ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತಿದೆ: ಪ್ರಿಯಾಂಕ್ ಹೀಗಂದಿದ್ದು ಯಾರಿಗೆ?
ಖರ್ಗೆ ಕುಟುಂಬಕ್ಕೆ ಸೇರಿದ ಟ್ರಸ್ಟ್ ಸರ್ಕಾರಕ್ಕೆ ನಿವೇಶನಗಳನ್ನು ವಾಪಸ್ ನೀಡಲು ಮುಂದಾಗಿರುವ ವಿಚಾರ ರಾಜಕೀಯ ಜಗಳಕ್ಕೆ ಕಾರಣವಾಗಿದೆ. ಸದ್ಯ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ನಾಯಕರ ನಡುವೆ ಇದೇ ವಿಚಾರವಾಗಿ ವಾಕ್ಸಮರ ಮುಂದುವರಿದಿದೆ.
ಪ್ರಿಯಾಂಕ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಲವು ಆರೋಪಗಳನ್ನು ಮಾಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಪ್ರಿಯಾಂಕ್, ವಿಜಯೇಂದ್ರರವರೇ, ನೀವು ಕಾನೂನಿನ ಪಾಠ ಹೇಳುವುದು ಕಳ್ಳನೊಬ್ಬ ಸತ್ಸಂಗದಲ್ಲಿ ಪ್ರವಚನ ನೀಡಿದಂತೆ ಭಾಸವಾಗುತ್ತದೆ! ಎಂದು ವ್ಯಂಗ್ಯ ಮಾಡಿದ್ದಾರೆ.

ಪೋಕ್ಸೋ ಪ್ರಕರಣವನ್ನು ಎದುರಿಸುತ್ತಿರುವ ಪೂಜ್ಯ ತಂದೆಯವರ ಸುಪುತ್ರ, ಅಕ್ರಮ ಹಣ ವರ್ಗಾವಣೆ ಪ್ರಕರಣ ಎದುರಿಸುತ್ತಿರುವ ವಿಜಯೇಂದ್ರ ಅವರು ನಿಯಮ, ಕಾನೂನು, ನೈತಿಕತೆ ಎಂಬ ಪದಗಳನ್ನು ಬಳಸುವುದು ಸ್ಟ್ಯಾಂಡ್ ಅಪ್ ಕಾಮಿಡಿ ಎನಿಸುತ್ತದೆ ಎಂದು ಲೇವಡಿ ಮಾಡಿದ್ದಾರೆ.
ಸಿದ್ದಾರ್ಥ ವಿಹಾರ ಟ್ರಸ್ಟ್ ನಿವೇಶನ ಹಿಂದಿರುಗಿಸಿಲ್ಲ, ನಿವೇಶನ ಹಸ್ತಾಂತರವೇ ಆಗದೆ ನಿವೇಶನ ಹಿಂದುರಿಗಿಸಲು ಸಾಧ್ಯವಾಗುವುದಿಲ್ಲ. ನಿವೇಶನಕ್ಕಾಗಿ ಸಲ್ಲಿಸಿದ್ದ ಕೋರಿಕೆಯನ್ನು ಹಿಂಪಡೆಯಲಾಗಿದೆ, ಬಿಜೆಪಿಯವರು ತಮ್ಮ ತಿಳುವಳಿಕೆಯನ್ನು, ಹೇಳಿಕೆಗಳನ್ನು ಸರಿಪಡಿಸಿಕೊಳ್ಳಲಿ ಎಂದು ಸ್ಪಷ್ಟನೆ ನೀಡಿದ್ದಾರೆ.

