ಮತ್ತೆ ವಿದೇಶಕ್ಕೆ ಹೊರಟು ನಿಂತ್ರು ನಮ್ಮ ಶಾಸಕರು
ಬೆಂಗಳೂರು, ಏ.30: ಕರ್ನಾಟಕದ ಶಾಸಕರ ಮತ್ತೊಂದು ತಂಡ ಅಧ್ಯಯನಕ್ಕಾಗಿ ವಿದೇಶ ಪ್ರವಾಸ ಕೈಗೊಳ್ಳಲು ಸಜ್ಜಾಗಿ ನಿಂತಿದೆ. ಸುಮಾರು 15 ಶಾಸಕರ ತಂಡ ವಿದೇಶ ಪ್ರವಾಸಕ್ಕೆ ಹೊರಟಿದ್ದು, ಇಬ್ಬರು ಶಾಸಕರು ಮಾತ್ರ ತಾವು ವಿದೇಶ ಪ್ರವಾಸ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕೆಲವು ತಿಂಗಳ ಹಿಂದೆ ಶಾಸಕರ ವಿದೇಶದ ಬಗ್ಗೆ ಕರ್ನಾಟಕದಲ್ಲಿ ಬಿಸಿ-ಬಿಸಿ ಚರ್ಚೆಯಾಗುತ್ತಿತ್ತು. ಬರ ಪರಿಸ್ಥಿತಿ ಇರುವಾಗ ಶಾಸಕರು ವಿದೇಶ ಪ್ರವಾಸ ಕೈಗೊಳ್ಳಬಾರದು ಎಂಬ ಆಗ್ರಹ ಕೇಳಿಬಂದಿತ್ತು. ಸದ್ಯ ಮತ್ತೊಮ್ಮೆ ಶಾಸಕರು ವಿದೇಶಕ್ಕೆ ಹೊರಟು ನಿಂತಿದ್ದು, ಹೊ ವಿವಾದ ಹುಟ್ಟುಹಾಕುವ ಸಾಧ್ಯತೆ ಇದೆ. [ಶಾಸಕರ ವಿದೇಶ ಪ್ರವಾಸದ ಬಗ್ಗೆ ಗೌರ್ನರ್ ಗರಂ]

ವಿಧಾನಸಭೆಯ ಭವರಸೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 15 ಶಾಸಕರು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲು ಸಿದ್ಧರಾಗಿದ್ದಾರೆ. ಆದರೆ, ಈ ಸಮಿತಿಯಲ್ಲಿರುವ ಶಾಸಕರಾದ ವೈ.ಎಸ್.ವಿ.ದತ್ತಾ ಮತ್ತು ಕೆ.ಎಸ್.ಪುಟ್ಟಣ್ಣಯ್ಯ ತಾವು ವಿದೇಶ ಪ್ರವಾಸ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಯಾವ ಶಾಸಕರು ಹೋಗುತ್ತಾರೆ : ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ನೇತೃತ್ವದಲ್ಲಿ ವಿದೇಶ ಪ್ರವಾಸಕ್ಕೆ ಸುಮಾರು 15 ಶಾಸಕರು ತೆರಳಲು ಸಜ್ಜಾಗಿದ್ದಾರೆ. ಆದರೆ, ಕಡೂರು ಶಾಸಕ ವೈ.ಎಸ್.ವಿ.ದತ್ತಾ ಮತ್ತು ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಾವು ವಿದೇಶ ಪ್ರವಾಸ ಹೊಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಉಳಿದಂತೆ ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ ಖಂಡ್ರೆ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ರಾಯಭಾಗ ಶಾಸಕ ದುರ್ಯೋಧನ ಐಹೊಳೆ, ಸಿದ್ದು ಬಿ.ನ್ಯಾಮಗೌಡ, ವಿಜಯಾನಂದ ಕಾಶೆಪ್ಪನವರ್, ಆನಂದ್ ಸಿ.ಮಾಮನಿ, ಹಿರೇಕೆರುರು ಶಾಸಕ ಯುಬಿ ಬಣಕಾರ್, ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಮಲ್ಲಿಕಾರ್ಜುನ ಖೂಬಾ ಮುಂತಾದವರು ತೆರಳಿದ್ದಾರೆ.
ಕೆಲವು ತಿಂಗಳ ಹಿಂದೆ ಶಾಸಕರು ವಿದೇಶ ಪ್ರವಾಸ ಹೋದಾಗ ರಾಜ್ಯದಲ್ಲಿ ಬರಪರಿಸ್ಥಿತಿ ಇತ್ತು. ಆದ್ದರಿಂದ ಭಾರೀ ವಿರೋಧ ಕೇಳಿಬಂದಿತ್ತು. ಸದ್ಯ ಸಹ ಬರ ಪರಿಸ್ಥಿತಿ ಇದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಶಾಸಕರು ಮಾತ್ರ ವಿದೇಶದ ವಿಮಾನವೇರಲು ಸಜ್ಜಾಗಿ ನಿಂತಿದ್ದಾರೆ.












Click it and Unblock the Notifications