ಡಿ. 7ರಂದು ದೆಹಲಿಯಲ್ಲಿ ಮುಖ್ಯಮಂತ್ರಿಗಳ ಸಭೆ
ಕಲಬುರಗಿ, ನ. 28: ಈಗಾಗಲೇ ರದ್ದುಪಡಿಸಿರುವ ಯೋಜನಾ ಆಯೋಗಕ್ಕೆ ಪರ್ಯಾಯ ವ್ಯವಸ್ಥೆ ಕುರಿತು ಚರ್ಚಿಸಲು ನವದೆಹಲಿಯಲ್ಲಿ ಡಿಸೆಂಬರ್ 7ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯೋಜನಾ ಆಯೋಗವನ್ನು ರದ್ದುಪಡಿಸಲಾಗಿತ್ತು. ಆದ್ದರಿಂದ ಈ ಕುರಿತು ರಾಜ್ಯದ ಅಭಿಪ್ರಾಯ ತಿಳಿಸುವ ಉದ್ದೇಶದಿಂದ ಸಭೆಯಲ್ಲಿ ನಾನು ಪಾಲ್ಗೊಳ್ಳಲಿದ್ದೇನೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ. [ಬಡವರ ಸಬ್ಸಿಡಿ ಕಡಿತಕ್ಕೆ ವಿರೋಧ]
ಈ ಕುರಿತು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ರಾಜ್ಯದ ಅಭಿಪ್ರಾಯವನ್ನು ರೂಪಿಸಲು ದೆಹಲಿಗೆ ತೆರಳುವ ಮೊದಲು ಸಂಪುಟ ಸಚಿವರು, ರಾಜ್ಯ ಯೋಜನಾ ಮಂಡಳಿ, ಯೋಜನಾ ಇಲಾಖೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಯವರನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಹೇಳಿದರು.
ನಾನು ವೈಯಕ್ತಿಕವಾಗಿ ಯೋಜನಾ ಆಯೋಗದ ಪರವಾಗಿದ್ದೇನೆ. ದೇಶದ ಯೋಜನಾಬದ್ಧ ಅಭಿವೃದ್ಧಿಗೆ ಯೋಜನಾ ಆಯೋಗ ಅಗತ್ಯ ಎಂದು ಅಭಿಪ್ರಾಯಪಟ್ಟರು. [ಕಲಬುರಗಿ ಸಚಿವ ಸಂಪುಟದ ತೀರ್ಮಾನಗಳು]
ಉದ್ಯೋಗ ಖಾತ್ರಿಗೆ ಬೆಂಬಲ: ಅಲ್ಲದೆ, ಕೇಂದ್ರ ಸರ್ಕಾರವು 'ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ' ಅಂತಹ ಯೋಜನೆಗಳನ್ನು ಸರ್ಕಾರ ಮೊಟಕುಗೊಳಿಸಲು ಯತ್ನಿಸುತ್ತಿರುವುದನ್ನು ವಿರೋಧಿಸುತ್ತೇನೆ. ಈ ಯೋಜನೆ ಮುಂದುವರಿಸುವುದಲ್ಲದೆ, ಇನ್ನಷ್ಟು ಅನುದಾನ ನೀಡಬೇಕೆಂದು ಕೋರುತ್ತೇನೆಂದು ತಿಳಿಸಿದರು. [ಕಲಬುರಗಿ ಸಂಪುಟ ಸಭೆಗೆ ಅಂಬರೀಶ ಗೈರು]
ರೈಲ್ವೆ ಯೋಜನೆಗಳಿಗೆ ಸಹಕಾರ: ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಕೇಂದ್ರವು ಕೈಗೊಂಡಿರುವ ಎಲ್ಲ ರೈಲ್ವೆ ಯೋಜನೆಗಳಿಗೆ ನಿಧಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ಸಹಕರಿಸುತ್ತಿಲ್ಲ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.