'ಮುಸ್ಲಿಮರ ಮನಗೆಲ್ಲಲು ಮೋದಿ ಸೂಚನೆ': ಕರ್ನಾಟಕ ಚುನಾವಣೆ ಬಿಜೆಪಿಗೆ ಇಷ್ಟೊಂದು ಕಠಿಣವಾಯಿತೇ?
ಬೆಂಗಳೂರು, ಜನವರಿ 19: ಕರ್ನಾಟಕ ವಿಧಾನಸಭೆಗೆ ಮೂರ್ನಾಲ್ಕು ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಮೂರು ಪಕ್ಷಗಳು ರಾಜ್ಯದ ಜನರ ಮನಸ್ಸನ್ನು ಗೆಲ್ಲುವಲ್ಲಿ ನಿರತವಾಗಿವೆ. ವಿವಿಧ ಪ್ರಬಲ ಸಮುದಾಯಗಳ ಜನರನ್ನು ಮೂರು ವೋಟ್ ಬ್ಯಾಂಕ್ಗಳನ್ನಾಗಿ ಮಾಡಿಕೊಂಡಿರುವ ಮೇಲ್ನೋಟಕ್ಕೆ ಕಂಡುಬರುತ್ತದೆ. ಬಿಜೆಪಿಯು ಕರ್ನಾಟಕದಲ್ಲಿ ಲಿಂಗಾಯತ ಹಾಗೂ ಬ್ರಾಹ್ಮಣ ಸಮುದಾಯಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಕಾಂಗ್ರೆಸ್ ಪಕ್ಷವು ಮುಸ್ಲಿಮರು, ಕುರುಬರು, ದಲಿತರ ಅಹಿಂದ ಮತಗಳ ಆಸರೆಯನ್ನು ಬಯಸುತ್ತ ಬಂದಿದೆ. ಇನ್ನು ಜೆಡಿಎಸ್ ಪಕ್ಷವು ಹಳೇ ಮೈಸೂರು ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಮತಗಳ ಮೇಲೆ ನಿಂತಿದೆ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಯು ಹೊಸದೊಂದು ಬಾಂಬ್ ಸಿಡಿಸಿದೆ. ಇದು ತನ್ನದಲ್ಲದ ಸಿದ್ದಾಂತದ ವಿರುದ್ಧವಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಏನಿದು ಬಿಜೆಪಿಯ ಹೊಸ ಬಾಂಬ್?
ಕರ್ನಾಟಕದ ಚುನಾವಣೆ ಹೊಸ್ತಿಲಲ್ಲಿ ಇರುವಾಗ ಪ್ರಧಾನಿ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ. ನವದೆಹಲಿಯಲ್ಲಿ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಈ ಇಬ್ಬರು ನಾಯಕರು ರಾಜ್ಯದ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, 'ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ, ಮುಸಲ್ಮಾನರ ವಿಶ್ವಾಸ ಗಳಿಸಬೇಕೆಂದು ಮೋದಿ ತಿಳಿಸಿದ್ದಾರೆ' ಎಂಬುದಾಗಿ ಹೇಳಿದ್ದಾರೆ.

ಚುನಾವಣೆ ಗೆಲ್ಲುವ ಕಾರ್ಯತಂತ್ರಗಳ ಕುರಿತು ಚರ್ಚೆ
'ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಯಶಸ್ವಿಯಾಗಿದೆ. ಈ ಸಭೆಯಲ್ಲಿ ನಾನು ಮೋದಿಯವರ ಜೊತೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಚುನಾವಣೆ ಗೆಲ್ಲುವ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದೇನೆ' ಎಂದಿದ್ದಾರೆ. ರಾಜ್ಯದಲ್ಲಿ 140 ಸ್ಥಾನಗಳನ್ನು ಗೆಲ್ಲಬೇಕೆಂಬ ಆಕಾಂಕ್ಷೆಯನ್ನು ನಾವು ಹೊಂದಿದ್ದೇವೆ. ಪಕ್ಷವನ್ನು ಬಲಪಡಿಸಬೇಕಿದೆ. ಬಿಜೆಪಿಯಿಂದ ದೂರವೇ ಉಳಿದಿರುವ ಮುಸ್ಲಿಮರ ಮನಗೆಲ್ಲುವಂತೆ ಮೋದಿ ಹೇಳಿದ್ದಾರೆಂದು ಯಡಿಯೂರಪ್ಪ ತಿಳಿಸಿದ್ದಾರೆ. 'ಈ ಸಭೆಯಲ್ಲಿ ಮುಸ್ಲಿಮರ ವಿಶ್ವಾಸ ಗಳಿಸಬೇಕೆಂದು ಮೋದಿ ಒತ್ತಿಹೇಳಿದ್ದಾರೆ. ನಾವು ಈಗಾಗಲೇ ಮುಸ್ಲಿಮರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ. ಪರಸ್ಪರ ಗೌರವವನ್ನೂ ಪಡೆದುಕೊಳ್ಳುತ್ತಿದ್ದೇವೆ. ಹೀಗಾಗಿ, ಮುಸ್ಲಿಮರ ಮನಸ್ಸನ್ನು ಗೆಲ್ಲಬೇಕಿದೆ ಎಂಬುದಾಗಿ ಮೋದಿ ಹೇಳಿದರು' ಎಂದು ಬಿಎಸ್ವೈ ತಿಳಿಸಿದ್ದಾರೆ.

