ಕೊಟ್ಟ ಮಾತು ಮರೆತಿರುವ ಸಿದ್ದರಾಮಯ್ಯ ಅಧಿಕಾರ ದಾಹಿ: ಅಶ್ವತ್ಥ ನಾರಾಯಣ ಕಿಡಿ
ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗ ಮೈಸೂರು ಜಿಲ್ಲೆಗೆ ಒಂದೇ ಒಂದು ಒಳ್ಳೆಯ ಯೋಜನೆಯನ್ನೂ ಕೊಡಲಿಲ್ಲ. ಬದಲಿಗೆ ಕೋವಿಡ್ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳದಂತೆ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದರು ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಮೈಸೂರು, ಜನವರಿ28: ಎಪ್ಪತ್ತನೇ ವರ್ಷಕ್ಕೆ ರಾಜಕಾರಣದಿಂದ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ತಪ್ಪುವ ಅಧಿಕಾರ ದಾಹಿ ಆಗಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ
ಈ ಕುರಿತು ಮೈಸೂರು ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಾಲದ ಹೊರೆ ಹೆಚ್ಚಿಸುತ್ತಾರೆಯೇ ವಿನಾ ಜನರಿಗೆ ಒಳಿತನ್ನು ಮಾಡುವುದಿಲ್ಲ ಎಂದು ಕಾಂಗ್ರೆಸ್ ವಿರುದ್ದ ಸಿ ಎನ್ ಅಶ್ವತ್ಥ ನಾರಾಯಣ ಕುಟುಕಿದ್ದಾರೆ.
ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗ ಮೈಸೂರು ಜಿಲ್ಲೆಗೆ ಒಂದೇ ಒಂದು ಒಳ್ಳೆಯ ಯೋಜನೆಯನ್ನೂ ಕೊಡಲಿಲ್ಲ. ಬದಲಿಗೆ ಕೋವಿಡ್ ಸಮಯದಲ್ಲಿ ಲಸಿಕೆ ತೆಗೆದುಕೊಳ್ಳದಂತೆ ಮುಗ್ಧ ಜನರನ್ನು ದಾರಿ ತಪ್ಪಿಸುತ್ತಿದ್ದರು ಎಂದು ಟೀಕಿಸಿದರು.

ಕಾಂಗ್ರೆಸ್ ದಶಕಗಳ ಕಾಲ ಆಳ್ವಿಕೆ ನಡೆಸಿದರೂ ಜನರಿಗೆ ಕುಡಿಯುವ ನೀರು, ಆಸ್ಪತ್ರೆಗೆ, ಗುಣಮಟ್ಟದ ಶಿಕ್ಷಣ, ರಸ್ತೆ ಸೇರಿದಂತೆ ಏನನ್ನೂ ಒದಗಿಸಲಿಲ್ಲ. ಈಗ ಹತಾಶೆಯಲ್ಲಿ 200 ಯೂನಿಟ್ ವಿದ್ಯುತ್ ಸೇರಿದಂತೆ ಈಡೇರಿಸಲು ಸಾಧ್ಯವಿಲ್ಲದ ಭರವಸೆಗಳನ್ನು ಕೊಡುತ್ತಿದ್ದಾರೆ. ಜನಪರ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿಯ ಬಲವರ್ಧನೆಗೆ ವಿಜಯ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಜನರ ಮನೆಮನೆಯನ್ನು ತಲುಪಲಾಗುವುದು ಎಂದು ಹೇಳಿದರು.
ಆರ್ ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಬಿಜೆಪಿ ಪಕ್ಷದಲ್ಲಿ ವಿರೋಧ ಕೇಳಿ ಬರುತ್ತಿರುವ ಕುರಿತು ಮಾತನಾಡಿ ಅವರು, ಮಂಡ್ಯ ಜಿಲ್ಲೆಯ ಉಸ್ತುವಾರಿಯಲ್ಲಿ ಯಾವ ಗೊಂದಲವೂ ಇಲ್ಲ. ಅಲ್ಲಿನ ಹೊಣೆಗಾರಿಕೆಯನ್ನು ಕಂದಾಯ ಸಚಿವ ಅಶೋಕ ಅವರಿಗೆ ವಹಿಸಲಾಗಿದೆ ಎಂದು ಹೇಳಿದರು.

ಅಶೋಕ್ ಮಂಡ್ಯ ಜಿಲ್ಲಾ ಉಸ್ತುವಾರಿ ನೇಮಕಕ್ಕೆ ಬಿಜೆಪಿ ಪಕ್ಷದಲ್ಲಿ ವಿರೋಧ.!
ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನಮಾನ ನೀಡಿರುವುದಕ್ಕೆ ಕೆಲವರು ಅಸಮಾಧಾನಗೊಂಡಿದ್ದು, ಗೋ ಬ್ಯಾಕ್ ಜೊತೆ, ಬಾಯ್ಕಾಟ್ ಅಭಿಯಾನ ಆರಂಭಿಸಿದ್ದಾರೆ.
ಗೋ ಬ್ಯಾಕ್ ಅಶೋಕ್" ಎಂದು ಪೋಸ್ಟರ್, ಫೇಸ್ಬುಕ್ಲ್ಲಿ ಪೋಸ್ಟ್ ಮಾಡಲಾಗಿತ್ತು. ಇದೀಗ ಗೋಡೆಗಳ ಮೇಲೂ ಪೋಸ್ಟರ್ ಅಭಿಯಾನ ಪ್ರಾರಂಭವಾಗಿದೆ. ಪೋಸ್ಟರ್ನಲ್ಲಿ ಬಾಯ್ಕಟ್, ಗೋ ಬ್ಯಾಕ್ ಅಶೋಕ್ ಎಂಬ ಸಾಲು ಕಂಡುಬಂದಿದೆ. ಅಶೋಕ್ ಅವರು ಹೊಂದಾಣಿಕೆ ರಾಜಕೀಯ ಮಾಡುತ್ತಾರೆ. ಅಶೋಕ್ರಿಂದ ಮಂಡ್ಯದಲ್ಲಿ ಬಿಜೆಪಿ ಬೆಳೆಯಲ್ಲ. ಅಶೋಕ್ ಗೋ ಬ್ಯಾಕ್ ಎಂಬ ಕೂಗು ವ್ಯಾಪಕವಾಗಿದೆ. ಮಂಡ್ಯದ ಆರ್.ಪಿ. ರಸ್ತೆ, ಸ್ಟೇಡಿಯಂ ರಸ್ತೆಯ ಗೋಡೆ ಮೇಲೆ ಪೋಸ್ಟರ್ ಅಂಟಿಸಲಾಗಿದೆ.
ಮಂಡ್ಯದ ಏಳೂ ಕ್ಷೇತ್ರದಲ್ಲಿ ಸಮಬಲದ ತ್ರಿಕೋನ ಸ್ಪರ್ಧೆಯ ರಣತಂತ್ರ ರೂಪಿಸಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಹೇಳಿದರು. ಗಣರಾಜ್ಯೋತ್ಸವ ಸಮಾರಂಭದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಸಮಬಲದ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಗೆಲ್ಲುತ್ತದೆ. ರಾಜ್ಯಾದ್ಯಂತ ಬೇರೆ ಪಕ್ಷದವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು.











Click it and Unblock the Notifications