ಮಂಗಳೂರಲ್ಲಿ ಐಸಿಸ್ ಚಟುವಟಿಕೆ: ಹೇಳಿಕೆಗೆ ಖಾದರ್ ಗರಂ
ಕಾರವಾರ, ಅಕ್ಟೋಬರ್ 06: ಮಂಗಳೂರಿನಲ್ಲಿ ಐಸಿಸ್ ಚಟುವಟಿಕೆ ನಡೆಯುತ್ತಿದೆ ಎಂದು ಹೇಳಿದವರನ್ನ ಮೊದಲು ತನಿಖೆ ಮಾಡಬೇಕು. ಒಂದು ವೇಳೆ ಸರ್ಕಾರಕ್ಕೆ, ಗುಪ್ತಚರ ಇಲಾಖೆಗೆ ತಿಳಿಯದ ಮಾಹಿತಿಯನ್ನು ಆತ ನೀಡಿದ್ದಾನೆ ಅಂತಾದರೆ ಅವನಿಗೆ ದೊಡ್ಡ ಬಹುಮಾನವೊಂದನ್ನು ನೀಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ಉತ್ತರಕನ್ನಡ ಜಿಲ್ಲೆ ಕಾರವಾರದಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಐಸಿಸ್ ಚಟುವಟಿಕೆ ನಡೆಯುತ್ತಿದೆ. ಅಲ್ಲಿನ ಮಸೀದಿಯೊಂದರಲ್ಲಿ ಗುಪ್ತವಾಗಿ ಕಾರ್ಯಚರಣೆ ನಡೆಯುತ್ತಿದೆ ಅಂತಾದರೆ ಇಷ್ಟು ದಿನ ವಿಷಯ ಗೊತ್ತಿದ್ದರು ಪೊಲೀಸರಿಗೆ ಯಾಕೆ ಆತ ಈವರೆಗೆ ಹೇಳಿಲ್ಲ? ನಿಜವಾದ ದೇಶಪ್ರೇಮಿಯಾಗಿದ್ದರೆ ಆತ ಮೊದಲೇ ಹೇಳಬೇಕಿತ್ತು. ಅವರು ಹೇಳಿದ್ದು ಸತ್ಯವಾಗಿದ್ದಲ್ಲಿ ಇದನ್ನು ಮಟ್ಟಹಾಕಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ಹೇಳಿದವನ ಹಿನ್ನೆಲೆ ಏನು? ಯಾವ ಉದ್ದೇಶಕ್ಕೆ ಹೇಳಿದ್ದಾನೆ? ಎಂಬುದರ ತನಿಖೆ ನಡೆಯಬೇಕು. ಮಂಗಳೂರಿನಲ್ಲಿ ಬಹುತೇಕ ಎಲ್ಲ ಸಂಘಟನೆಗಳು ಉತ್ತಮವಾಗಿವೆ ಎಂದಿದ್ದಾರೆ.
ಅನ್ನಭಾಗ್ಯದಲ್ಲಿ ಸೋರಿಕೆ ತಡೆಗಟ್ಟಿದ್ದೇವೆ: ಪಿಒಎಸ್ ತಂತ್ರಾಂಶ, ಕೂಪನ್ ನಿಂದಾಗಿ ಅನ್ನಭಾಗ್ಯದಲ್ಲಾಗುತ್ತಿದ್ದ ಸೋರಿಕೆಯನ್ನು ತಡೆಗಟ್ಟಲಾಗಿದೆ. ರಾಜ್ಯದಲ್ಲಿ ಸುಮಾರು 10 ಲಕ್ಷ ಬೋಗಸ್ ಕಾರ್ಡ್ ಗಳನ್ನು ರದ್ದುಗಿಳಿಸಿದ್ದೇವೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ 40 ಸಾವಿರ ಮೆಟ್ರಿಕ್ ಟನ್ ಅಕ್ಕಿ ಉಳಿತಾಯವಾಗಿದೆ.
ಅನ್ನಭಾಗ್ಯ ಯೋಜನೆಯನ್ನು ಈ ಹಿಂದೆ ಕನ್ನಭಾಗ್ಯವೆಂದು ಅಪಹಾಸ್ಯ ಮಾಡುತ್ತಿದ್ದವರು ಅನ್ನಭಾಗ್ಯದ ಯಶಸ್ಸಿನಿಂದಾಗಿ ಈಗ ನಮ್ಮ ಭಾಗ್ಯ ಎನ್ನುತಿದ್ದಾರೆ. ದೇಶದಲ್ಲಿಯೇ ಕರ್ನಾಟಕ ಅನ್ನಭಾಗ್ಯದ ಯೋಜನೆಯ ಮೂಲಕ ಬಡ, ದುಡಿಯುವ, ಕಾರ್ಮಿಕ ವರ್ಗದ ಹಸಿವು ನೀಗಿಸುತ್ತಿರುವ ಮೊದಲ ರಾಜ್ಯವಾಗಿದೆ ಎಂದಿದ್ದಾರೆ.
ಪುನರ್ ಬೆಳಕು ಯೋಜನೆಯಲ್ಲಿ ಎಲ್ಇಡಿ ಬಲ್ಬ್: ಈಗಾಗಲೇ ಅಡುಗೆ ಅನಿಲ ಸಂಪರ್ಕಹೊಂದಿದ ಪಡಿತರದಾರರಿಗೂ ಸೀಮೆಎಣ್ಣೆ ವಿತರಿಸುವ ಯೋಜನೆ ಜಾರಿಯಲ್ಲಿದೆ. ಆದರೆ ಸೀಮೆಎಣ್ಣೆ ಬೇಡವೆಂದವರಿಗೆ ಪುನರ್ ಬೆಳಕು ಯೋಜನೆಯಡಿ ರೀಚಾರ್ಜೇಬಲ್ ಎರಡು ಎಲ್ಇಡಿ ಬಲ್ಬ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿದರು.












Click it and Unblock the Notifications