Lakshmi Hebbalkar: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸಚಿವೆ ಹೆಬ್ಬಾಳ್ಕರ್ ಹೇಳಿದ್ದೇನು?
ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 13 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಚೇತರಿಸಿಕೊಂಡ ಹಿನ್ನೆಲೆ ಡಿಸ್ಚಾರ್ಜ್ ಆಗಿದ್ದಾರೆ.
ಆಸ್ಪತ್ರೆಯಿಂದ ಹೊರ ಬಂದ ನಂತರ ಅವರು ಸಚಿವೆ ಹೆಬ್ಬಾಳ್ಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದೊಂದು ದುರ್ಘಟನೆ, ಆಗಬಾರದಿತ್ತು. ನಾನು ಬದುಕಿನ ಕೊನೆಯ ಹಂತವನ್ನು ನೋಡಿ ಬಂದಿದ್ದೇನೆ. ಜೀವನದ ಹೋರಾಟ ಮಾಡಿ ಮತ್ತೆ ಬದುಕಿಳಿದಿದ್ದೇನೆ ಎಂದು ಹೇಳಿದ್ದಾರೆ.

ಇಂದು ನಾನು ಬದುಕಿಳಿದಿರಲು ಎಲ್ಲರ ಆಶೀರ್ವಾದವೇ ಕಾರಣ. ಇದಕ್ಕೆಲ್ಲ ಹಿರಿಯರ, ತಂದೆ ತಾಯಿಯ ಆಶೀರ್ವಾದವೂ ಕಾರಣ. ಈ ಸಂದರ್ಭದಲ್ಲಿ ನಾನು ಬಹಳಷ್ಟು ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ರಾಜ್ಯದ ಮಠಾಧೀಶರು, ಪೂಜ್ಯರು ನಾನು ಶೀಘ್ರ ಗುಣಮುಖರಾಗಲಿ ಎಂದು ಆಶೀರ್ವದಿಸಿದರು. ಇದೇ ನನಗೆ ಬಹಳಷ್ಟು ಧೈರ್ಯ ತಂದುಕೊಟ್ಟಿತು ಎಂದಿದ್ದಾರೆ.
ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಹಾಲಿ ಹಾಗೂ ಮಾಜಿ ಶಾಸಕರು, ಸಚಿವರೆಲ್ಲರೂ ಆಸ್ಪತ್ರೆಗೆ ಖುದ್ದಾಗಿ ಬಂದು ನನ್ನ ಆರೋಗ್ಯ ವಿಚಾರಿಸಿದರು. ಶೀಘ್ರ ಗುಣಮುಖರಾಗುವಂತೆ ಧೈರ್ಯದ ಮಾತುಗಳನ್ನಾಡಿದರು. ರಣದೀಪ್ ಸಿಂಗ್ ಸುರ್ಜೇವಾಲ ಅವರು ಕೂಡ ಬಂದು ಯೋಗಕ್ಷೇಮ ವಿಚಾರಿಸಿದರು. ಅವರೆಲ್ಲರಿಗೂ ನಾನು ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಮುಖ್ಯವಾಗಿ ನನಗೆ ಚಿಕಿತ್ಸೆ ನೀಡಿದ ಡಾ.ರವಿ ಪಾಟೀಲ್ ಅವರ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ಇನ್ನು ಕ್ಷೇತ್ರದ ಎಲ್ಲ ಮತದಾರರು, ನನಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದ. ನನಗೆ ನಿಜಕ್ಕೂ ಈ ಕ್ಷಣ ಪುನರ್ಜನ್ಮ ಎನಿಸುತ್ತಿದೆ ಎಂದು ಭಾವುಕರಾಗಿದ್ದಾರೆ.

ಈ ಮಾರ್ಚ್ನಲ್ಲಿ ಬಜೆಟ್ ಮಂಡನೆ ಇದೆ. ಹಾಗಾಗಿ ನನ್ನ ಮೇಲೆ ಬಹಳ ಜವಾಬ್ದಾರಿ ಇದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಕೆಲಸ ಮಾಡುತ್ತಿದ್ದೇನೆ. ಸದ್ಯ ನನಗೆ ಇನ್ನೂ ವಿಶ್ರಾಂತಿ ಪಡೆಯಬೇಕಿದೆ. ವೈದ್ಯರು ಮೂರು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಸಚಿವೆ ಹೇಳಿದ್ದಾರೆ.
ಜ.14ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಅಂಬಡಗಟ್ಟಿ ಬಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು.
ಈ ಘಟನೆ ಬಗ್ಗೆ ಮಾತನಾಡಿದ ಸಚಿವೆ, ಸಕ್ರಾಂತಿಯಂದು ಹಟ್ಟಿಹೊಳಿ ವೀರಭದ್ರೇಶ್ವರ ದೇವಸ್ಥಾನ ಹಾಗೂ ಮಲಪ್ರಭಾ ನದಿ ದಂಡೆಯಲ್ಲಿ ಪುಣ್ಯ ಸ್ಥಾನಕ್ಕೆ ಹೋಗುತ್ತಿದ್ದೆವು. ಹೀಗಾಗಿ ಮೊದಲೇ ಯೋಜನೆ ಹಾಕಿಕೊಂಡು ಪ್ರಯಾಣ ಬೆಳೆಸಿದ್ದೆವು. ತುರ್ತಾಗಿ ತೆರಳಿದ ಕಾರಣ ಅಂದು ಎಸ್ಕಾರ್ಟ್ನವರಿಗೆ ಹೇಳಲಿಲ್ಲ. ಕೊನೆಗೆ ಈ ದುರಂತ ನಡೆದು ಹೋಯಿತು ಎಂದು ವಿವರಿಸಿದ್ದಾರೆ.
ಇತ್ತೀಚೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಹೇಳಿಕೆ ಬಗ್ಗೆಯೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂತವರನ್ನು ಕಲ್ಲು ಹೃದಯ ಅಥವಾ ಹೃದಯವೇ ಇಲ್ಲದ ಜನ ಎನ್ನಬಹುದು. ಛಲವಾದಿ ಅವರ ಆರೋಪಗಳ ಬಗ್ಗೆ ನಾನು ಏನೂ ಮಾತನಾಡಲ್ಲ ಎಂದು ತಿರುಗೇಟು ನೀಡಿದ್ದಾರೆ.












Click it and Unblock the Notifications