India vs Pakistan: "ನಮ್ಮ ವಿದೇಶಾಂಗ ನೀತಿಯನ್ನು ಹೊರಗುತ್ತಿಗೆ ನೀಡಲಾಗಿದೆಯೇ?"
India's foreign policy: ಆಪರೇಷನ್ ಸಿಂಧೂರ ಕಾರ್ಯಚರಣೆಯ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದ ಕಾಂಗ್ರೆಸ್ ಇದೀಗ ಕದನ ವಿರಾಮ ಘೋಷಣೆಯಾದ ವಿಧಾನಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರವು ಯಾವ ಆಧಾರದ ಮೇಲೆ ಕದನ ವಿರಾಮವನ್ನು ಘೋಷಿಸಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತನ್ನು ನಾವು ಕೇಳುವ ಅವಶ್ಯಕತೆ ಏನಿದೆ ಎಂದು ಕರ್ನಾಟಕದ ಹಲವು ಸಚಿವರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರಿದಿದೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿರುವ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವು ನೆನ್ನೆ ರಾತ್ರಿ 8 ಎಂದಿನಂತೆ ಜ್ಞಾನ ದರ್ಶನ್ ಅರ್ಥಾತ್ ಏಕಪಾತ್ರಾಭಿನಯ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಮೊದಲು, ಅವರ ಸ್ನೇಹಿತ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.

ನನ್ನ ಮಧ್ಯಸ್ಥಿಕೆ ಹಾಗೂ ಆಡಳಿತದಿಂದಲೇ ಭಾರತ ಮತ್ತು ಪಾಕಿಸ್ತಾನದ ನಡುವೆ ತಕ್ಷಣದಿಂದಲೇ ಕದನ ವಿರಾಮ ಘೋಷಣೆಯಾಗಿದೆ. ಈ ಕದನ ವಿರಾಮವನ್ನು ಸ್ಥಾಪಿಸಲು ನಮ್ಮ ಸರ್ಕಾರ ಸಹಾಯ ಮಾಡಿತ್ತು. ಅಲ್ಲದೇ ಈ ಕದನ ವಿರಾಮವು ಶಾಶ್ವತವಾದದ್ದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ಇದನ್ನು ನಿಲ್ಲಿಸೋಣ... ನಿಲ್ಲಿಸೋಣ. ನೀವು ಅದನ್ನು (ಸಂಘರ್ಷ ಅಥವಾ ಕದನ) ನಿಲ್ಲಿಸಿದರೆ, ನಾವು ವ್ಯಾಪಾರ ಮಾಡುತ್ತೇವೆ. ನೀವು ಅದನ್ನು ನಿಲ್ಲಿಸದಿದ್ದರೆ, ನಾವು ಯಾವುದೇ ವ್ಯಾಪಾರ ಮಾಡುವುದಿಲ್ಲ. ನಾವು ಪಾಕಿಸ್ತಾನದೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿದ್ದೇವೆ. ನಾವು ಭಾರತದೊಂದಿಗೆ ಬಹಳಷ್ಟು ವ್ಯಾಪಾರ ಮಾಡಲಿದ್ದೇವೆ. ನಾವು ಇದೀಗ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ನಾವು ಶೀಘ್ರದಲ್ಲೇ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಕದನ ವಿರಾಮದ ವಿಚಾರವಾಗಿ ಹಾಗೂ ವ್ಯಾಪಾರ ಒಪ್ಪಂದವನ್ನು ರದ್ದು ಮಾಡುತ್ತೇವೆ ಎಂದು ಮೂರನೇ ಬಾರಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೋಪ (ಕೆಂಪು ಕಣ್ಣಿನೊಂದಿಗಿನ ಘರ್ಜನೆ) ಈಗ ಎಲ್ಲಿ ಹೋಯಿತು ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಮುಂದುವರಿದು ನಮ್ಮ ವಿದೇಶಾಂಗ ನೀತಿಯನ್ನು ಹೊರಗುತ್ತಿಗೆ ನೀಡಲಾಗಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ರಿಯಾಕ್ಟ್ ಮಾಡಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತೀವ್ರ ತರಾಟೆಯನ್ನು ತೆಗೆದುಕೊಂಡಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಇಂದಿರಾ ಗಾಂಧಿ ಅವರ ನಿಜವಾದ ಉತ್ತರಾಧಿಕಾರಿ ಅಂತ ಭಾವಿಸಿದ್ದಾರೆಯೇ ಇಲ್ಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (INC) ತನ್ನ ರಾಷ್ಟ್ರೀಯವು ತನ್ನ ಸಂವಹನವನ್ನು ಜೂನಿಯರ್ ಖರ್ಗೆ ಅವರಿಗೆ ಹೊರಗುತ್ತಿಗೆ ನೀಡಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಮಾನ್ಯ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕಾ ಖರ್ಗೆ ಅವರೇ ಕಲಬುರಗಿಯ ಜನರು SSLC/ 10 ನೇ ತರಗತಿಯ ಬೋರ್ಡ್ ಪರೀಕ್ಷೆಯ ಕಾರ್ಯಕ್ಷಮತೆಯಲ್ಲಿ ಕಳಪೆ ಪ್ರದರ್ಶನ ತೋರಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಲಬುರಗಿ ಏಕೆ ಕೆಳ ಮಟ್ಟದಲ್ಲಿದೆ ಎಂದು ಅಲ್ಲಿನ ಜನ ಕೇಳುತ್ತಿದ್ದಾರೆ. ವಿದೇಶಾಂಗ ನೀತಿ ಮತ್ತು ರಾಜತಾಂತ್ರಿಕತೆಯ ಬಗ್ಗೆ ಕಾಮೆಂಟ್ ಮಾಡುವ ಮೊದಲು, ನೀವು ಕಲಬುರಗಿಯ ಮಾನವ ಅಭಿವೃದ್ಧಿಯ ಬಗ್ಗೆ ನಿಮ್ಮ ಜ್ಞಾನ ದರ್ಶನವನ್ನು ದಯವಿಟ್ಟು ಸ್ವಲ್ಪ ವಿಸ್ತರಿಸಬಹುದೇ ಎಂದು ಖರ್ಗೆ ಅವರ ಕಾಲೆಳೆದಿದ್ದಾರೆ.
ಮುಂದುವರಿದು ಹಿರಿಯ ಸಹೋದರನಾಗಿ ನಿಮಗೆ ನನ್ನ ಸಣ್ಣ ಸಲಹೆ. ನಿಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ರಾಹುಲ್ ಗಾಂಧಿ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡು ಇದ್ದಕ್ಕಿದ್ದಂತೆ ಇಂದಿರಾ ಗಾಂಧಿಯನ್ನು ನೆನಪಿಸಿಕೊಳ್ಳಲು ಪ್ರಾರಂಭಿಸಿದ್ದಾರೆ. ಒಂದು ದಿನ ನೀವು ಇಂದಿರಾ ಗಾಂಧಿಯವರ ಉತ್ತರಾಧಿಕಾರಿಯಾಗಬಹುದು ಎಂಬ ಭ್ರಮೆಯಲ್ಲಿರಬೇಡಿ. ನಿಮ್ಮ ತಂದೆ ಪಕ್ಷಕ್ಕೆ 50 ವರ್ಷಗಳ ಸೇವೆ ಸಲ್ಲಿಸಿದ ನಂತರ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಕರ್ನಾಟಕದ ಮುಖ್ಯಮಂತ್ರಿಯಾಗಲು ಸಹ ಸಾಧ್ಯವಾಗಲಿಲ್ಲ. ಇಂದಿರಾ ಗಾಂಧಿ ಅವರ ಉತ್ತರಾಧಿಕಾರಿಯಾಗುವ ಕನಸು ಕಾಣಲು ನಿಮಗೆ ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
ಅಲ್ಲದೇ ಪಾಕಿಸ್ತಾನವು ತನ್ನ ಪತ್ರಿಕಾಗೋಷ್ಠಿಗಳಲ್ಲಿ ಭಾರತದ ಮೇಲೆ ದಾಳಿ ಮಾಡಲು ಮತ್ತು ಅವಮಾನಿಸಲು ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವೀಡಿಯೊ ಹೇಳಿಕೆಗಳನ್ನು ಬಳಸುತ್ತಿದೆ. ಅಲ್ಲದೇ ತನ್ನನ್ನು ತಾನು ಮುಗ್ಧ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಪಾಕಿಸ್ತಾನವು ತನ್ನ ಸಂವಹನವನ್ನು / ಕಮ್ಯುನಿಕೇಷನ್ ಅನ್ನು ಭಾರತೀಯ ಕಾಂಗ್ರೆಸ್ಗೆ ಹೊರುಗುತ್ತಿಗೆ ನೀಡಿದೆಯೇ ಎಂದು ಪ್ರಶ್ನಿಸಿದ್ದಾರೆ.
