ಲೀಟರ್ ಹಾಲಿಗೆ 30 ರು. ಕೊಟ್ಟರೆ ಸಾಕು: ರೇವಣ್ಣ
ಬೆಂಗಳೂರು, ಜನವರಿ 02 : 'ನಂದಿನಿ ಹಾಲಿನ ದರವನ್ನು ಲೀಟರ್ಗೆ 4 ರೂ. ಹೆಚ್ಚಳ ಮಾಡಿರುವುದು ಚುನಾವಣಾ ಗಿಮಿಕ್' ಎಂದು ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಆರೋಪಿಸಿದರು. ಸರ್ಕಾರ ಹಾಲಿನ ದರವನ್ನು ಏರಿಕೆ ಮಾಡಲು ಶುಕ್ರವಾರ ಒಪ್ಪಿಗೆ ನೀಡಿದ್ದು, ಜನವರಿ 5ರಿಂದ ನೂತನ ದರ ಜಾರಿಗೆ ಬರಲಿದೆ.
ಶನಿವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರೇವಣ್ಣ ಅವರು ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹೆಚ್ಚಳ ಮಾಡಿದ ಹಾಲಿನ ದರದಲ್ಲಿ ಕನಿಷ್ಠ 3 ರೂ. ಹಾಲು ಉತ್ಪಾದಕರಿಗೆ ನೀಡುವ ಬಗ್ಗೆ ಸರ್ಕಾರ ಖಾತ್ರಿ ಪಡಿಸಬೇಕು ಎಂದು ಒತ್ತಾಯಿಸಿದರು. [ಹೊಸವರ್ಷದ ಶುಭಾಶಯ, ನಂದಿನಿ ಹಾಲಿನ ದರ 4 ರು. ಏರಿಕೆ!]

'ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಎದುರಾಗುತ್ತಿದ್ದು, ಈ ಚುನಾವಣೆಯಲ್ಲಿ ಮತದಾರರನ್ನು ಓಲೈಸುವ ದೃಷ್ಟಿಯಿಂದ ಹಾಲಿನ ಬೆಲೆಯನ್ನು ಸರ್ಕಾರ ಹೆಚ್ಚಳ ಮಾಡಿದೆ. ಹಾಲಿನ ದರ ಹೆಚ್ಚಳ ಮಾಡುವುದರಿಂದ ಸರ್ಕಾರ ರೈತರು ಮತ್ತು ಗ್ರಾಹಕರ ವಿಶ್ವಾಸ ಕಳೆದುಕೊಳ್ಳಬೇಕಾಗುತ್ತದೆ' ಎಂದು ರೇವಣ್ಣ ಎಚ್ಚರಿಕೆ ನೀಡಿದರು.
'ಬೆಂಗಳೂರು ಹಾಲು ಒಕ್ಕೂಟವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ಹಾಲಿನ ದರವನ್ನು ಹೆಚ್ಚಳ ಮಾಡಬಾರದು. ಒಂದು ವೇಳೆ ಈ ರೀತಿ ಹಾಲಿನ ದರ ಹೆಚ್ಚಳ ಮಾಡಿದರೆ, ಖಾಸಗಿ ಹಾಲು ಮಾರಾಟಗಾರರಿಗೆ ಲಾಭವಾಗಲಿದೆ. ಸಹಕಾರಿ ಸಂಘಗಳಿಗೆ ಹೊಡೆತ ಬೀಳಲಿದೆ' ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.
ಲೀಟರ್ಗೆ 30 ರು ಕೊಟ್ಟರೆ ಸಾಕು : 'ಹಾಸನ ಹಾಲು ಒಕ್ಕೂಟದ 6 ಲಕ್ಷ ಲೀಟರ್ ಹಾಲನ್ನು ಬೆಂಗಳೂರಿನಲ್ಲಿ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರೆ, ಲೀಟರ್ಗೆ 30ರೂ.ನಂತೆ ಮಾರಾಟ ಮಾಡುತ್ತೇವೆ. ನಮ್ಮಲ್ಲಿ ಹೆಚ್ಚಳವಾದ ಹಾಲನ್ನು ಹೈದರಾಬಾದ್ಗೆ ಲೀಟರ್ಗೆ 20 ರೂ.ನಂತೆ ನೀಡುತ್ತಿದ್ದೇವೆ. ಇದನ್ನು ಬೆಂಗಳೂರಿನಲ್ಲೇ ಮಾರಾಟ ಮಾಡುತ್ತೇವೆ' ಎಂದು ರೇವಣ್ಣ ಹೇಳಿದರು.
ಹಾಲಿನ ದರ 4 ರೂ. ಏರಿಕೆ : ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್) ಮೂಲಕ ಸರಬರಾಜು ಮಾಡುವ ಎಲ್ಲ ರೀತಿಯ ಹಾಲಿನ ದರವನ್ನು ಪ್ರತಿ ಲೀಟರ್ಗೆ 4 ರೂ. ಹೆಚ್ಚಿಸಲು ಸರ್ಕಾರ ಶುಕ್ರವಾರ ಒಪ್ಪಿಗೆ ನೀಡಿದೆ. ಜನವರಿ 5ರಿಂದ ನೂತನ ದರ ಜಾರಿಗೆ ಬರಲಿದೆ.












Click it and Unblock the Notifications