'ಮಡಿಕೇರಿಯಲ್ಲಿ ಇದೇನ್ ಮಹಾ ಮಳೆ ? ಈ ಬಾರಿ ತಡವಾಯ್ತು'
ಮಡಿಕೇರಿ, ಜೂನ್, 28: "ಇದೇನ್ ಮಹಾ ಮಳೆ ಇಷ್ಟರಲ್ಲೇ ಮಳೆ ಬಂದು ಭೂಮಿಯಡಿಯಿಂದ ಜಲಹುಟ್ಟಿ ಭತ್ತದ ಕೃಷಿ ಕಾರ್ಯ ಆರಂಭ ಮಾಡಬೇಕಿತ್ತು. ಈಗ ಮಳೆ ಸುರಿಯುತ್ತಿದೆ ಇದರಲ್ಲೇನು ವಿಶೇಷವಿಲ್ಲ" ಇದು ಮಡಿಕೇರಿಯ ಹಿರಿಯರೊಬ್ಬರ ಮಾತು.
ಕೊಡಗಿನಲ್ಲಿ ವರ್ಷಧಾರೆ ಕಳೆದ ಎರಡು ದಿನದಿಂದ ಚೇತರಿಕೆ ಕಂಡುಕೊಂಡಿದ್ದು ಭಾರೀ ಮಳೆ ಸುರಿಯುತ್ತಿದೆ. ಜತೆಗೆ ಮೈಕೊರೆಯುವ ಚಳಿಯಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಇದೇ ರೀತಿ ಒಂದು ವಾರಗಳ ಕಾಲ ಸುರಿದರೆ ಅಂತರ್ಜಲ ಹೆಚ್ಚಾಗುವ ನಿರೀಕ್ಷೆ ಇದೆ.[ಮೈದುಂಬಿ ಧುಮ್ಮಿಕ್ಕುತಿಹ ಅಬ್ಬಿ ಫಾಲ್ಸ್ ನತ್ತ ಪ್ರವಾಸಿಗರ ದೌಡು]
ಒಮ್ಮೆಗೆ ಧೋ ಎಂದು ಮಳೆ ಸುರಿಯುತ್ತಿರುವುದರಿಂದ ಜನ ಸಂಕಷ್ಟಕ್ಕೀಡಾಗಿದ್ದಾರೆ. ನಿನ್ನೆ ರಾತ್ರಿಯಿಂದ ಭಾರೀ ಮಳೆ ಸುರಿಯುತ್ತಿರುವುದರಿಂದ ಗ್ರಾಮೀಣ ಪ್ರದೇಶದಿಂದ ಬರುವ ಮಕ್ಕಳು ಶಾಲೆಗೆ ತೆರಳಲು ಸಾಧ್ಯವಾಗಿಲ್ಲ.
ಮಂಜು ಮುಸುಕಿದ ವಾತಾವರಣದಲ್ಲಿ ಭಾರೀ ರಭಸದಿಂದ ಸುರಿಯುತ್ತಿರುವ ಮಳೆಗೆ ಝರಿ, ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಮಳೆಯಿಂದ ಅಲ್ಲಲ್ಲಿ ಮರಗಳು ಬಿದ್ದಿದ್ದು ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಳೆಗೆ ಬಟ್ಟೆಗಳು ಒದ್ದೆಯಾಗುತ್ತಿದ್ದು ವಾರವಾದರೂ ಒಣಗುತ್ತಿಲ್ಲ. ಬೆಳಿಗ್ಗೆ ಗಂಟೆ ಏಳಾದರೂ ಬೆಳಕಾಗುತ್ತಿಲ್ಲ.[ಮೈದುಂಬಿದ ಜೋಗ: ಕರಾವಳಿಯಲ್ಲಿ ಭಾರೀ ಮಳೆ ಸಂಭವ]
'ಮಡಿಕೇರಿಯಲ್ಲಿ ಇದೇನ್ ಮಹಾ ಮಳೆ ? ಈ ಬಾರಿ ತಡವಾಯ್ತು'
ಈ ಬಾರಿ ಬಿಸಿಲಿನ ತಾಪವೂ ಹೆಚ್ಚಿತ್ತು. ಇದೀಗ ಮಳೆ ಜತೆಗೆ ಮೈಕೊರೆಯುವ ಚಳಿಯಿಂದಾಗಿ ಜನ ಹೊರಗೆ ಬರಲು ಕಷ್ಟಪಡುವಂತಾಗಿದೆ. ಮಂಗಳವಾರ ಮುಂಜಾನೆಯಿಂದಲೇ ಮಳೆ ರಭಸದಿಂದ ಸುರಿಯುತ್ತಿದೆ. ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಕಡಿಮೆ ಮಳೆಯಾಗಿದೆ. ಕಳೆದ ವರ್ಷದ ಅರ್ಧದಷ್ಟು ಇದುವರೆಗೆ ಮಳೆಯಾಗಿದೆ.[ಕೊಡಗಿಗೆ ಬಲಗಾಲಿಟ್ಟು ಪ್ರವೇಶಿಸಿದ ಮುಂಗಾರು ಮಳೆ]
ಕಳೆದ ವರ್ಷ ಸುಮಾರು 40 ಇಂಚು ಮಳೆಯಾಗಿದ್ದರೆ, ಈ ಬಾರಿ ಅದರ ಅರ್ಧದಷ್ಟು ಆಗಿದೆ. ಆದುದರಿಂದ ಮಳೆ ಲಯ ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರೀ ಸಂಕಷ್ಟ ಎದುರಿಸಬೇಕಾಗಬಹುದು. ಮಳೆ ಪ್ರವಾಹ ಸ್ಥಿತಿ ಎದುರಿಸಲು ಜಿಲ್ಲಾಡಳಿತ ಇದೀಗ ಸನ್ನದ್ಧವಾಗಿದೆ.