ಮಲೆನಾಡು, ಕರಾವಳಿಯಲ್ಲಿ ಮಳೆ ಅಬ್ಬರ:ಶಾಲೆಗಳಿಗೆ ರಜೆ
ಬೆಂಗಳೂರು,ಆ.2: ಮಲೆನಾಡು,ಕರಾವಳಿ,ಕೊಡಗಿನಲ್ಲಿ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ವರ್ಷ ಮುಂಗಾರು ಕಡಿಮೆಯಾಗಿ ಬರದ ಭೀತಿಯಲ್ಲಿದ್ದ ರೈತರು ಇದೀಗ ಅತಿವೃಷ್ಟಿಯ ಆತಂಕಕ್ಕೆ ಒಳಗಾಗಿದ್ದಾರೆ.
ರಾಜ್ಯದಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರಿ ಮಳೆಗೆ ಐದು ಜಿಲ್ಲೆಯ 18 ತಾಲ್ಲೂಕಿನ ಶಾಲೆಗೆ ರಜೆ ಘೋಷಣೆಯಾಗಿದೆ.ಮಹಾರಾಷ್ಟ್ರದ ಭಾರೀ ಮಳೆಯಾಗುತ್ತಿದ್ದು, ಅಲ್ಲಿನ ಜಲಾಶಯಗಳಿಂದ ಅಪಾರ ಪ್ರಮಾಣದ ನೀರನ್ನು ಕೃಷ್ಣ ನದಿಗೆ ಬಿಡಲಾಗುತ್ತಿದೆ.
ಕೊಡಗು ವರದಿ: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದ್ದು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ.ಭಾಗಮಂಡಲ- ಅಯ್ಯಂಗೇರಿ ರಸ್ತೆ ಹಾಗೂ ಭಾಗಮಂಡಲ- ಮಡಿಕೇರಿ ಸಂಪರ್ಕ ರಸ್ತೆ ಮೇಲೆ 2 ರಿಂದ 3 ಅಡಿಗಳಷ್ಟು ನೀರು ಹರಿಯುತ್ತಿದೆ. ವಾಹನಗಳ ಸಂಚಾರವನ್ನು ತಡೆಹಿಡಿಯಲಾಗಿದೆ. ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿಯುತ್ತಿದ್ದು ನೂರಾರು ಎಕ್ರೆ ಭತ್ತದ ಗದ್ದೆಗಳು ಜಲಾವೃತವಾಗಿದೆ.
ಕರಾವಳಿ ವರದಿ: ಗುರುವಾರ ಬೆಳಗ್ಗೆಯಿಂದ ಉಡುಪಿ, ಮಂಗಳೂರು, ಪುತ್ತೂರು, ಬಂಟ್ವಾಳ, ಸುರತ್ಕಲ್ ನಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ನಗರದಲ್ಲಿ ಬಿಟ್ಟೂ ಬಿಟ್ಟೂ ಮಳೆ ಸುರಿಯುತ್ತಿದ್ದರೆ, ಸುಳ್ಯ, ಪುತ್ತೂರು, ಮೂಡುಬಿದಿರೆ, ಸುರತ್ಕಲ್, ಕಿನ್ನಿಗೋಳಿ, ಬಂಟ್ವಾಳದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ.
ಕಡಬದಲ್ಲಿ ಹೊಸಮಠ ಸೇತುವೆ ಮುಳುಗಡೆಯಾಗಿದೆ. ಶನಿವಾರವೂ ಮಳೆ ಮುಂದುವರೆದಿದ್ದು ಉಡುಪಿ ಜಿಲ್ಲೆಯಲ್ಲಿ ಆರು ಗ್ರಾಮಗಳು ಜಲಾವೃತವಾಗಿವೆ.
ಚಿಕ್ಕಮಗಳೂರು ವರದಿ: ಹೇಮಾವತಿ, ಭದ್ರಾ ಹಾಗೂ ತುಂಗಾ ನದಿಗಳು ತುಂಬಿ ಹರಿಯುತ್ತಿವೆ. ಕೊಪ್ಪ ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿದೆ. ನೂರಾರು ಎಕರೆಯಲ್ಲಿ ಬೆಳೆದ ಬೆಳೆ ಜಲಾವೃತವಾಗಿದೆ.
ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಮತ್ತು ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ಶಾಲೆ, ಕಾಲೇಜುಗಳಿಗೆ ಶನಿವಾರವೂ ರಜೆ ಮುಂದುವರಿಸಲಾಗಿದೆ.

ದಾವಣಗೆರೆ ವರದಿ: ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಶನಿವಾರ ರಜೆ ಘೋಷಣೆ ಮಾಡಲಾಗಿದೆ.
