ಮಾರ್ಕಂಡೇಯ ನದಿ ನೀರು ವಿವಾದ; ಕೇಂದ್ರದಿಂದ ಪ್ರಾಧಿಕಾರ ರಚನೆ
ಬೆಂಗಳೂರು, ಡಿಸೆಂಬರ್ 02 : ಸುಪ್ರೀಂಕೋರ್ಟ್ ಕರ್ನಾಟಕ ಸರ್ಕಾರದ ಮಾರ್ಕಂಡೇಯ ಜಲಾಶಯದ ನಿರ್ಮಾಣ ಯೋಜನೆಗೆ ತಡೆ ನೀಡಲು ನಿರಾಕರಿಸಿದೆ. ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡು ಅಂತರರಾಜ್ಯ ನ್ಯಾಯಾಧೀಕರಣ ರಚನೆ ಮಾಡುವಂತೆ ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದೆ.
2019ರ ನವೆಂಬರ್ನಲ್ಲಿ ತಮಿಳುನಾಡು ಸರ್ಕಾರ ನ್ಯಾಯಾಧೀಕರಣಕ್ಕಾಗಿ ಬೇಡಿಕೆ ಇಟ್ಟಿತ್ತು. ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈಗ ನ್ಯಾಯಾಧೀಕರಣ ಸ್ಥಾಪನೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.
ಅಂತರರಾಜ್ಯಗಳ ನೀರು ವಿವಾದ ಕಾಯ್ದೆ 1956ರ ಅನ್ವಯ ಮನವಿ ಬಂದ ಒಂದು ವರ್ಷದಲ್ಲಿ ನ್ಯಾಯಾಧೀಕರಣವನ್ನು ಕೇಂದ್ರ ಸರ್ಕಾರ ಸ್ಥಾಪನೆ ಮಾಡಬಹುದಾಗಿದೆ. ಆದ್ದರಿಂದ, ಈಗ ನ್ಯಾಯಾಧೀಕರಣ ಸ್ಥಾಪನೆ ಮಾಡಿ ಗೆಜೆಟ್ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ.

ಆರ್ಟಿಐ ಮೂಲಕ ಕೇಳಲಾಗಿದ್ದ ಪ್ರಶ್ನೆಗೆ ಕೇಂದ್ರ ಜಲಶಕ್ತಿ ಸಚಿವಾಲಯ ಉತ್ತರ ನೀಡಿದೆ. ತಮಿಳುನಾಡು ಬೇಡಿಕೆ ಕುರಿತು ತಮ್ಮ ನಿಲುವನ್ನು ತಿಳಿಸಿ ಎಂದು ನದಿ ಪಾತ್ರದ ವ್ಯಾಪ್ತಿಗೆ ಒಳಪಡುವ ಆಂಧ್ರಪ್ರದೇಶ, ಪುದುಚೇರಿ ಮತ್ತು ಕರ್ನಾಟಕ ರಾಜ್ಯಗಳಿಗೆ ನೋಟಿಸ್ ನೀಡಲಾಗಿದೆ.
ಈ ನೋಟಿಸ್ಗೆ ಯಾವ ರಾಜ್ಯಗಳು ಉತ್ತರ ನೀಡಿದ ಕಾರಣ ಕೇಂದ್ರ ಸರ್ಕಾರ ವಿವಾದ ಇತ್ಯರ್ಥ ಪಡಿಸಲು ಸಮಿತಿಯನ್ನು ರಚನೆ ಮಾಡಿತು. ಕೇಂದ್ರ ಜಲ ಆಯೋಗದ ಅಧ್ಯಕ್ಷರ ನೇತೃತ್ವದ ಸಮಿತಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಇಂಜಿನಿಯರ್ಗಳು ಸದಸ್ಯರಾಗಿದ್ದಾರೆ.
2020ರ ಫೆಬ್ರವರಿ 24 ಮತ್ತು ಜುಲೈ 7ರಂದು ಎರಡು ಬಾರಿ ಸಮಿತಿಯ ಸಭೆ ನಡೆದಿದೆ. ಜುಲೈ 31ರಂದು ಜಲಶಕ್ತಿ ಸಚಿವಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಲಾಗಿದೆ. ವಿವಾದವನ್ನು ಬಗೆಹರಿಸಲು ನ್ಯಾಯಾಧೀಕರಣ ರಚನೆ ಮಾಡುವುದು ಸೂಕ್ತ ಎಂದು ಸಮಿತಿ ವರದಿಯನ್ನು ನೀಡಿದೆ. ಆದರೆ, ನ್ಯಾಯಾಧೀಕರಣ ಇನ್ನೂ ಸ್ಥಾಪನೆಯಾಗಿಲ್ಲ.
ವಿವಾದದ ಹಿನ್ನಲೆ; ಕರ್ನಾಟಕ ಸರ್ಕಾರ 2007ರಲ್ಲಿ ಬಂಗಾರಪೇಟೆ ತಾಲೂಕಿನಲ್ಲಿ ಜಲಾಶಯ ನಿರ್ಮಾಣಕ್ಕೆ ಚಾಲನೆ ನೀಡಿತು. ಮಾಲೂರು, ಕೋಲಾರ, ಬಂಗಾರಪೇಟೆ ತಾಲೂಕಿನ 45 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವುದು ಯೋಜನೆಯ ಉದ್ದೇಶ. ಈಗಾಗಲೇ ಶೇ 80ರಷ್ಟು ಯೋಜನೆ ಪೂರ್ಣಗೊಂಡಿದೆ.
ತಮಿಳುನಾಡು ಸರ್ಕಾರ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಜಲಾಶಯ ನಿರ್ಮಾಣಗೊಂಡರೆ ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಮಲೈ, ವಿಲ್ಲುಪುರಂ ಮುಂತಾದ ಜಿಲ್ಲೆಗಳಿಗೆ ತೊಂದರೆ ಉಂಟಾಗಲಿದೆ ಎಂದು ಹೇಳಿದೆ.












Click it and Unblock the Notifications