ಸುಲಿಗೆ ಆರೋಪ: ಬಂಧನ ಭೀತಿಯಲ್ಲಿ ಮಾಜಿ ಎಂಎಲ್ ಸಿ ಶ್ರೀಕಾಂತ್ ಘೋಟ್ನೇಕರ್
ಬೆಂಗಳೂರು, ಏ.26. ಸುಲಿಗೆ ಆರೋಪದಲ್ಲಿ ಮಾಜಿ ವಿಧಾನಪರಿಷತ್ ಸದಸ್ಯ ಶ್ರೀಕಾಂತ್ ಘೊಟ್ನೇಕರ್ ಬಂಧನ ಭೀತಿ ಎದುರಿಸುತ್ತಿದ್ದಾರೆ.
ಅತ್ತ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಳಿಸುತ್ತಿದ್ದಂತೆಯೇ ಇತ್ತ ಲೋಕಾಯುಕ್ತರಿಗೆ ಅವರ ವಿರುದ್ಧ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಆರಂಭಿಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಸಂಕಷ್ಟ ಎದುರಿಸುತ್ತಿರುವ ಕಾಂಗ್ರೆಸ್ ನ ಮಾಜಿ ಎಂಎಲ್ ಸಿ ಶ್ರೀಕಾಂತ್ ಘೊಟ್ನೇಕರ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಆಲಿಸಿದ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಮೇಲೆ ಗಂಭೀರ ಪ್ರಕರಣವಾಗಿದೆ, ಇನ್ನೂ ತನಿಖೆ ನಡೆಯುತ್ತಿದೆ, ಈ ಹಂತದಲ್ಲಿ ಜಾಮೀನು ನೀಡಲಾಗುದು ಎಂದು ನ್ಯಾಯಾಲಯ ನಿರಾಕರಿಸಿದೆ.
ಪ್ರಕರಣದ ಹಿನ್ನೆಲೆ:
ಕಾಂಗ್ರೆಸ್ ನ ಮಾಜಿ ಎಂಎಲ್ ಸಿ ಶ್ರೀಕಾಂತ್ ಘೋಟ್ನೇಕರ್ ವಿರುದ್ಧ ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಸಂತ್ ನೀಲಕಂಠ ಚೊರ್ಲೇಕರ್ ದೂರು ನೀಡಿದ್ದರು. ಹಳಿಯಾಳದ ಕ್ಷತ್ರಿಯ ಮರಾಠ ಭವನಕ್ಕೆ ಸ್ಲ್ಯಾಬ್ ಅಳವಡಿಸುವ ಟೆಂಡರ್ ಕಾಮಗಾರಿಯನ್ನು ತಾನು ಪಡೆದಿದೆ. ಆದರೆ ದೇಣಿಗೆ ಹಣದಿಂದ ಸ್ಲಾಬ್ ಹಾಕಿಸಿದ್ದ ಶ್ರೀಕಾಂತ್ ಘೊಟ್ನೇಕರ್, ಕ್ಷತ್ರಿಯ ಮರಾಠ ಪರಿಷತ್ತಿನಿಂದ ಬಿಲ್ ಮಾಡಿಸಿದ್ದರು. ಜೊತೆಗೆ ಮಲೆನಾಡು ಅಭಿವೃದ್ಧಿ ಪ್ರಾಧಿಕಾರದಿಂದ ಹಣ ಪಾವತಿ ಮಾಡಿಸಿದ್ದರು. ಟೆಂಡರ್ ಪಡೆದಿದ್ದ ವಸಂತ್ ಗೆ 3.71 ಲಕ್ಷ ರೂ ಪಾವತಿಯಾಗಿತ್ತು . ಆ ಹಣ ತನಗೆ ನೀಡುವಂತೆ ಎಂಎಲ್ಸಿ ಶ್ರೀಕಾಂತ್ ಬೆದರಿಕೆ ಹಾಕಿದ್ದಲ್ಲದೆ, 3.33 ಲಕ್ಷದ ಚೆಕ್ ಗೆ ಬಲವಂತದ ಸಹಿ ಪಡೆದರೆಂದು ದೂರಿನಲ್ಲಿ ಆರೋಪಿಸಲಾಗಿತ್ತು.
ರಾಜ್ಯಪಾಲರ ಅನುಮತಿ:
ಈ ಮಧ್ಯೆ ಇದೇ ಪ್ರಕರಣದ ಸಂಬಂಧ ಕಾಂಗ್ರೆಸ್ ಮಾಜಿ ಎಂಎಲ್ ಸಿ ಶ್ರೀಕಾಂತ್ ಘೋಟ್ನೇಕರ್ ವಿರುದ್ಧ ಕ್ರಿಮಿನಲ್ ವಿಚಾರಣಾ ಪ್ರಕ್ರಿಯೆ ಮುಂದುವರಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಲೋಕಾಯುಕ್ತರಿಗೆ ಅನುಮತಿ ನೀಡಿದ್ದಾರೆ.
ಲೋಕಾಯುಕ್ತರು ಮಾಡಿದ್ದ ಶಿಫಾರಸನ್ನು ಅಂಗೀಕರಿಸಿರುವ ರಾಜ್ಯಪಾಲರು, ವೈಯಕ್ತಿಕ ಹಿತಾಸಕ್ತಿಗಾಗಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕಾಗಿ, ಅಷ್ಟೂ ಹಣವನ್ನು ಬಡ್ಡಿ ಸಮೇತ ವಸೂಲು ಮಾಡಲು ಅನುವು ಮಾಡಿಕೊಟ್ಟಿದ್ದಾರೆ.
"ಪ್ರಕರಣದ ವಿವರಗಳನ್ನು ಗಮನಿಸಿದರೆ ಮಾಜಿ ಎಂಎಲ್ ಸಿ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ಹಾಗಾಗಿ ಅವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು''ಎಂದು ರಾಜ್ಯಪಾಲರು ಅನುಮತಿ ಪತ್ರದಲ್ಲಿ ಹೇಳಿದ್ದಾರೆ.












Click it and Unblock the Notifications