ದಾಖಲೆ ಇಲ್ಲದ ಹಣ ಸಾಗಣೆ ಮಿತಿ 50,000 ರೂ.: ಚುನಾವಣಾ ಆಯುಕ್ತರು
ಬೆಂಗಳೂರು, ಏಪ್ರಿಲ್ 11: ದಾಖಲೆ ಇಲ್ಲದೆ ಸಾರ್ವಜನಿಕರು ರೂ. 50,000 ಸಾವಿರದವರೆಗೆ ಹಣವನ್ನು ಸಾಗಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಹಣ ಒಯ್ಯುವುದಾದರೆ ಅದಕ್ಕೆ ದಾಖಲೆಗಳು ಕಡ್ಡಾಯ ಎಂದು ಸಂಜೀವ್ ಕುಮಾರ್ ಹೇಳಿದ್ದಾರೆ.
ಒಂದೊಮ್ಮೆ ನಗದು ಮೊತ್ತ 50 ಸಾವಿರ ರೂಪಾಯಿಗಿಂತ ಹೆಚ್ಚಿದ್ದರೆ ಚುನಾವಣಾಧಿಕಾರಿಗಳಿಗೆ ವಿವರಣೆ ನೀಡಬೇಕು. ರೂ. 10 ಲಕ್ಷಕ್ಕಿಂತ ಹೆಚ್ಚು ನಗದು ಒಯ್ಯುತ್ತಿದ್ದರೆ ಅಂತಹವರನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಲಾಗುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ವಿಚಾರಣೆ ನಡೆಸುತ್ತಾರೆ ಎಂದಿದ್ದಾರೆ.
ಚುನಾವಣೆ ನೀತಿ ಸಂಹಿತೆ ಅಂದರೇನು? ಏನು ಮಾಡಬಹುದು, ಏನು ಮಾಡಬಾರದು?
ಸೂಕ್ತ ವಿವರಣೆ ಮತ್ತು ದಾಖಲೆಗಳು ಇಲ್ಲದಿದ್ದರೆ ನಗದು ಹಣವನ್ನು ವಶಕ್ಕೆ ತೆಗೆದುಕೊಳ್ಳುತ್ತಾರೆ. ವಿವರಣೆ ಮತ್ತು ದಾಖಲೆ ನೀಡಿದರೆ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂದವರು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮಕ್ಕಿಲ್ಲ ಅಡ್ಡಿ
ಮದುವೆ, ಮುಂಜಿ, ಹುಟ್ಟುಹಬ್ಬ ಮುಂತಾದ ಖಾಸಗಿ ಕಾರ್ಯಕ್ರಮಗಳಿಗೆ ಚುನಾವಣಾ ಆಯೋಗದ ಅನುಮತಿ ಪಡೆಯುವ ಯಾವುದೇ ಅಗತ್ಯವಿಲ್ಲ. ಈ ಕಾರ್ಯಕ್ರಮಗಳಿಗೆ ಚುನಾವಣಾ ನೀತಿ ಸಂಹಿತೆ ಅನ್ವಯಿಸುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಹುಟ್ಟಿಕೊಂಡಿರುವ ಗೊಂದಲಕ್ಕೆ ಅವರು ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ. ಯಾರು ಬೇಕಾದರೂ ಖಾಸಗಿ ಕಾರ್ಯಕ್ರಮ ಹಮ್ಮಿಕೊಳ್ಳಬಹುದು. ಇದಕ್ಕೆ ಜಿಲ್ಲಾ ಚುನಾವಣಾಧಿಕಾರಿ ಮತ್ತು ಮಾದರಿ ನೀತಿ ಸಂಹಿತೆ ಜಾರಿ ದಳದ ಅಧಿಕಾರಿಗಳ ಬಳಿ ಅನುಮತಿ ಪಡೆಯುವ ಅಗತ್ಯವಿಲ್ಲ. ಈ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳು ಮಾತ್ರ ಭಾಗವಹಿಸುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಪಾರದರ್ಶಕ ಚುನಾವಣೆ ನಡೆಸಲು ಆಯೋಗ ಬದ್ಧ : ಓ.ಪಿ.ರಾವತ್
ಒಂದೊಮ್ಮೆ ಈ ಕಾರ್ಯಕ್ರಮದಲ್ಲಿ ರಾಜಕಾರಣಿಗಳು ಉಡುಗೊರೆ ಹಂಚುವುದು ಸೇರಿದಂತೆ ಪ್ರಲೋಭಲೆ ಒಡ್ಡುವ ಚಟುವಟಿಕೆ ನಡೆಸಿದರೆ ಆಯೋಗ ಕ್ರಮ ಕೈಗೊಳ್ಳುತ್ತದೆ ಎಂದು ಅವರು ಹೇಳಿದ್ದಾರೆ.