CM Siddaramaiah: ʼಮುಖ್ಯಮಂತ್ರಿ ಸಿದ್ದರಾಮಯ್ಯರ ಬಂಧನಕ್ಕೆ...ʼ
ಬೆಂಗಳೂರು, ನವೆಂಬರ್ 28: ಮೈಸೂರು ಮುಡಾ ನಿವೇಶನ ಹಂಚಿಕೆ ಹಗರಣದ ಆರೋಪಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೂಡಲೇ ಬಂಧಿಸಬೇಕೆಂದು ರಾಜ್ಯ ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಅವರು ಆಗ್ರಹಿಸಿದರು.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಚುನಾವಣಾ ರಾಜಕೀಯವೇ ಬೇರೆ; ಈ ನೆಲದ ಕಾನೂನೇ ಬೇರೆ. ನೆಲದ ಕಾನೂನಿನ ಅನುಗುಣವಾಗಿ ಅವರನ್ನು ತಕ್ಷಣ ಬಂಧಿಸಬೇಕು. ಬಂಧಿಸಿ ವಿಚಾರಣೆ ಮಾಡಬೇಕು; ಇದು ಜಂಗಲ್ ರಾಜ್ ಅಲ್ಲ ಎಂದು ಆಕ್ಷೇಪಿಸಿದರು. ಪೂಜ್ಯ ಅಂಬೇಡ್ಕರ್ ಅವರು ಬರೆದ ಸಂವಿಧಾನದಲ್ಲಿ ಇದಕ್ಕೆ ಅವಕಾಶ ಇದೆಯೇ ಎಂದು ಸಂವಿಧಾನ ಹಿಡಿದುಕೊಂಡು ಓಡಾಡುವ ಅವರ ಪಾರ್ಟಿಯ ಅಧ್ಯಕ್ಷರು ಉತ್ತರಿಸಬೇಕಿದೆ ಎಂದು ಅವರು ಒತ್ತಾಯಿಸಿದರು.

ಕರ್ನಾಟಕದಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಅಧಿಕಾರದ ಗರಿಷ್ಠ ದುರುಪಯೋಗ ನಡೆದಿದೆ. ಮುಡಾಕ್ಕೆ ಸಂಬಂಧಿಸಿದ ಹೈಕೋರ್ಟಿನ ತೀರ್ಪಿನಡಿ 180ನೇ ಪುಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೈಯಿಂದ ಅಧಿಕಾರ ದುರುಪಯೋಗ ಆಗಿದೆ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ ಎಂದು ಹೇಳಿದರು.
ಲೋಕಾಯುಕ್ತವು ಅದರ ಬಳಿಕ 120 ಬಿ, 166, 403, 406, 420, 465 ಮೊದಲಾದ ಸೆಕ್ಷನ್ಗಳನ್ವಯ ಎಫ್ಐಆರ್ ದಾಖಲಿಸಿದೆ. ಇಷ್ಟು ದೊಡ್ಡದಾದ ಗುರುತರ ಆರೋಪಗಳಿದ್ದು ಆರೋಪಿ ನಂಬರ್ 1 ಆಗಿದ್ದರೂ ಸಿದ್ದರಾಮಯ್ಯ ಅವರು ರಾಜಾರೋಷವಾಗಿ ಓಡಾಡಲು ಅವಕಾಶ ಇದೆಯೇ ಎಂದು ಅವರು ಲೋಕಾಯುಕ್ತವನ್ನು ಪ್ರಶ್ನಿಸಿದರು. ಲೋಕಾಯುಕ್ತವು ಅವರನ್ನು ಯಾಕೆ ಬಂಧಿಸಿಲ್ಲ ಎಂದು ಕೇಳಿದರು.
ದೇಶದ ಕಾನೂನು ಎಲ್ಲ ಕಡೆ ಒಂದು ರೀತಿ ಇದ್ದರೆ ಕರ್ನಾಟಕದಲ್ಲಿ ಇದೊಂದು ವಿಚಿತ್ರ ಪರಿಸ್ಥಿತಿ ಇದೆ ಎಂದು ಅವರು ಆಕ್ಷೇಪಿಸಿದರು. ಒಬ್ಬ ಆರೋಪಿ, ಎಫ್ಐಆರ್ ಆಗಿದೆ; ನಿರೀಕ್ಷಣಾ ಜಾಮೀನಿಲ್ಲ; ಸಿದ್ದರಾಮಯ್ಯನವರು ಜಾಮೀನನ್ನೂ ಪಡೆದಿಲ್ಲ. ಅವರು ಇಡೀ ಪ್ರಕರಣದ ಎ 1 ಆಗಿದ್ದಾರೆ. ಯಾಕೆ ಅವರ ವಿರುದ್ಧ ಕಾನೂನು ತೆಗೆದುಕೊಂಡಿಲ್ಲ. ಶ್ರೀಸಾಮಾನ್ಯನಿಗೆ ಒಂದು ನ್ಯಾಯ- ಸಿದ್ದರಾಮಯ್ಯ ಅವರಿಗೆ ಇನ್ನೊಂದು ನ್ಯಾಯವೇ ಎಂದು ಎಂ.ಜಿ.ಮಹೇಶ್ ಅವರು ಪ್ರಶ್ನೆಯನ್ನು ಮುಂದಿಟ್ಟರು.
