Get Updates
Get notified of breaking news, exclusive insights, and must-see stories!

ಬ್ಯಾಂಕಿಂಗ್ ಕ್ಷೇತ್ರಕ್ಕೆ ಕರಾವಳಿ ಕೊಡುಗೆ ಅಪಾರ, ಮೋದಿ: ಹಾಗಾದರೆ ಇಲ್ಲಿನ ಬ್ಯಾಂಕ್ ವಿಲೀನಗೊಂಡಿದ್ದು ಯಾಕೆ?

ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿ ಮೋದಿಯವರು ಮೇ ಮೂರರಂದು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆ ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಯ ಮೂಲ್ಕಿಯಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಿದ್ದಾರೆ. ಬಿಜೆಪಿಗೆ ಬಲವಾಗಿ ಬೇರು ಇರುವ ಇಲ್ಲಿ ನಿರೀಕ್ಷೆಯಂತೆ ಭಾರೀ ಜನಬೆಂಬಲ ವ್ಯಕ್ತವಾಗಿದೆ.

"ಭಾರತದ ಆರ್ಥಿಕತೆ ವಿಶ್ವದಲ್ಲಿ ಐದನೇ ಸ್ಥಾನದಲ್ಲಿದೆ, ನಾವು ಮೂರನೇ ಸ್ಥಾನಕ್ಕೆ ಬರಲು ಶ್ರಮಿಸಬೇಕಿದೆ. ಬ್ಯಾಂಕಿಂಗ್ ಕ್ಷೇತ್ರಕ್ಕೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೊಡುಗೆ ಅಪಾರ"ಎಂದು ಪ್ರಧಾನಿಯವರು ಅವಳಿ ಜಿಲ್ಲೆಯನ್ನು ಹಾಡಿ ಹೊಗಳಿದ್ದಾರೆ. ಪ್ರಧಾನಿಯವರ ಭಾಷಣಕ್ಕೂ ಮತ್ತು ಈ ಭಾಗದ ರಾಷ್ಟೀಕೃತ ಬ್ಯಾಂಕುಗಳ ವಿಲೀನಗೊಂಡಿದ್ದಕ್ಕೂ ಈಗ ತಾಳೆ ಹಾಕಲಾಗುತ್ತಿದೆ.

PM Modi Says Contribution of Coastal Karnataka To Banking Sector Is Immense, Then Why Bank amalgamation

ಕರಾವಳಿಯ ಎರಡು ಜಿಲ್ಲೆಗಳನ್ನು ಬ್ಯಾಂಕಿಂಗ್ ಕ್ಷೇತ್ರದ ತವರೂರು ಎಂದೇ ಕರೆಯಲಾಗುತ್ತಿತ್ತು. ಸಿಂಡಿಕೇಟ್ ಬ್ಯಾಂಕ್ ಅನ್ನು 1925ರಲ್ಲಿ ಉಡುಪಿಯ ಮಣಿಪಾಲದಲ್ಲಿ ಟಿ.ಎಂ.ಎ ಪೈ ಸ್ಥಾಪಿಸಿದ್ದರು. ಸೆಪ್ಟಂಬರ್ 2018ರಂದು ಈ ಬ್ಯಾಂಕ್, ರಾಜ್ಯ ಮೂಲದ ಇನ್ನೊಂದು ಬ್ಯಾಂಕ್, ಕೆನರಾ ಬ್ಯಾಂಕ್ ಜೊತೆ ವಿಲೀನಗೊಂಡಿತ್ತು.

ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವಿಜಯಾ ಬ್ಯಾಂಕ್ ಅನ್ನು ಅತ್ತಾವರ ಬಾಲಕೃಷ್ಣ ಶೆಟ್ಟಿ ಅಕ್ಟೋಬರ್ 1931ರಲ್ಲಿ ಸ್ಥಾಪಿಸಿದ್ದರು. ಈ ಬ್ಯಾಂಕ್ ಅನ್ನು ಗುಜರಾತ್ ಮೂಲದ ಬ್ಯಾಂಕ್ ಆಫ್ ಬರೋಡದ ಜೊತೆಗೆ ಸೆಪ್ಟಂಬರ್ 2017ರಲ್ಲಿ ವಿಲೀನಗೊಳಿಸಲಾಗಿತ್ತು. ಸುಮಾರು ಹದಿನಾರು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಇದೇ ರೀತಿ ಉಡುಪಿ ಮೂಲದ ಇನ್ನೊಂದು ಬ್ಯಾಂಕ್ ಆದ ಕಾರ್ಪೋರೇಷನ್ ಬ್ಯಾಂಕ್ ಕೂಡಾ ಮುಂಬೈ ಮೂಲದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಏಪ್ರಿಲ್ 2020ರಲ್ಲಿ ವಿಲೀನಗೊಂಡಿತ್ತು. ಹಾಜಿ ಅಬ್ದುಲ್ಲಾ ಹಾಜಿ ಕಾಸಿಂ ಸಾಹೇಬ್ ಅವರು ಈ ಬ್ಯಾಂಕ್ ಅನ್ನು ಮಾರ್ಚ್ 1906ರಂದು ಸ್ಥಾಪಿಸಿದ್ದರು. ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಎಟಿಎಂ ಜಾಲವನ್ನು ಹೊಂದಿರುವ ಬ್ಯಾಂಕ್ ಎನ್ನುವ ಹೆಗ್ಗಳಿಕೆ ಕಾರ್ಪೋರೇಷನ್ ಬ್ಯಾಂಕಿಗೆ ಇತ್ತು.

