BK Hariprasad: ಸಚಿವ ಸ್ಥಾನದ ಆಕಾಂಕ್ಷಿ ಬಿಕೆ ಹರಿಪ್ರಸಾದ್ಗೆ ಮಹತ್ವದ ಹುದ್ದೆ
ಬೆಂಗಳೂರು, ಫೆಬ್ರವರಿ 15: ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಏಕೆ ಸಚಿವ ಸ್ಥಾನ ಸಿಕ್ಕಿಲ್ಲ?. 2023ರ ವಿಧಾನಸಭೆ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಹಲವು ನಾಯಕರು, ಕಾರ್ಯಕರ್ತರನ್ನು ಕಾಡುತ್ತಿರುವ ಪ್ರಶ್ನೆ ಇದು. ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಬಿ. ಕೆ. ಹರಿಪ್ರಸಾದ್ಗೆ ಮಹತ್ವದ ಹುದ್ದೆಯನ್ನು ನೀಡಲಾಗಿದೆ.
ಶುಕ್ರವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಲವು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಕಾಂಗ್ರೆಸ್ ಉಸ್ತುವಾರಿಗಳನ್ನು ಬದಲಾವಣೆ ಮಾಡಿದ್ದಾರೆ. ಹಿಮಾಚಲ ಪ್ರದೇಶ, ಹರ್ಯಾಣ, ಮಧ್ಯ ಪ್ರದೇಶ, ತಮಿಳುನಾಡು, ಜಾರ್ಖಂಡ್, ತೆಲಂಗಾಣ ಸೇರಿ ವಿವಿಧ ರಾಜ್ಯಗಳಿಗೆ ಹೊಸ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ.

ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಕಾಂಗ್ರೆಸ್ ಹಿರಿಯ ನಾಯಕ ಬಿ. ಕೆ. ಹರಿಪ್ರಸಾದ್ ಅವರನ್ನು ಹರ್ಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಮೂಲಕ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು, ಅಸಮಾಧಾನಗೊಂಡಿದ್ದ ಹರಿಪ್ರಸಾದ್ಗೆ ರಾಷ್ಟ್ರಮಟ್ಟದ ಹುದ್ದೆಯನ್ನು ನೀಡಲಾಗಿದೆ.
ರಾಜೀನಾಮೆಗೆ ಮುಂದಾಗಿದ್ದರು: 2023ರ ಚುನಾವಣೆ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು ಬಿ. ಕೆ. ಹರಿಪ್ರಸಾದ್. ಆದರೆ ಸಚಿವ ಸ್ಥಾನ ಸಿಗದ ಕಾರಣ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಹಿರಿಯ ನಾಯಕರ ಮನವೊಲಿಕೆ ಬಳಿಕ ಸುಮ್ಮನಾಗಿದ್ದರು.
ಬಿಜೆಪಿ ಸರ್ಕಾರವಿದ್ದಾಗ ಬಿ. ಕೆ. ಹರಿಪ್ರಸಾದ್ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿದ್ದರು. ಕಾಂಗ್ರೆಸ್ ಹೈಕಮಾಂಡ್ ಜೊತೆ ಉತ್ತಮ ನಂಟು ಹೊಂದಿರುವ ಬಿ. ಕೆ. ಹರಿಪ್ರಸಾದ್ಗೆ ಏಕೆ ಸಚಿವ ಸ್ಥಾನ ಸಿಗಲಿಲ್ಲ. ಬಿ. ಕೆ. ಹರಿಪ್ರಸಾದ್ ಡಿ. ಕೆ. ಶಿವಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರೂ ಸಹ ಸಚಿವ ಸ್ಥಾನ ಕೈ ತಪ್ಪಿತ್ತು, ಇದು ಭಾರೀ ಚರ್ಚೆಗೆ ಕಾರಣವಾಗಿತ್ತು.