ಯುದ್ಧದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ: ಜೆಡಿಎಸ್!
ಯುದ್ಧದ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಜೆಡಿಎಸ್ ದೂರಿದೆ. ಈ ಸಂಬಂಧ ಸರಣಿ ಟ್ವೀಟ್ಗಳನ್ನು ಮಾಡಿದೆ. "ಯುದ್ಧದ ಕ್ರೆಡಿಟ್ ಸೇನೆಗೆ ಸೇರಬೇಕು" ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಆದರೆ, ಹೈಲು ಪೈಲು "ಕರ್ನಾಟಕ ಯುವ ಪ್ರದೇಶ ಕಾಂಗ್ರೆಸ್"ನವರು ಸೈನಿಕರಿಗೆ ಸಲ್ಲಬೇಕಾದ ಗೆಲುವಿನ ಶ್ರೇಯಸ್ಸನ್ನು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ದುರ್ಬಳಕೆ ಮಾಡಿ
ಕೊಳ್ಳುತ್ತಿದ್ದಾರೆ. ಫ್ಲೆಕ್ಸ್ಗಳನ್ನು ಹಾಕಿ ವಿಧಾನಸೌಧದ ಸೌಂದರ್ಯವನ್ನು ರಾಜ್ಯ ಕಾಂಗ್ರೆಸ್ ಪಕ್ಷ ಹಾಳುಮಾಡಿದೆ ಎಂದು ಹೇಳಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆ ನಡೆದರೆ. ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತ್ರ ನಡೆಯಲಿದೆ. ಈ ವಿಚಾರದಲ್ಲಿ ಭಾರತದ ನಿಲುವು ಸ್ಪಷ್ಟವಾಗಿದೆ. POK ವಿಚಾರದಲ್ಲಿ ಮೂರನೇ ವ್ಯಕ್ತಿ ಅಥವಾ ಮೂರನೇ ದೇಶದ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ವಿಶ್ವ ಸಮುದಾಯಕ್ಕೆ ಪ್ರಧಾನಿ ಮೋದಿಯವರು ರವಾನಿಸಿದ್ದಾರೆ.
ಜೊತೆಗೆ ಭಯೋತ್ಪಾದನೆ- ವ್ಯಾಪಾರ, ಭಯೋತ್ಪಾದನೆ- ಮಾತುಕತೆಗಳು ಒಟ್ಟಿಗೆ ಮಾಡಲು ಸಾಧ್ಯವಿಲ್ಲ.. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಆಗಲ್ಲ ಎಂದು ಉಗ್ರ ಪೋಷಕ ಪಾಕಿಸ್ತಾನಕ್ಕೆ ಕಠಿಣ ಸಂದೇಶ ನೀಡಿದ್ದಾರೆ ಎಂದು ಟ್ವೀಟ್ ಮಾಡಲಾಗಿದೆ.












Click it and Unblock the Notifications