ಕರ್ನಾಟಕದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ, ಎಲ್ಲೆಲ್ಲಿ ಮಳೆ?
ಬೆಂಗಳೂರು, ಜೂನ್ 04: ರಾಜ್ಯದಲ್ಲಿ ಮುಂಗಾರು ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ, ರಾಜ್ಯದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜೂನ್ 6 ಅಥವಾ 7 ರಂದು ಮುಂಗಾರು ರಾಜ್ಯವನ್ನು ಪ್ರವೇಶಿಸಲಿದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿ ವಿವಿಧೆಡೆ ಮಳೆಯಾಗಲಿದೆ.
ಜೂನ್ 3 ಹಾಗೂ 4 ರಂದು ರಾಜ್ಯದಲ್ಲಿ ಭಾರಿ ಮಳೆ, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಈ ಬಾರಿ ಸ್ವಲ್ಪ ತಡವಾಗಿ ಮುಂಗಾರು ಮಳೆ ಕರ್ನಾಟಕ ಪ್ರವೇಶ ಮಾಡಲಿದೆ.ಮುಂದಿನ ವಾರ ರಾಜ್ಯದಲ್ಲಿ ಮುಂಗಾರು ಮಳೆಯ ಸಿಂಚನ ಆರಂಭವಾಗಲಿದೆ. ಈ ವರ್ಷ ಹೆಚ್ಚು ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಜೂನ್ ಅಂತ್ಯದಲ್ಲಿ ಮಳೆಯ ಅಬ್ಬರ
ಜೂನ್ ತಿಂಗಳ ಮಧ್ಯಭಾಗದಿಂದ ಆಚೆಗೆ ಮುಂಗಾರು ಮಳೆಯ ಪ್ರಭಾವ ಹೆಚ್ಚಾಗುವ ಸಾಧ್ಯತೆ ಇದೆ. ಜೂನ್ ತಿಂಗಳ ಮೂರನೇ ವಾರದಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಜೂನ್ ತಿಂಗಳ ಮೊದಲ ಎರಡು ವಾರಗಳಲ್ಲಿ ಮುಂಗಾರು ಮಳೆಯ ಪ್ರಭಾವ ಕಡಿಮೆ ಇರುತ್ತದೆ.
ನಿಧಾನಗತಿಯಲ್ಲಿ ಮುಂಗಾರು
ಜೂನ್ ಮೊದಲಾರ್ಧದಲ್ಲಿ ಮುಂಗಾರು ನಿಧಾನಗತಿಯಲ್ಲಿ ಇರುತ್ತದೆ. ಕಳೆದ ತಿಂಗಳು ಮೇ 21 ಮತ್ತು 27ರ ನಡುವೆ ಎರಡು ಚಂಡಮಾರುತಗಳು ಅಬ್ಬರಿಸಿದ್ದವು. ತುಕ್ತೆ ಮತ್ತು ಯಾಸ್ ಚಂಡಮಾರುತದ ಪ್ರಭಾವ ಕರ್ನಾಟಕದ ಮೇಲೂ ಬೀರಿತ್ತು. ಇದರ ಪರಿಣಾಮವಾಗಿ ಮೇ 31 ರಿಂದ ಜೂನ್ 3ರ ನಡುವೆ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ಆಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರೀಕ್ಷಿಸಿತು. ಅದೇ ರೀತಿಯಾಗಿ ನಿನ್ನೆ ಕೇರಳಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ.
ಯಾವ್ಯಾವ ರಾಜ್ಯಗಳಲ್ಲಿ ಮಳೆ
ಜೂನ್ 5ರ ಬಳಿಕ ಕೇರಳ ಮತ್ತು ಮಾಹೆ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮೂರು ದಿನ ಭಾರೀ ಮಳೆಯಾಗಲಿದೆ. ಈಗಾಗಲೇ ಕೇರಳ, ಅಸ್ಸಾಂ, ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಪ್ರದೇಶ, ಅರುಣಾಚಲ ಪ್ರದೇಶದಲ್ಲಿ ಮಳೆಯಾಗುತ್ತಿದ್ದು, ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲೂ ಇಂದು ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Recommended Video
ಎಲ್ಲೆಲ್ಲಿ ಹೆಚ್ಚು ಮಳೆ
ಕರ್ನಾಟಕದ ಧಾರವಾಡ, ಬೆಳಗಾವಿ, ಗದಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇಂದು ಹೆಚ್ಚು ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಚಾಮರಾಜನಗರ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರ್ಗಿ, ಬೀದರ್, ಚಿಕ್ಕಮಗಳೂರಿನಲ್ಲಿ ಇಂದಿನಿಂದ ಮಳೆಯ ಅಬ್ಬರ ಹೆಚ್ಚಾಗಲಿದೆ.