ಸಿದ್ದರಾಮಯ್ಯ ವಿರುದ್ಧ ಪ್ರಚೋದನಕಾರಿ ಹೇಳಿಕೆ; ಸದನದಲ್ಲಿ ಕಾಂಗ್ರೆಸ್ ಧರಣಿ, ಕೈ ನಾಯಕರ ಜತೆಗಿನ ಸಂಧಾನ ಏನಾಯ್ತು.?
ಚುನಾವಣೆಯಲ್ಲಿ ನೇರ ನೇರ ಫೈಟ್ ಮಾಡದೆ, ಹಿಂದಿನಿಂದ ಜನರನ್ನು ಪ್ರಚೋದನೆ ಮಾಡುತ್ತಾರೆ ಎಂದು ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್ ಹೇಳಿದ್ದಾರೆ.
ಬೆಂಗಳೂರು,ಫೆಬ್ರವರಿ16: ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ವಿರುದ್ದ ಪ್ರಚೋದನಕಾರಿ ಹೇಳಿಕೆ ನೀಡಿರುವ ಸಚಿವ ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯಲ್ಲಿ ವಿರೋಧ ಪಕ್ಷದ ಉಪ ನಾಯಕ ಯು.ಟಿ ಖಾದರ್ ಆಗ್ರಹಿಸಿದ್ದಾರೆ.
ಈ ಕುರಿತು ಗುರುವಾರ ಶೂನ್ಯ ವೇಳೆಯಲ್ಲಿ ಸಿದ್ದರಾಮಯ್ಯ ಕುರಿತಾಗಿ ಸಚಿವ ಅಶ್ವತ್ಥ ನಾರಾಯಣ ವಿವಾದಾತ್ಮಕ ಹೇಳಿಕೆಯನ್ನ ಪ್ರಸ್ತಾಪ ಮಾಡಿದ ಅವರು, ಕಳೆದ ಒಂದು ತಿಂಗಳಿಂದ ದ್ವೇಷ ಭಾಷಣ ಮಾಡಲಾಗುತ್ತಿದೆ. ಉಳ್ಳಾಲ, ತುಮಕೂರಿನಲ್ಲಿ ಮಾತನಾಡಿದ್ದಾರೆ, ಇದು ಅಂತ್ಯ ಕಾಣಬೇಕು ಎಂದು ಆಗ್ರಹಿಸಿದರು. ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ಮೀರ್ ಸಾದಿಕ್ ವಂಶಸ್ಥರು ತುಂಬಾ ಜನ ಇದ್ದಾರೆ. ಚುನಾವಣೆಯಲ್ಲಿ ನೇರ ನೇರ ಫೈಟ್ ಮಾಡದೆ, ಹಿಂದಿನಿಂದ ಜನರನ್ನು ಪ್ರಚೋದನೆ ಮಾಡುತ್ತಾರೆ ಸಚಿವರ ವಿರುದ್ದ ಸ್ವಯಂಪ್ರೇರಿತ ಕೇಸ್ ದಾಖಲು ಮಾಡಬೇಕು ಎಂದು ಹೇಳಿದರು.

ಇದೇನು ಸರ್ವಾಧಿಕಾರವೇ ಎಂದು ಪ್ರಿಯಾಂಕ್ ಖರ್ಗೆ ಕಿಡಿ
ವಿರೋಧ ಪಕ್ಷದ ನಾಯಕರಿಗೆ ರಾಜ್ಯದಲ್ಲಿ ರಕ್ಷಣೆ ಇಲ್ಲ ಅಂದ್ರೆ ಹೇಗೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಶ್ವತ್ಥ ನಾರಾಯಣ ಹೇಳಿಕೆಗೆ ಕಾಂಗ್ರೆಸ್ ಸದಸ್ಯರ ವಿರೋಧ ವ್ಯಕ್ತವಾಗಿದ್ದು, ಇದೇನು ಸರ್ವಾಧಿಕಾರವೇ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.

ನೋವಾಗಿದ್ದರೆ ವಿಷಾಧ ವ್ಯಕ್ತಪಡಿಸುತ್ತೇನೆ ಎಂದ ಅಶ್ವತ್ಥ ನಾರಾಯಣ್
ಸಿದ್ದರಾಮಯ್ಯ ಅವರ ಬಗ್ಗೆ ಅಗೌರವವಾಗಿ ಮಾತನಾಡಿಲ್ಲ.ಟಿಪ್ಪು ಬಗ್ಗೆ ವೈಭವೀಕರಿಸಿರೋ ಬಗ್ಗೆ ಉಲ್ಲೇಖ ಮಾಡಿದ್ದೇನೆ, ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಬೇಕು ಅಂತ ಹೇಳಿದ್ದೇನೆ. ಅವರ ಭಾವನೆಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಕಾಂಗ್ರೆಸ್ ಸದಸ್ಯರ ಗದ್ದಲದ ನಡುವೆ ಸಚಿವ ಅಶ್ವತ್ಥ ನಾರಾಯಣ್ ಸ್ಪಷ್ಟನೆ ನೀಡಿದ್ದಾರೆ.
ಇನ್ನೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಮಾತಿಗೆ ಅಡ್ಡ ಹಾಕಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದ ಪ್ರತಿಭಟನೆ ನಡೆಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ಪ್ರತಿಭಟನೆಯಿಂದ ಕೋಪಗೊಂಡ ಸ್ವೀಕರ್ ಕಾಂಗ್ರೆಸ್ ಸದಸ್ಯರ ವಿರುದ್ದ ಅಸಮಾಧಾನ ಹೊರಹಾಕಿದರು.