PM Modi Says Contribution of Coastal Karnataka To Banking Sector Is Immense, Then Why Bank amalgamation

ಇದೇ ರೀತಿ ರಾಜ್ಯದ ಹೆಮ್ಮೆಯ ಮೈಸೂರು ಬ್ಯಾಂಕ್ ಕೂಡಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಜೊತೆ ವಿಲೀನಗೊಂಡಿತ್ತು. ಸರ್ ಎಂ.ವಿಶ್ವೇಶ್ವರಯ್ಯನವರು ಅಕ್ಟೋಬರ್ 1913ರಂದು ಈ ಬ್ಯಾಂಕ್ ಅನ್ನು ಸ್ಥಾಪಿಸಿದ್ದರು. 10,226 ಸಿಬ್ಬಂದಿಗಳು ಈ ಬ್ಯಾಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಉದ್ಯೋಗಿಗಳು ಒಂದೋ VRS, ಇಲ್ಲವೇ ಎಸ್ಬಿಐ ಸಿಬ್ಬಂದಿಗಳಾಗಿ ಮುಂದುವರಿದಿದ್ದಾರೆ.

ಬ್ಯಾಂಕ್ ಆಫ್ ಬರೋಡ

ಮೈಸೂರು ಬ್ಯಾಂಕ್ ಸೇರಿದಂತೆ ರಾಜ್ಯ ಮೂಲದ ಬ್ಯಾಂಕುಗಳನ್ನು ವಿಲೀನಗೊಳಿಸುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಜೊತೆಗೆ, ವಿಲೀನಗೊಂಡ ಎಲ್ಲಾ ಬ್ಯಾಂಕುಗಳು ಲಾಭದಲ್ಲೇ ನಡೆಯುತ್ತಿದ್ದವು. ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಅನ್ನು ಅಷ್ಟೇನೂ ಪ್ರಾಫಿಟ್ ನಲ್ಲಿರದ ಬ್ಯಾಂಕ್ ಆಫ್ ಬರೋಡದ ಜೊತೆಗೆ ಸೇರಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

ನಂದಿನಿ Vs ಅಮುಲ್ ನಂತೆ ಬ್ಯಾಂಕು ವಿಲೀನ

ನಂದಿನಿ Vs ಅಮುಲ್ ನಂತೆ ಬ್ಯಾಂಕು ವಿಲೀನವೂ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಕೆಲಸವಾಗಿತ್ತು. ಆದರೆ, ಇದ್ಯಾವುದಕ್ಕೂ ಬೆಲೆಕೊಡದ ಕೇಂದ್ರ ಸರಕಾರ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಟ್ಟಿರಲಿಲ್ಲ. ಈಗ, ಕರಾವಳಿಯ ಸಾರ್ವಜನಿಕ ಸಭೆಯಲ್ಲಿ ಈ ಭಾಗದವರಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಯ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯು ಆರ್ಥಿಕ ಹಬ್

"ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯು ಆರ್ಥಿಕ ಹಬ್ ಆಗಿದೆ. ಈ ಎರಡು ಜಿಲ್ಲೆ ಬ್ಯಾಂಕಿಂಗ್ ಕ್ಷೇತ್ರಕ್ಕೆ‌ ವಿಶೇಷ ಕೊಡುಗೆಯನ್ನು ನೀಡಿದೆ" ಎನ್ನುವ ಹೇಳಿಕೆಯನ್ನು ಮೋದಿ ನೀಡಿದ್ದಾರೆ. ಆ ಮೂಲಕ, ಇದೊಂದು ಪಕ್ಕಾ ಚುನಾವಣಾ ಭಾಷಣವೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. ಒಂದು ವೇಳೆ ಅವರ ಮಾತಿನಲ್ಲಿ ಅರ್ಥವಿದ್ದಿದ್ದರೆ ಇಲ್ಲಿನ ಬ್ಯಾಂಕುಗಳನ್ನು ವಿಲೀನಗೊಳಿಸಿದ್ದು ಯಾಕೆ ಎನ್ನುವುದು ಪ್ರಶ್ನೆಯಾಗಿಯೇ ಉಳಿಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+