ಇದ್ಯಾವ ಪರಿ ಆಡಳಿತ ಈ ರಾಜ್ಯದಲ್ಲಿದೆ? ಎಂದ ಅವರು, ಅಬಕಾರಿ ಇಲಾಖೆಯಡಿ ಡಿ.ಸಿ.ಯವರು ಎಷ್ಟು ಲಂಚ ಕೇಳಿದ್ದಾರೆ ಎಂದು ನೀವೇ ಬಿತ್ತರಿಸಿದ್ದೀರಿ. ಬಳ್ಳಾರಿಯಲ್ಲಿ 5 ಜನ ಬಾಣಂತಿಯರು ಸತ್ತಿದ್ದಾರೆ. ಸಾಕ್ಷರತೆಯಲ್ಲಿ ಕರ್ನಾಟಕವು ದೇಶದಲ್ಲಿ 17ನೇ ಸ್ಥಾನ ಪಡೆದಿದೆ. ಭ್ರಷ್ಟಾಚಾರವನ್ನು ಈ ಸರಕಾರ ಒಂದು ನೀತಿಯಾಗಿ ಮಾರ್ಪಡಿಸಿದೆ. ಉಪ ಚುನಾವಣೆಯಲ್ಲಿ ಗೆದ್ದಿದ್ದಾರೆ ಎಂದರೆ ಅದು ನ್ಯಾಯಾಲಯದ ತೀರ್ಪಲ್ಲ; ಯಾಕೆ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿ ಇಷ್ಟೊಂದು ಆರಾಮವಾಗಿ ಸುತ್ತುತ್ತಿದ್ದಾರೆ? ಅದೇ ವಿಶೇಷ ಅವಕಾಶ ಬೇರೆಯವರಿಗೆ ಇದೆಯೇ ಎಂದು ಕೇಳಿದರು.
ಸಿದ್ದರಾಮಯ್ಯ ಅವರು ಯಾವತ್ತೂ ನ್ಯಾಯದ ಪರ ನಿಂತಿಲ್ಲದ ವ್ಯಕ್ತಿ. ಅವರ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನು ಮುಚ್ಚಿದ್ದರು. ಲೋಕಾಯುಕ್ತವನ್ನು ಪುನರ್ ಸ್ಥಾಪಿಸಲು 7 ವರ್ಷ ಬೇಕಾಯಿತು. ಎಸಿಬಿ ರಚನೆ ಮಾಡಿದ್ದರು. 106 ಕೇಸುಗಳು ಅವರ ಮೇಲಿತ್ತು. ಆ ಕೇಸುಗಳ ಪೈಕಿ 56 ಕೇಸುಗಳಿಗೆ ಬಿ ರಿಪೋರ್ಟ್ ಹಾಕಿಸಿಕೊಂಡಿದ್ದರು. ಸುಪ್ರೀಂ ಕೋರ್ಟ್, ಹೈಕೋರ್ಟಿನ ನಿರ್ದೇಶನದ ಮೇರೆಗೆ ಈ ದೇಶದಲ್ಲಿ ಲೋಕಾಯುಕ್ತವನ್ನು ರಾಜ್ಯದಲ್ಲಿ ಪುನರ್ ಸ್ಥಾಪಿಸಿದ್ದಾರೆ ಎಂದು ಹೇಳಿದರು.
ತನ್ನ ಮೇಲೆ ಆರೋಪ ಬಂದಾಗ ಲೋಕಾಯುಕ್ತವನ್ನೇ ಮುಚ್ಚುವ ಸಿದ್ದರಾಮಯ್ಯನವರು, ಇವತ್ತು ಈ ಭ್ರಷ್ಟಾಚಾರ ಆರೋಪದಲ್ಲಿ ಅವರೇ ಅಧಿಕಾರದಲ್ಲಿ ಇದ್ದುಕೊಂಡು, ಕಡತಗಳನ್ನು (ಡಾಕ್ಯುಮೆಂಟ್) ಮುಚ್ಚಿ ಹಾಕಲು ಸಾಧ್ಯವಿಲ್ಲವೇ ಎಂದು ಅವರು ಪ್ರಶ್ನಿಸಿದರು. ಕಡತಗಳನ್ನು ಬೈರತಿ ಸುರೇಶ್ ಅವರು ಬಂದು ಎತ್ತಿಕೊಂಡು ಹೋಗಲು ಸಾಧ್ಯವಿಲ್ಲವೇ ಎಂದು ಎಂ.ಜಿ.ಮಹೇಶ್ ಅವರು ಕೇಳಿದರು.












Click it and Unblock the Notifications