ಮೂರು ತಿಂಗಳಲ್ಲಿ ಮೇಕೆದಾಟು ಯೋಜನೆ ಡಿಪಿಆರ್ ಸಿದ್ಧ
ಬೆಂಗಳೂರು, ಜೂ. 19 : ತಮಿಳುನಾಡಿನಿಂದ ಭಾರೀ ವಿರೋಧ ವ್ಯಕ್ತವಾಗಿರುವ ಮೇಕೆದಾಟು ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಕೆಲಸ ಆರಂಭಿಸಿದೆ. ಒಂದು ವಾರದಲ್ಲಿ ಯೋಜನೆಯ ವಿಸ್ತೃತ ವರದಿ ನೀಡಲು ಟೆಂಡರ್ ನೀಡಲಿದ್ದು, ಮೂರು ತಿಂಗಳಿನಲ್ಲಿ ವರದಿ ಸಿದ್ಧವಾಗಲಿದೆ.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮೂರು ಕಂಪನಿಗಳು ಯೋಜನೆಯ ವಿಸ್ತೃತ ವರದಿಯನ್ನು ತಯಾರಿಸಲು ಕೊಡಲು ಆಸಕ್ತಿ ತೋರಿವೆ. ಒಂದು ವಾರದಲ್ಲಿ ಈ ಕುರಿತು ಟೆಂಡರ್ ನೀಡಲಾಗುತ್ತದೆ ಎಂದರು. [ಬನ್ನಿ ಮೇಕೆದಾಟು, ಸಂಗಮ ಸುತ್ತಿ ಬರೋಣ]

ವಿಸ್ತೃತ ಯೋಜನಾ ವರದಿ ತಯಾರಿಕೆ ಒಂದು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಆದರೆ, ಸರ್ಕಾರ ಮೇಕೆದಾಟು ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಿದ್ದು, ಮೂರು ತಿಂಗಳಿನಲ್ಲಿ ವರದಿ ತಯಾರಿಸಿ ಕೊಡುವಂತೆ ಕಂಪನಿಗೆ ಸೂಚನೆ ನೀಡಲಾಗುತ್ತದೆ ಎಂದು ಸಚಿವರು ವಿವರಣೆ ನೀಡಿದರು. [ಮೇಕೆದಾಟು ಯೋಜನೆ ವಿವಾದವೇನು?]
ಮೇಕೆದಾಟು ಯೋಜನೆ ವಿವರವಾದ ವರದಿ ಸಿದ್ಧವಾದ ನಂತರ ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಯೋಜನೆಗೆ ಅನುಮತಿ ನೀಡುವಂತೆ ಕೇಂದ್ರ ಜಲ ಸಂಪನ್ಮೂಲ ಸಚಿವಾಲಯ, ಕೇಂದ್ರ ಪರಿಸರ ಇಲಾಖೆಗೆ ಮನವಿ ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು. [ಕಾನೂನು ಚೌಕಟ್ಟಿನಲ್ಲಿ ಮೇಕೇದಾಟು ಯೋಜನೆ]
ಏನಿದು ಯೋಜನೆ? : ಮಳೆಗಾಲದ ಸಂದರ್ಭದಲ್ಲಿ ಕಾವೇರಿ ನದಿಯಿಂದ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಅಂತಹ ಸಂದರ್ಭದಲ್ಲಿ ನೀರನ್ನು ಸಂಗ್ರಹಿಸಿ, ಮೈಸೂರು, ಬೆಂಗಳೂರು ನಗರಗಳಿಗೆ ಕುಡಿಯುವ ನೀರಿಗಾಗಿ ಉಪಯೋಗಿಸಿಕೊಳ್ಳಲು ಮೇಕೆದಾಟು ಬಳಿ ಡ್ಯಾಂ ನಿರ್ಮಾಣ ಮಾಡುವುದು ಯೋಜನೆಯಾಗಿದೆ.
ತಮಿಳುನಾಡು ಸರ್ಕಾರ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದೆ. ಇತ್ತ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿ ಮಾಡಿ, ಯೋಜನೆ ಕುರಿತು ವಿವರಣೆ ನೀಡಿದ್ದಾರೆ.












Click it and Unblock the Notifications