ಬಸ್ ದರ ಇಳಿಕೆ ಅಸಾಧ್ಯ, ಸಚಿವರು ನೀಡಿದ ಕಾರಣಗಳು
ಬೆಂಗಳೂರು, ನ.6 : ಡೀಸೆಲ್ ದರ ಇಳಿಕೆಯಾಗಿದೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರ ಕಡಿಮೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸದ್ಯ ಪ್ರಯಾಣದರವನ್ನು ಕಡಿಮೆ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ರಾಮಲಿಂಗಾ ರೆಡ್ಡಿ ಅವರು, ಅಧಿಕಾರಿಗಳು ನೀಡಿದ ಶಿಫಾರಸ್ಸನ್ನು ಒಪ್ಪಿದ್ದು ಸದ್ಯಕ್ಕೆ ದರ ಕಡಿಮೆ ಮಾಡುವುದು ಬೇಡ ಎಂಬ ನಿರ್ಧಾರ ತೆಗೆದುಕೊಂಡಿದ್ದಾರೆ. ಬಸ್ ಪ್ರಯಾಣ ದರ ಇಳಿಸುವುದಿಲ್ಲ ಎಂದು ನೇರವಾಗಿ ಹೇಳದ ಸಚಿವರು ಪ್ರಸ್ತುತ ಪರಿಸ್ಥಿತಿಯಲ್ಲಿ ದರ ಕಡಿಮೆ ಮಾಡುವುದು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. [ದರ ಇಳಿಕೆಗೆ ಅಧಿಕಾರಿಗಳ ವಿರೋಧ]

ಸಾರಿಗೆ ಸಚಿವರ ಪತ್ರಿಕಾಗೋಷ್ಠಿ ಮುಖ್ಯಾಂಶಗಳು
* ಸಾರಿಗೆ ಸಂಸ್ಥೆಗಳಿಗೆ ಸಾಲದ ಹೊರೆ ಜತೆಗೆ ಹೆಚ್ಚುವರಿ ವೆಚ್ಚಗಳೂ ಇವೆ. ಡೀಸೆಲ್ ದರ ಇಳಿಕೆಯಿಂದ ಆಗುವ ಉಳಿತಾಯ ಈ ಹೊರೆಯಿಂದ ತಪ್ಪಿಸಿಕೊಳ್ಳುವಷ್ಟಿದೆ. ಪ್ರಯಾಣ ದರ ಇಳಿಸಿದರೆ ಹೆಚ್ಚುವರಿ ವೆಚ್ಚದ ಹೊರೆಯೂ ಸಂಸ್ಥೆಗಳ ಮೇಲೆ ಬೀಳುತ್ತದೆ.
* ಡೀಸೆಲ್ ದರ ಇಳಿಕೆಯಿಂದಾಗಿ ಕೆಎಸ್ಆರ್ಟಿಸಿಗೆ 53.55 ಕೋಟಿ, ಬಿಎಂಟಿಸಿಗೆ 33.35 ಕೋಟಿ, ಎನ್ಡಬ್ಲ್ಯುಕೆಆರ್ಟಿಸಿಗೆ 28.25 ಕೋಟಿ, ಎನ್ಇಕೆಆರ್ಟಿಸಿಗೆ 22.25 ಕೋಟಿ ಸೇರಿದಂತೆ ಒಟ್ಟು 137.40 ಕೋಟಿ ರೂ. ಉಳಿತಾಯವಾಗುತ್ತದೆ.
* ಈ ವರ್ಷ ಸಂಸ್ಥೆಯ ಸಿಬ್ಬಂದಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲು ಒಟ್ಟು 129.10 ಕೋಟಿ ರೂ. ಹೆಚ್ಚುವರಿ ವೆಚ್ಚವಾಗುತ್ತದೆ. ಆದ್ದರಿಂದ ಉಳಿಯುವುದು ಕೇವಲ 8.3 ಕೋಟಿ ರೂ.
* ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದು, ಸಾಲದ ಹೊರೆಯೂ ಇದೆ. ಆದ್ದರಿಂದ ಪ್ರಯಾಣ ದರವನ್ನು ಸದ್ಯಕ್ಕೆ ಕಡಿಮೆ ಮಾಡಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳ ಜೊತೆ ಈ ವಿಚಾರವಾಗಿ ಚರ್ಚೆ ಮಾಡಲಾಗುವುದು, ಆಗ ದರ ಕಡಿಮೆ ಮಾಡಿದರೆ ಆಗುವ ನಷ್ಟಕ್ಕೆ ಸರ್ಕಾರದಿಂದ ಅನುದಾನ ಕೇಳಲು ಸಾಧ್ಯವಾಗುತ್ತದೆ.
* ಮಾರ್ಕೊಪೋಲೋ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ನರ್ಮ್ ಯೋಜನೆಯಡಿ ಖರೀದಿಸಿದ ಬಸ್ಗಳು ಸಂಸ್ಥೆಗೆ ನಷ್ಟ ಉಂಟುಮಾಡುತ್ತಿವೆ. ಆದ್ದರಿಂದ ಅವಧಿಗೆ ಮುನ್ನವೇ ಅವುಗಳ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
* ಬಿಎಂಟಿಸಿಗೆ 98 ಮತ್ತು ಕೆಎಸ್ಆರ್ಟಿಸಿಗೆ 45 ಮಾರ್ಕೊಪೋಲೋ ಬಸ್ಗಳನ್ನು ಖರೀದಿ ಮಾಡಲಾಗಿದೆ. ಆದರೆ, ಗುಣಮಟ್ಟದ ಕೊರತೆಯಿಂದಾಗಿ ಬಸ್ಸುಗಳ ಓಡಾಟದಿಂದ ಪ್ರತಿ ಕಿ.ಮೀಗೆ 27 ರೂ. ನಷ್ಟವಾಗುತ್ತಿದೆ.












Click it and Unblock the Notifications