ಬಿಜೆಪಿಯ ವರಸೆ ಬದಲಾಗುತ್ತಿದೆಯೇ?
ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಂದ ನಂತರ ಹಿಂದೂತ್ವ ಅಜೆಂಡಾಕ್ಕೆ ಹೆಚ್ಚು ಒತ್ತು ನೀಡುತ್ತಿರುವಂತೆ ಕಂಡುಬಂದಿತ್ತು. ಕೋಮುದ್ವೇಷದ ಹಿನ್ನೆಲೆಯಲ್ಲಿ ನಡೆದ ಕೊಲೆಗಳು, ಹಿಜಾಬ್ನಂತಹ ವಿವಾದಗಳು, ಮತಾಂತರ ಮಸೂದೆಯಂತಹ ನಿರ್ಧಾರಗಳು, ಬಿಜೆಪಿ ನಾಯಕರ ಹೇಳಿಕೆಗಳು ಹಿಂದೂತ್ವಕ್ಕೆ ಹೆಚ್ಚು ಒತ್ತು ನೀಡುತ್ತಿರುವಂತೆ ಗೋಚರವಾಗುತ್ತಿತ್ತು. ಆದರೆ, ಕರ್ನಾಟಕದ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ ಹಿಂದೂತ್ವ ಅಜೆಂಡಾವನ್ನು ಬಿಜೆಪಿ ಕಡಿಮೆ ಬಳಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ರಾಜ್ಯದಲ್ಲಿ ಸ್ಪಷ್ಟ ಬಹುಮತ ಬರುವುದಿಲ್ಲವೆಂದು ಬಸವರಾಜ ಬೊಮ್ಮಾಯಿ ವರಿಷ್ಠರಿಗೆ ಈಗಾಗಲೇ ತಿಳಿಸಿದ್ದಾರೆ. ಇದು ಬಿಜೆಪಿಯ ಸ್ಥೈರ್ಯಕ್ಕೆ ಪೆಟ್ಟು ಮಾಡಿದೆ ಎಂಬ ಮಾತುಗಳೂ ಕೇಳಿಬಂದಿದೆ.

ಬಿಜೆಪಿಯ ಹೊಸ ವರಸೆಗೆ ಕಾರಣವೇನಿರಬಹುದು?
ಆಡಳಿತ ವಿರೋಧಿ ಅಲೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಚುನಾವಣೆಗೂ ಮುನ್ನ ಬಿಜೆಪಿ ಹೊಸ ವರಸೆಯನ್ನು ಶುರುಮಾಡಿಬಹುದು ಎಂಬ ಚರ್ಚೆಗಳು ಹರಿದಾಡುತ್ತಿವೆ. ಬೊಮ್ಮಾಯಿ ಸರ್ಕಾರದ ಮುಸ್ಲಿಂ ವಿರೋಧಿ ಅಜೆಂಡಾಗಳು ಬಿಜೆಪಿಗೆ ಮಾರಕವಾಗಿ ಪರಿಣಮಿಸಬಹುದು ಎಂಬ ಆತಂಕಗಳು ವರಿಷ್ಠರಿಗೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಇದಕ್ಕೆ ಕಾರಣ, ಕರ್ನಾಟಕದ ಒಟ್ಟು 6.11 ಕೋಟಿ ಜನಸಂಖ್ಯೆಯಲ್ಲಿ 78.93 ಲಕ್ಷ ಜನಸಂಖ್ಯೆಯಲ್ಲಿ 78.93 (ಶೇ. 12.92) ಲಕ್ಷ ಮುಸ್ಲಿಮರಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಮುಸ್ಲಿಮರ ಮನವೊಲಿಸುವ ಮಾತುಗಳನ್ನಾಡಿದ್ದಾರೆ ಎನ್ನಲಾಗುತ್ತಿದೆ.












Click it and Unblock the Notifications