರಣ ಬಿಸಿಲಿಗೆ ದೇಶವೇ ತತ್ತರ, ಮಳೆ ಆಗಮನದ ಕಾತರ]

ಹವಾಮಾನ ತಜ್ಞರು ಹೇಳುವಂತೆ ಈ ಬಾರಿ ಮಳೆ ಆರ್ಭಟಿಸಲಿದೆ. ಕಳೆದ ವರ್ಷ ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆ ಆಗಿರಲಿಲ್ಲ. ಆದರೆ ಈ ಬಾರಿ ಬೇಸಿಗೆಯಲ್ಲಿ ದಾಖಲಾಗಿರುವ ಅಧಿಕ ಉಷ್ಣಾಂಶ ಮಳೆ ಆರ್ಭಟದ ಮೇಲೂ ಪರಿಣಾಮ ಬೀರಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಮಳೆ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರ ಮಳೆಯಾಗಿದೆ. ಇನ್ನೂ ಎರಡು ದಿನ ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.[ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]
ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಬುಧವಾರ ತಡರಾತ್ರಿ ಬೀಸಿದ ಬಿರುಗಾಳಿ ಸಹಿತ ಮಳೆ ಭಾರಿ ಅವಾಂತರ ಸೃಷ್ಟಿಸಿದೆ. ರಾಯಚೂರು ಜಿಲ್ಲೆ ಜೇರಬಂಡಿ ಗ್ರಾಮದಲ್ಲಿ ಮನೆಯ ಮಣ್ಣಿನ ಗೋಡೆ ಕುಸಿದು ಕಟ್ಟೆ ಮಾಳಪ್ಪ (70) ಮೃತಪಟ್ಟಿದ್ದಾರೆ. ವಿವಿಧ ಆಸ್ತಿ ಪಾಸ್ತಿ ಹಾನಿಗೂ ಮಳೆ ಕಾರಣವಾಗಿದೆ.
ಉಳಿದಂತೆ ಚಾಮರಾಜನಗರ, ಬೆಂಗಳುರು ಗ್ರಾಮಾಂತರ ಪ್ರದೇಶ, ಗುಂಡ್ಲುಪೇಟೆ ತಾಲೂಕು, ಚಿಕ್ಕಬಳ್ಳಾಪುರಲ್ಲೂ ಮಳೆಯಾಗಿದೆ. ಬೆಂಗಳೂರಿನ ಚಾಮರಾಜಪೇಟೆ, ಮೆಜೆಸ್ಟಿಕ್, ಮಾರುಕಟ್ಟೆ, ಜಯನಗರ ಸುತ್ತ ಮುತ್ತಲಿನ ಭಾಗದಲ್ಲೂ ಗುರುವಾರ ಸಂಜೆ ಮಳೆ ಸುರಿದ್ದಿದ್ದು ವಾಹನ ಸವಾರರು ಪರದಾಡಬೇಕಾಯಿತು.












Click it and Unblock the Notifications