ಹಾಲಿನ ದರ ಏರಿಕೆ ಪ್ರಸ್ತಾಪವಿಲ್ಲ : ಸಚಿವರ ಸ್ಪಷ್ಟನೆ
ಬೆಂಗಳೂರು, ಜ. 1 : ಹಾಲಿನ ದರ ಹೆಚ್ಚಳದ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಕೆಎಂಎಫ್ಗೆ ಬಜೆಟ್ನಲ್ಲಿ ಒದಗಿಸಲಾದ ಅನುದಾನದ ಬಳಕೆ ಪರಿಶೀಲನೆಗೆ ಮುಂದಿನ ವಾರ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ ಎಂದು ಪಶು ಸಂಗೋಪನೆ ಮತ್ತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕ ಹಾಲು ಮಹಾ ಮಂಡಳ (ಕೆಎಂಎಫ್)ಕ್ಕೆ ಬಜೆಟ್ನಲ್ಲಿ ಒದಗಿಸಲಾದ ಅನುದಾನದ ಬಳಕೆ ಪರಿಶೀಲನೆಗೆ ಉನ್ನತ ಮಟ್ಟದ ಸಭೆ ಕರೆಯಲಾಗಿದೆ. ಸಭೆ ಕರೆಯುವಂತೆ ಸಿಎಂ ಸಿದ್ದರಾಮಯ್ಯ ಅವರು ಸಹ ಸೂಚನೆ ನೀಡಿದ್ದಾರೆ ಎಂದರು.

ಹಾಲು ದರ ಏರಿಕೆ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಕೆಎಂಎಫ್ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯದ ಇತರೆ ಹಾಲು ಒಕ್ಕೂಟಗಳ ಮುಖ್ಯಸ್ಥರ ಸಭೆ ಕರೆದು, ಬಜೆಟ್ ಅನುಷ್ಠಾನ ಸೇರಿದಂತೆ ಈ ಸಂಸ್ಥೆಗಳ ಬೇಡಿಕೆ ಕುರಿತು ಪರಿಶೀಲಿಸಲಾಗುತ್ತದೆ ಎಂದು ಜಯಚಂದ್ರ ಅವರು ತಿಳಿಸಿದರು. [ಹಾಲಿನ ದರ ಏರಿಕೆ ಪ್ರಸ್ತಾವನೆ ಮುಂದಿಟ್ಟ ಕೆಎಂಎಫ್]
ಲಾಟರಿ ಮೂಲಕ ಆಯ್ಕೆ : ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ತಲಾ 2 ಹಸು ನೀಡಲು ರೂಪಿಸಿರುವ ಯೋಜನೆ ಕುರಿತು ಮಾಹಿತಿ ನೀಡಿದ ಸಚಿವ ಜಯಚಂದ್ರ ಅವರು, ಪ್ರತಿ ತಾಲೂಕಿನಲ್ಲಿ 100ರಿಂದ 130 ಮಂದಿಗೆ ಹಸು ದೊರೆಯಲಿದೆ. ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆಯಾಗಲಿದೆ ಎಂದರು. [ಪ.ಜಾತಿ, ಪಂಗಡದ ರೈತರಿಗೆ ಸರ್ಕಾರದಿಂದ ಹಸು ವಿತರಣೆ]
ಈ ಯೋಜನೆ ಅನ್ವಯ ಸರ್ಕಾರ 75 ಸಾವಿರ ರೂ. ನೀಡಲಿದ್ದು, ಫಲಾನುಭವಿಗಳು 25 ಸಾವಿರ ರೂ. ಭರಿಸಬೇಕಾಗುತ್ತದೆ. ಇದಕ್ಕೆ ಬ್ಯಾಂಕ್ ಸಾಲ ಪಡೆಯಬಹುದಾಗಿದೆ. ಉತ್ತಮ ತಳಿಯ 32 ಸಾವಿರ ಹಸುಗಳನ್ನು ನೀಡಲಾಗುತ್ತದೆ. ಫಲಾನುಭವಿಗಳು ಎಮ್ಮೆಯನ್ನೂ ಕೊಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.












Click it and Unblock the Notifications