ಸದನದಿಂದ ಹೊರ ಹಾಕಬೇಕಾಗುತ್ತದೆ ಎಂದ ಸ್ಪೀಕರ್ ಕಾಗೇರಿ
ಇನ್ನೂ ಸಚಿವ ಅಶ್ವತ್ಥ್ ನಾರಾಯಣ್ ಅವರ ಹೇಳಿಕೆಯನ್ನ ಖಂಡಿಸಿದ ಸದನದ ಬಾವಿಗಿಳಿದ ಈಶ್ವರ್ ಖಂಡ್ರೆ ವಿರುದ್ದ ಸ್ಪೀಕರ್ ಕಾಗೇರಿಯವರು ಗರಂ ಆಗಿದ್ದಾರೆ. ಸದನ ಅಂದ್ರೆ ಏನಂದುಕೊಂಡಿದ್ದೀರಿ? ನನ್ನ ಅಧಿಕಾರ ಪೂರ್ಣ ಪ್ರಮಾಣದಲ್ಲಿ ಚಲಾಯಿಸಲು ಅವಕಾಶ ಕೊಡಬೇಡಿ. ಸದನದಿಂದ ಹೊರಗೆ ಹಾಕಲಾ? ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷಕ್ಕಾದರೂ ಶೋಭೆ ತರುತ್ತಾ? ನಿಮ್ಮಂತಹವರು ಆಯ್ಕೆಯಾಗಿ ಬರುವುದು ಸದನಕ್ಕೆ ಅಗೌರವ. ನಿಮಗೆ ಮಾತ್ರ ಬಿಪಿ ಬರುತ್ತಾ? ನಮಗೂ ಬಿಪಿ ಬರಲ್ವಾ? ಸದನದಿಂದ ಹೊರ ಹಾಕಬೇಕಾಗುತ್ತದ ಎಂದು ಸ್ಪೀಕರ್ ಕಾಗೇರಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಸದಸ್ಯರ ಧರಣಿ ಹಿನ್ನೆಲೆ ಸದನವನ್ನ ಮುಂದೂಡಿದ ಸ್ವೀಕರ್
ಇನ್ನೂ ಸ್ಪೀಕರ್ ಕಾಗೇರಿ ಅವರ ಹೇಳಿಕೆಯಿಂದ ಬೇಸರಗೊಂಡ ಈಶ್ವರ್ ಖಂಡ್ರೆ, ನಿಮ್ಮ ಹೇಳಿಕೆ ಸರಿ ಇಲ್ಲವೆಂದು ವಾದ ಮಾಡಿದರು ಈ ವೇಳೆ ಕಾಂಗ್ರೆಸ್ ಸದಸ್ಯರ ಗದ್ದಲ ಹೆಚ್ಚದ ಹಿನ್ನೆಲೆ ಸದನವನ್ನ 15 ನಿಮಿಷಗಳ ಕಾಲ ಸ್ವೀಕರ್ ಕಾಗೇರಿಯವರು ಮುಂದೂಡಿದರು.
ಸ್ಪೀಕರ್ ಕಾಗೇರಿಯವರ ಕಚೇರಿಯಲ್ಲಿ ಸಂಧಾನ ಸಭೆಯಲ್ಲಿ ಮಾಧುಸ್ವಾಮಿ, ಕೃಷ್ಣಬೈರೇಗೌಡ, ಯು ಟಿ ಖಾದರ್ ಸೇರಿದಂತೆ ಮತ್ತಿತರರು ಭಾಗಹಿಸಿದ್ದು, ಸ್ಪೀಕರ್ ಮನವಿಯಂತೆ ಕಾಂಗ್ರೆಸ್ ಧರಣಿ ವಾಪಸ್ ಪಡೆದಿದ್ದಾರೆ.
ಈ ವೇಳೆ ಸಭಾಧ್ಯಕ್ಷರು ಮಾತನಾಡಿ, ಕಾಂಗ್ರೆಸ್ ಸದಸ್ಯರಿಗೆ ತಮ್ಮ ತಮ್ಮ ಸ್ಥಾನಕ್ಕೆ ಬರುವಂತೆ ಮನವಿ ಮಾಡಿದರು. ನಾನು ನಿಮ್ಮ ಕ್ಷೇತ್ರದ ಜನರ ಬಗ್ಗೆ ನಿಮ್ಮ ಬಗ್ಗೆ ಯಾವತ್ತು ಗೌರವ ಇದೆ. ವೈಯಕ್ತಿಕ ಸಂಬಂಧದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ನನ್ನ ಮಾತಿನಿಂದ ಅನ್ಯತಾ ಭಾವಿಸಬೇಡಿ,ಇಲ್ಲಿಗೆ ಮುಗಿಸೋಣ ಎಂದು ಈಶ್ವರ್ ಖಂಡ್ರೆಗೆ ಮನವಿ ಮಾಡಿದರು.












Click it and Unblock the Notifications