ಈಡಿಗ ಕೋಟಾದಲ್ಲಿ ಬಿ. ಕೆ. ಹರಿಪ್ರಸಾದ್ ಬದಲು ಸೊರಬ ಶಾಸಕ ಮಧು ಬಂಗಾರಪ್ಪಗೆ ಸಚಿವ ಸ್ಥಾನ ನೀಡಲಾಗಿದೆ ಎಂಬುದು ಪಕ್ಷದ ವಲಯಗಳ ಮಾಹಿತಿ. ಸಿದ್ದರಾಮಯ್ಯ ಮಧು ಬಂಗಾರಪ್ಪ ಸಂಪುಟ ಸೇರ್ಪಡೆಗೆ ಸಮ್ಮತಿಸಿದ್ದರು. ಆದ್ದರಿಂದ ಹೈಕಮಾಂಡ್ ಹಸಿರು ನಿಶಾನೆ ತೋರಿತು ಎಂಬ ಮಾಹಿತಿ ಇದೆ.
ಹಿರಿತನದ ಆಧಾರದ ಮೇಲೆ ಬಿ. ಕೆ. ಹರಿಪ್ರಸಾದ್ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದರು. ಸಚಿವ ಸ್ಥಾನ ಕೈತಪ್ಪಿದ ಬಳಿಕ ಹಲವು ಬಾರಿ ಅವರು ಬಹಿರಂಗವಾಗಿ ಸಿದ್ದರಾಮಯ್ಯ ವಿರುದ್ಧ ಟೀಕೆಗಳನ್ನು ಮಾಡಿದ್ದರು. ಈಗ ಅವರಿಗೆ ಹರ್ಯಾಣ ಕಾಂಗ್ರೆಸ್ ಉಸ್ತುವಾರಿ ನೀಡಲಾಗಿದೆ.
ಬಿ. ಕೆ. ಹರಿಪ್ರಸಾದ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. 16 ರಾಜ್ಯಗಳ ಉಸ್ತುವಾರಿಯಾಗಿ ಅವರು ಕೆಲಸ ನಿರ್ವಹಣೆ ಮಾಡಿದ ಅಪಾರ ಅನುಭವ ಹೊಂದಿದ್ದಾರೆ. ಆದರೆ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ ಎಂಬುದು ಅಸಮಾಧಾನಕ್ಕೆ ಕಾರಣವಾಗಿತ್ತು. ಈಗ ಸಂಪುಟ ವಿಸ್ತರಣೆ/ ಪುನಾರಚನೆ ಚರ್ಚೆಗಳು ನಡೆಯುವ ಹೊತ್ತಿಗೆ ಹರಿಪ್ರಸಾದ್ ಅವರನ್ನು ಹರ್ಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಿಸಲಾಗಿದೆ.
ಸಚಿವ ಸ್ಥಾನ ಕೈತಪ್ಪಿದ ಬಳಿಕ ಮಾತನಾಡಿದ್ದ ಬಿ. ಕೆ. ಹರಿಪ್ರಸಾದ್, "ನನಗೆ ಸಿಎಂ ಮಾಡುವುದು ಗೊತ್ತು, ಅಧಿಕಾರದಿಂದ ಇಳಿಸುವುದು ಗೊತ್ತು. ನಮ್ಮ ಸಮುದಾಯದವರು ರಾಜಕೀಯವಾಗಿ ಮುಂದೆ ಬರುತ್ತಿಲ್ಲ. ನಾವು ಯಾರದ್ದೋ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಎಂದೆನಿಸುತ್ತಿದೆ" ಎಂದು ಹೇಳಿಕೆ ನೀಡಿದ್ದರು.
"ಮಂತ್ರಿ, ಮುಖ್ಯಮಂತ್ರಿ ಸೇರಿ ಯಾವುದೇ ಅಧಿಕಾರಕ್ಕಾಗಿ ಲಾಬಿ ಮಾಡಿಲ್ಲ. ಅದರ ಮೇಲೆ ಆಸೆಯೂ ಇಲ್ಲ. ಸಾಮಾಜಿಕ ನ್ಯಾಯದ ಪರವಾದ ನನ್ನ ಧ್ವನಿ ಅಡಗಿಸಲು ಸಾಧ್ಯವಿಲ್ಲ" ಎಂದು ಸಾಮಾಜಿಕ ಜಾಲತಾಣದಲ್ಲಿ ಬಿ. ಕೆ. ಹರಿಪ್ರಸಾದ್ ಪೋಸ್ಟ್ ಸಹ ಹಾಕಿದ್ದರು.












Click it and Unblock the Notifications