ಸಿದ್ದಾರ್ಥ ವಿಹಾರ ಟ್ರಸ್ಟ್ ಸಿಎ ನಿವೇಶನ ಪಡೆದಿದ್ದು ಹೇಗೆ ಕಾನೂನುಬಾಹಿರವಾಗುತ್ತದೆ ಎಂಬುದನ್ನು ಇದುವರೆಗೂ ಬಿಜೆಪಿಯವರಿಗೆ ನಿರೂಪಿಸಲು ಸಾಧ್ಯವಾಗಿಲ್ಲ, ಈಗಲಾದರೂ ಹೇಳುವ ಪ್ರಯತ್ನ ಮಾಡಲಿ. ಆರ್ಟಿಜಿಎಸ್ ಮೂಲಕ ಪಡೆಯುವ ಲಂಚ ಹೇಗೆ ಕಾನೂನಾತ್ಮಕವಾಗುತ್ತದೆ ಎನ್ನುವುದನ್ನು ಹೇಳುವಿರಾ? ಎಂದು ಪ್ರಶ್ನಿಸಿದ್ದಾರೆ.
ದುಬೈ, ಮಾರಿಷಸ್ನಲ್ಲಿ ಎಷ್ಟು ಅಕ್ರಮ ಹಣ ಹೂಡಿಕೆ ಮಾಡಿದ್ದೀರಿ ಎಂಬ ನಿಮ್ಮದೇ ಪಕ್ಷದ ಯತ್ನಾಳ್ ಅವರ ಪ್ರಶ್ನೆಗೆ ಉತ್ತರಿಸುವಿರಾ? ತಮ್ಮ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸ್ ದಾಖಲಾಗಿದ್ದೇಕೆ ಎಂದು ವಿವರಿಸುವಿರಾ? ಪ್ರೇರಣಾ ಟ್ರಸ್ಟ್ ಹೆಸರಲ್ಲಿ ಕೊಳ್ಳೆ ಹೊಡೆದ ಭೂಮಿ ಎಷ್ಟು ಎಂಬುದನ್ನು ಬಹಿರಂಗಪಡಿಸುವಿರಾ? ಕೋವಿಡ್ ಸಮಯದಲ್ಲಿ ಕಲ್ಕತ್ತಾ ಮೂಲದ ಕಂಪೆನಿಗಳಿಂದ ನಿಮಗೆ ಸಂಬಂಧಿಸಿದ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಏಕೆ ಎನ್ನುವುದನ್ನು ಹೇಳುವಿರಾ? ಎಂದು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ವಿಜಯೇಂದ್ರ ಹೇಳಿದ್ದೇನು?: ಖರ್ಗೆ ಅವರ ಕುಟುಂಬದ ಸಿದ್ದಾರ್ಥ ಟ್ರಸ್ಟ್ಗೆ ಕೆಐಎಡಿಬಿಯಿಂದ ಮಂಜೂರಾಗಿದ್ದ 5 ಎಕರೆ ಸಿಎ ನಿವೇಶನವನ್ನು ಬೇಷರತ್ ಹಿಂದಿರುಗಿಸಿರುವ ನಿಲುವು ಗಮನಿಸಿದರೆ ಅಕ್ರಮ ಮಂಜೂರಾತಿ ಪ್ರಕರಣ ನ್ಯಾಯಾಲಯದ ಮೆಟ್ಟಿಲು ಏರುವ ಮುನ್ನ ಖರ್ಗೆ ಕುಟುಂಬ ಮುಡಾ ಹಗರಣದ ರೂವಾರಿ ಸಿದ್ದರಾಮಯ್ಯನವರ ಹಾದಿಯನ್ನೇ ತುಳಿದಿರುವುದು ಸಾಬೀತಾಗುತ್ತಿದೆ ಎಂದು ಬಿ.ವೈ.ವಿಜಯೇಂದ್ರ ಟೀಕಿಸಿದ್ದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟ ಹಗರಣಗಳಲ್ಲಿ ಭಾಗಿಯಾದವರು ರಾಜ್ಯ ಬಿಜೆಪಿ ನಡೆಸುತ್ತಿರುವ ಹೋರಾಟಗಳಿಗೆ ಮಣಿಯುತ್ತಿರುವುದರ ನಿದರ್ಶನವೂ ಇದಾಗಿದೆ. ಕಾಂಗ್ರೆಸ್ ಸರ್ಕಾರದ ಸರಣೀ ಭ್ರಷ್ಟಚಾರಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸೇರಿದಂತೆ ಭಾಗಿಯಾಗಿರುವ ಅನೇಕರು ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಕಾಲವೇ ಉತ್ತರ ಹೇಳಲಿದೆ. ಆಮಿಷಗಳನ್ನು ಒಡ್ಡಿ ಅಧಿಕಾರಕ್ಕೆ ಬಂದು ಲೂಟಿಯನ್ನೇ ಗುರಿಯಾಗಿಸಿಕೊಂಡಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರ ತೊಲಗಿಸುವವರೆಗೂ ರಾಜ್ಯ ಬಿಜೆಪಿಯು ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದ್ದರು.












Click it and Unblock the Notifications