ಮದ್ದೂರಿನಲ್ಲಿ ಬೌಬೌ ದರ್ಬಾರ್, ಆತಂಕಗೊಂಡ ಜನ
ಮಂಡ್ಯ, ಡಿಸೆಂಬರ್, 04: ಹಲವು ದಿನಗಳಿಂದ ಬೀದಿ ನಾಯಿಗಳ ಹಾವಳಿಯನ್ನು ಮದ್ದೂರು ಪಟ್ಟಣ ನಿವಾಸಿಗಳು ಎದುರಿಸುತ್ತಿದ್ದು, ಮನೆಯಿಂದ ಹೊರಗೆ ಹೋದರೆ ಯಾವ ನಾಯಿಗಳು ಅಟ್ಟಿಸಿಕೊಂಡು ಬಂದು ಕಚ್ಚುತ್ತವೋ, ನಮಗೆ ಏನಾಗುತ್ತೋ ಎಂಬ ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ.
ನಗರದ ಪೇಟೆಬೀದಿ, ಸರ್ಕಾರಿ ಆಸ್ಪತ್ರೆ ಮುಂಭಾಗ, ಲೀಲಾವತಿ ಬಡಾವಣೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಎಚ್.ಕೆ.ವಿ.ನಗರ, ಸೋಮೇಗೌಡರ ಬೀದಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ನಾಯಿ ಹಾವಳಿ ಹೆಚ್ಚಾಗಿದೆ. ಸದಾ ಮೈ ಮೇಲೆ ಎರಗುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋದ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ.[ಬೀದಿನಾಯಿಗಳ ಹಾವಳಿಗೆ ಗುಂಡೂರು ಮಹಿಳೆ ಬಲಿ]

ಮುಂಜಾನೆ ವಾಯು ವಿಹಾರಕ್ಕೆ ಹೋಗುವ ವಯೋವೃದ್ಧರು, ಮಹಿಳೆಯರು ಹಾಗೂ ದಿನ ಪತ್ರಿಕೆ ಹಾಕುವ ಹುಡುಗರು ನಾಯಿಗಳ ಹಾವಳಿಯಿಂದ ಬೇಸತ್ತಿದ್ದಾರೆ. ನಾಯಿಗಳ ಹಾವಳಿಗೆ ಬೀದಿಗಳಲ್ಲಿ ಜನ ಎಸೆಯುವ ಆಹಾರ ಪದಾರ್ಥ, ಮಾಂಸ ಅಂಗಡಿಗಳಲ್ಲಿನ ತ್ಯಾಜ್ಯವೇ ಮುಖ್ಯ ಕಾರಣವಾಗಿದೆ. ರಸ್ತೆಗಳಲ್ಲೇ ವಾಸ್ತವ್ಯ ಹೂಡುತ್ತಿರುವ ನಾಯಿಗಳ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿವೆ.[ಬೆಂಗ್ಳೂರಲ್ಲಿ ಸಾಕು ನಾಯಿ ಸುಸು ಮಾಡಿದರೂ ದಂಡ ಕಟ್ಬೇಕು!]
ಸಾಕು ಪ್ರಾಣಿಗಳ ಮೇಲೆಯೂ ಎರಗುವ ಇವುಗಳ ಹಾವಳಿ ನಿಯಂತ್ರಿಸಿ ನೆಮ್ಮದಿಯಾಗಿ ಓಡಾಡಲು ಅವಕಾಶ ಮಾಡಿಕೊಡಿ. ಜನರಿಗೆ ಸಮಸ್ಯೆಯಾಗಿ ಕಾಡುತ್ತಿರುವ, ಜೀವಕ್ಕೆ ಸಂಚಕಾರ ತರುವ ಬೀದಿನಾಯಿಗಳಿಂದ ರಕ್ಷಿಸಿ ಎಂದು ಜನ ದುಂಬಾಲು ಬೀಳುತ್ತಿದ್ದಾರೆ. ಆದರೆ ಪುರಸಭೆ ಮಾತ್ರ ಮನವಿಗೆ ಕಿಂಚಿತ್ತೂ ಪ್ರಾತಿನಿದ್ಯ ನೀಡುತ್ತಿಲ್ಲ ಎಂದು ಜನರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications