ಶಾಸಕರನ್ನ ಚೇಸ್ ಮಾಡುವಾಗ ಅವಘಡ: ಮಾಧ್ಯಮಗಳ ಪಾಡು ಯಾಕ್ ಕೇಳ್ತೀರಾ.!
ಬೆಂಗಳೂರು, ಮೇ 19: ಕರ್ನಾಟಕದಲ್ಲಿನ ರೆಸಾರ್ಟ್ ರಾಜಕಾರಣದ ಇಂಚಿಂಚೂ ಮಾಹಿತಿಯನ್ನ ಜನತೆ ಮುಂದೆ ತರಲು ಮಾಧ್ಯಮ ಪ್ರತಿನಿಧಿಗಳು ಮೊದಲು ಈಗಲ್ ಟನ್ ರೆಸಾರ್ಟ್ ಮುಂದೆ ಕಾದಿದ್ದರು. ಈಗಲ್ ಟನ್ ನಿಂದ ಕೇರಳದ ಕೊಚ್ಚಿ ಕಡೆ ಶಾಸಕರು ಹೊರಟಿದ್ದಾರೆ ಅಂತ ಮಾಹಿತಿ ಲಭ್ಯವಾದ ನಂತರ, ಕೆಲ ಮಾಧ್ಯಮಗಳು ಎಚ್.ಎ.ಎಲ್ ವಿಮಾನದ ಬಳಿ ದೌಡಾಯಿಸಿದ್ದರು.
ಆದರೆ ವಿಮಾನ ಕ್ಯಾನ್ಸಲ್ ಆಯ್ತು. ಇತ್ತ ಶಾಸಕರ ಪ್ಲಾನ್ ಕೂಡ ಚೇಂಜ್ ಆಯ್ತು. ಇದ್ದಕ್ಕಿದ್ದಂತೆ ಹೈದರಾಬಾದ್ ಕಡೆ ಶಾಸಕರು ಮುಖ ಮಾಡಿದರು. ಅಲ್ಲಿಂದಲೇ ನೋಡಿ 'ಚೇಸಿಂಗ್' ಶುರುವಾಗಿದ್ದು. ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಶಾಸಕರು ವಿಮಾನ ಹತ್ತುವ ದೃಶ್ಯ ಚಿತ್ರೀಕರಿಸಲು ಬಂದಿದ್ದ ಮಾಧ್ಯಮ ಪ್ರತಿನಿಧಿಗಳು, ಅಲ್ಲಿಂದಲೇ ಶಾಸಕರಿದ್ದ ಬಸ್ ಫಾಲೋ ಮಾಡಲು ಶುರು ಮಾಡಿದರು. ಮಧ್ಯದಲ್ಲಿ ಶಾಸಕರು ದಾರಿ ತಪ್ಪಿಸಿದರೂ, ಮಾಧ್ಯಮಗಳ ಚೇಸಿಂಗ್ ಮಾತ್ರ ನಿಲ್ಲಲಿಲ್ಲ.
ಶಾಸಕರು ಎಲ್ಲಿ ಹೋಗುತ್ತಾರೆ ಅಂತ ಸುಳಿವೇ ಇಲ್ಲದೇ, ಹೈದರಾಬಾದ್ ನ ಹೊರವಲಯದಲ್ಲಿ ಇರುವ ತಾಜ್ ಕೃಷ್ಣ ಹೋಟೆಲ್ ವರೆಗೂ ಕೆಲ ಮಾಧ್ಯಮ ಪ್ರತಿನಿಧಿಗಳು 'ಚೇಸಿಂಗ್' ಮಾಡಿದ್ದಾರೆ. ಈ ಚೇಸಿಂಗ್ ನಲ್ಲಿ ಖಾಸಗಿ ವಾಹಿನಿಯ ವಾಹನವೊಂದು ಜಖಂಗೊಂಡಿದೆ. ವಾಹನದಲ್ಲಿ ಇದ್ದ ಮಾಧ್ಯಮ ಮಿತ್ರರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ, ಈ ಚೇಸಿಂಗ್ ವೇಳೆ ಕಾಂಗ್ರೆಸ್ ಶಾಸಕರೊಬ್ಬರಿಗೆ ಸೇರಿದ ಕಾರಿಗೂ ಅಪಘಾತವಾಗಿದೆ. ಉಟ್ಟ ಬಟ್ಟೆಯಲ್ಲೇ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಎಚ್.ಎ.ಎಲ್ ವಿಮಾನ ನಿಲ್ದಾಣದಿಂದ ಶಾಸಕರನ್ನು ಚೇಸಿಂಗ್ ಮಾಡಿಕೊಂಡು ಹೊರಟ ಮಾಧ್ಯಮ ಪ್ರತಿನಿಧಿಗಳು ಹೈದರಾಬಾದ್ ತಲುಪಿದ್ದು ಶುಕ್ರವಾರ ಬೆಳಗ್ಗೆ ಸುಮಾರು 10 ರ ವೇಳೆ.

ಹೈದರಾಬಾದ್ ನ ತಾಜ್ ಕೃಷ್ಣ ಹೋಟೆಲ್ ತಲುಪುತ್ತಿದ್ದಂತೆಯೇ, ವಾಹಿನಿಗಳಲ್ಲಿ ಲೈವ್ ಶುರುವಾಯ್ತು. ರಾತ್ರಿ ನಿದ್ದೆ ಇಲ್ಲದೇ, ಹಲ್ಲುಜ್ಜದೇ, ಮುಖ ತೊಳೆಯದೇ ಇದ್ದ ಮಾಧ್ಯಮ ಪ್ರತಿನಿಧಿಗಳು ಹಾಗೂ ಹೀಗೂ ಲೈವ್ ಕೊಟ್ಟರು.
ಲೈವ್ ಮುಗಿದ್ಮೇಲೂ, ಮಾಧ್ಯಮ ಪ್ರತಿನಿಧಿಗಳಿಗೆ ಬಿಡುವಿಲ್ಲ. ಶಾಸಕರು ಯಾವಾಗ ಹೊರಗೆ ಬರ್ತಾರೋ ಅಂತ ಕ್ಯಾಮರಾ ಹಿಡಿದುಕೊಂಡು ಬಿಸಿಲಿನಲ್ಲಿ ಬೇಯುವುದೇ ಅವರುಗಳ ಕಾಯಕ ಆಗಿತ್ತು. ಹೇಳಿಕೊಳ್ಳುವುದಕ್ಕೆ, 'ತಾಜ್ ಕೃಷ್ಣ' ಹೈದರಾಬಾದ್ ನ ಪ್ರತಿಷ್ಟಿತ ಹೋಟೆಲ್. ಆದ್ರೆ, ಹೋಟೆಲ್ ಹೊರಾಂಗಣದಲ್ಲಿ ಒಂದೇ ಒಂದು ಟಾಯ್ಲೆಟ್ ಕೂಡ ಇಲ್ಲ.! ಶಾಸಕರ ಬಗ್ಗೆ ವರದಿ ಮಾಡಲು ಬಂದಿದ್ದ ಪತ್ರಕರ್ತರಿಗೆ ಹೋಟೆಲ್ ಒಳಗೆ ಪ್ರವೇಶ ಇಲ್ಲ. ಅಂದ್ಮೇಲೆ, ರಾತ್ರಿಯಿಂದ ಒಂದೇ ಸಮ 'ಚೇಸಿಂಗ್' ಮಾಡಿದವರ ಪರಿಸ್ಥಿತಿ ಏನಾಗಿರಬೇಡ, ಊಹಿಸಿ.

ಹೋಗಲಿ, ಬಂದ ಕೆಲಸ ಆದರೂ ಸರಿಯಾಗಿ ಆಯ್ತಾ ಅಂದರೆ... ಹೋಟೆಲ್ ಒಳಗೆ ಸೇರಿದ್ದ ಯಾವೊಬ್ಬ ಕಾಂಗ್ರೆಸ್ ಶಾಸಕ ಕೂಡ ಹೊರಗೆ ಬರಲಿಲ್ಲ. ಮಾತನಾಡಲು ತಯಾರೂ ಇರಲಿಲ್ಲ. ಕೇಳಿದರೆ, 'ಮಾತನಾಡ ಬಾರದು' ಎಂಬ ಆದೇಶ ಬಂದಿದೆ ಅಂತ ಶಾಸಕರೇ ಹೇಳುತ್ತಾರೆ. ಹೀಗಿರುವಾಗ, ಮಾಧ್ಯಮ ಪ್ರತಿನಿಧಿಗಳು ಏನು ಮಾಡಬೇಕು.?
ಬೆಳಗ್ಗೆ ತಿಂಡಿ ಇಲ್ಲದೆ, ಮಧ್ಯಾಹ್ನ ಅಲ್ಪ ಸ್ವಲ್ಪ ಉಪಹಾರ ಮುಗಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ರಾತ್ರಿಯೂ ಬಿಡುಗಡೆ ಭಾಗ್ಯ ಇರಲಿಲ್ಲ. ವಿಮಾನದಲ್ಲಿ ತೆರಳಬೇಕಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬಸ್ ಮೂಲಕವೇ ತೆರಳಲು ಮುಂದಾದರು.
ಹೈದರಾಬಾದ್ ಗೆ ಬರುವಾಗ ಕೆಲ ಮಾಧ್ಯಮ ಮಿತ್ರರು ಹೇಗೆ ಚೇಸ್ ಮಾಡಿಕೊಂಡು ಬಂದರೋ ಅದೇ ರೀತಿ ವಾಪಸ್ ಹೋಗುವಾಗಲೂ ಚೇಸ್ ಮಾಡಿಕೊಂಡೇ ಹೋದರು. ಒಟ್ಟಿನಲ್ಲಿ ಊಟ-ತಿಂಡಿ ಇಲ್ಲದೇ, ಸ್ನಾನವನ್ನೂ ಮಾಡದೇ, 36 ಗಂಟೆಗಳ ಕಾಲ ರೋಡ್ ನಲ್ಲಿಯೇ ಕಳೆದ ಮಾಧ್ಯಮ ಮಿತ್ರ ಪಾಡು ಛೇ.. ಪಾಪ.. ಯಾಕ್ ಕೇಳ್ತೀರಾ.












Click it and Unblock the Notifications