ಪಡಿತರದ ಜೊತೆ ಸಿಗಲಿದೆ ಬೇಳೆ, ತಾಳೆ ಎಣ್ಣೆ, ಉಪ್ಪು
ಬೆಂಗಳೂರು, ಮಾ.4 : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರದ ಜೊತೆಗೆ ಬೇಳೆಕಾಳು, ತಾಳೆ ಎಣ್ಣೆ ಮತ್ತು ಉಪ್ಪನ್ನು ನೀಡಲು ಮುಂದಾಗಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಬಜೆಟ್ನಲ್ಲಿ ಈ ಬಗ್ಗೆ ಅಂತಿಮ ಘೋಷಣೆಯಾಗುವ ಸಾಧ್ಯತೆ ಇದೆ.
ಮಂಗಳವಾರ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಮಾಹಿತಿ ನೀಡಿದರು. ಪಡಿತರ ವ್ಯವಸ್ಥೆಯಲ್ಲಿ ಬೇಳೆಕಾಳು, ತಾಳೆ ಎಣ್ಣೆ ಹಾಗೂ ಉಪ್ಪು ನೀಡುವ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಲಾಗಿದೆ ಎಂದರು.

ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಸಬ್ಸಿಡಿ ದರದಲ್ಲಿ ಬೇಳೆಕಾಳು, ತಾಳೆ ಎಣ್ಣೆ ಹಾಗೂ ಉಪ್ಪು ವಿತರಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿದ್ದು ಬಜೆಟ್ನಲ್ಲಿ ಮುಖ್ಯಮಂತ್ರಿಗಳು ಇದನ್ನು ಘೋಷಿಸುವ ವಿಶ್ವಾಸವಿದೆ ಎಂದು ಹೇಳಿದರು.[ಎಪಿಎಲ್ ಕಾರ್ಡ್ ದಾರರಿಗೂ ಅನ್ನಭಾಗ್ಯ ವಿಸ್ತರಣೆ]
ಸರ್ಕಾರದ ಅಂತಿಮ ಒಪ್ಪಿಗೆ ದೊರೆತ ಬಳಿಕ ದರ ಮತ್ತು ಪ್ರಮಾಣದ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಅದೇ ರೀತಿ ಎಪಿಎಲ್ ಕುಟುಂಬಗಳಿಗೂ ಅನ್ನಭಾಗ್ಯ ಯೋಜನೆ ವಿಸ್ತರಿಸುವ ಪ್ರಸ್ತಾವನೆಯನ್ನೂ ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಲಿದ್ದಾರೆ ಎಂದರು.
ಮೇ 1 ರಿಂದ ಹೊಸ ಪಡಿತರ ಚೀಟಿ : ಹೊಸ ಪಡಿತರ ಚೀಟಿಗಳನ್ನು ಪಡೆಯಲು ಮೇ 1ರಿಂದ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇಲ್ಲಿವರೆಗೆ 39.24 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 18.17 ಲಕ್ಷ ಪಡಿತರ ಚೀಟಿಗಳನ್ನು ಮುದ್ರಿಸಿ ಫಲಾನುಭವಿಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.












Click it and Unblock the Notifications