ಬೆಳಗಾವಿ, ಹಾವೇರಿ ವರದಿ: ಮಹಾರಾಷ್ಟ್ರದ ಜಲಾಶಯಗಳಿಂದ ಸುಮಾರು 1.50 ಲಕ್ಷ ಕ್ಯೂಸೆಕ್ ಪ್ರಮಾಣದಲ್ಲಿ ನೀರು ಹರಿದು ರಾಜ್ಯಕ್ಕೆ ಬರುತ್ತಿದ್ದು, ಚಿಕ್ಕೋಡಿ ತಾಲ್ಲೂಕಿನ 9 ಹಿರೇಕೆರೂರಿನ 4 ಸೇತುವೆಗಳು ಮುಳುಗಡೆಯಾಗಲಿದೆ.
ಜಲಾಶಯದಲ್ಲಿ ಒಳ ಹರಿವು ಹೆಚ್ಚಳ:
ಮಳೆಯಿಂದಾಗಿ ರಾಜ್ಯದ ಕೆಲ ಜಲಾಶಯಗಳು ಭರ್ತಿಯಾದರೆ ಇನ್ನು ಕೆಲವು ಜಲಾಶಯಗಳು ತುಂಬುವ ಹಂತ ತಲುಪಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆಯ 1633 ಅಡಿ ಎತ್ತರದ ತುಂಗಭದ್ರಾ ಜಲಾಶಯ ಬಹುತೇಕ ಭರ್ತಿಯಾಗಿದ್ದು 1631.50 ಅಡಿ ತಲುಪಿದೆ. ಜಲಾಶಯದ ಒಳಹರಿವು ಒಂದು ಲಕ್ಷ ಕ್ಯೂಸೆಕ್ ಮೀರಿದ್ದು ಅಣೆಕಟ್ಟೆಯ 20 ಕ್ರೆಸ್ಟ್ ಗೇಟ್ ಗಳಿಂದ 65 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1797.35 ಅಡಿಗಳಿಗೆ ಏರಿಕೆಯಾಗಿದ್ದು, ಒಂದೇ ದಿನಲ್ಲಿ ಮತ್ತೆ 4 ಅಡಿ ಹೆಚ್ಚಾಗಿದೆ.
ಶಿವಮೊಗ್ಗದ ಭದ್ರಾ ಜಲಾಶಯಕ್ಕೆ 35,670 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು 8.70 ಅಡಿ ನೀರು ಸಂಗ್ರಹವಾದರೆ ಜಲಾಶಯ ಭರ್ತಿಯಾಗಲಿದೆ. ಪ್ರಸ್ತುತ 177.30 ಅಡಿ ನೀರು ಸಂಗ್ರಹವಾಗಿದೆ.
ಮಂಡ್ಯ ಜಿಲ್ಲೆಯಲ್ಲಿ ಕೆಆರ್ಎಸ್ ಅಣೆಕಟ್ಟೆಗೆ 18,539 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಣೆಕಟ್ಟು ಭರ್ತಿಯಾಗಲು ಇನ್ನು 9 ಅಡಿ ನೀರು ಸಂಗ್ರಹವಾಗಬೇಕಿದೆ. ನೀರಿನ ಮಟ್ಟ 115.20 ಅಡಿಗೆ ತಲುಪಿದ್ದು, 9,130 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಹಾರಂಗಿ ಜಲಾಶಯದಿಂದ 5,989 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
| ಭಾರೀ ಮಳೆ: ಯಾವ ಜಲಾಶಯದಲ್ಲಿ ಎಷ್ಟು ನೀರಿದೆ? | |||||
| ಜಲಾಶಯ | ಗರಿಷ್ಠ ಮಟ್ಟ | ಇಂದಿನ ನೀರಿನ ಮಟ್ಟ | ಕಳೆದ ವರ್ಷದ ಮಟ್ಟ | ||
| ಲಿಂಗನಮಕ್ಕಿ | 1819 | 1797.35 | 1815.20 | ||
| ತುಂಗಭದ್ರಾ | 1633.00 | 1631. 76 | 1631. 02 | ||
| ಹಾರಂಗಿ | 2,859 | 2857.00 | 2856.00 | ||
| ಕೆಆರ್ಎಸ್ | 124.80 | 115.20 | 124.80 | ||
| ಹೇಮಾವತಿ | 2922 | 2,918.41 | 2,921.40 | ||
| ಕಬಿನಿ | 2284 | 2281.00 | 2280.00 | ||
| ಭದ್ರಾ | 186.00 | 177.30 | 184.10 | ||
* ನೀರಿನ ಮಟ್ಟ ಅಡಿಗಳಲ್ಲಿ












Click it and Unblock the Notifications