ಮಂಗಳೂರು ಕುಕ್ಕರ್ ಬ್ಲಾಸ್ಟ್ ಕೇಸ್: ತಮ್ಮ ಹೇಳಿಕೆ ಸಮರ್ಥಿಸಿಕೊಂಡ ಡಿಕೆಶಿ
ಮಂಗಳೂರು, ಡಿಸೆಂಬರ್ 16: ಮಂಗಳೂರಿನ ಪ್ರೆಶರ್ ಕುಕ್ಕರ್ ಸ್ಫೋಟವನ್ನು 'ಸಂಯೋಜಿತ ದಾಳಿ ಎಂದು ಸೂಚಿಸುವ ರೀತಿಯಲ್ಲಿ ನೀಡಿದ್ದ ಹೇಳಿಕೆಯನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ನಡೆಸಿರುವ ಮತದಾರರ ಅಂಕಿ-ಅಂಶಗಳ ಕಳ್ಳತನ ಹಗರಣವನ್ನು ಮುಚ್ಚಿಹಾಕಲು ಇದೊಂದು ದೊಡ್ಡ ಪ್ರಯತ್ನ ಎಂದು ಡಿಕೆಶಿ ಆರೋಪಿಸಿದ್ದಾರೆ. ಈ ವಿಚಾರದಲ್ಲಿ ಯಾರ ಬೆಂಬಲವನ್ನೂ ಬಯಸುವುದಿಲ್ಲ ಎಂದು ಹೇಳಿದ ಕಾಂಗ್ರೆಸ್ ನಾಯಕ, ತಮ್ಮ ನಿಲುವು ಮತ್ತು ಮಾಹಿತಿ ಪಕ್ಕಾ ಎಂದು ಪ್ರತಿಪಾದಿಸಿದ್ದಾರೆ.
ಮಂಗಳೂರು ಕುಕ್ಕರ್ ಬ್ಲಾಸ್ ಕೇಸ್: ತನಿಖೆಯಾಗದೇ ಪ್ರಯಾಣಿಕನನ್ನು ಭಯೋತ್ಪಾದಕ ಎನ್ನುವುದೇ?
''ಕುಕ್ಕರ್ ಸ್ಫೋಟದ ಘಟನೆಯ ಬಗ್ಗೆ ನಾನು ಹೇಳಿದ್ದು ಏನೆಂದರೆ, ಈ ಸ್ಫೋಟದ ಹಿಂದೆ ಇರುವವರು ಭಯೋತ್ಪಾದಕರೇ ಅಥವಾ ಅಲ್ಲವೇ ಎಂಬುದನ್ನು ಗುರುತಿಸಲು ಇನ್ನೂ ತನಿಖೆ ನಡೆಯಬೇಕಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆರೋಪಿ ಮಾತನಾಡುವ ಸ್ಥಿತಿಯಲ್ಲಿಲ್ಲ, ಮಾಧ್ಯಮಗಳು ತರಾತುರಿಯಲ್ಲಿ ಯಾವುದೇ ತೀರ್ಮಾನಕ್ಕೆ ಬರಬಾರದು,'' ಎಂದು ತಮ್ಮ ಹೇಳಿಕೆಯನ್ನು ಉಲ್ಲೇಖಿಸಿ ಶಿವಕುಮಾರ್ ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷರ ಆರೋಪಗಳೇನು?
'ಮಂಗಳೂರು ಕುಕ್ಕರ್ ಬ್ಲಾಸ್ಟ್ ಪ್ರಕರಣದ ವಿಷಯದ ಬಗ್ಗೆ ಮಂಗಳೂರು ಕಮಿಷನರ್ ಹೇಳಿಕೆಗೆ ಮುಂಚೆಯೇ, ಬಿಜೆಪಿ ಸರ್ಕಾರವು ಮತದಾರರ ಮಾಹಿತಿ ಕಳ್ಳತನದ ಹಗರಣದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪೊಲೀಸ್ ಮಹಾನಿರ್ದೇಶಕರನ್ನು ಬಳಸಿಕೊಂಡಿದೆ,'' ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ದೂಷಿಸಿದರು. ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್, ಮತದಾರರ ಮಾಹಿತಿ ಕಳ್ಳತನದ ಹಗರಣದಿಂದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರವು ಮಂಗಳೂರಿನ ಪ್ರೆಶರ್ ಕುಕ್ಕರ್ ಸ್ಫೋಟವನ್ನು ಸಂಯೋಜಿತವಾಗಿ ಬಳಸಿಕೊಂಡಿದೆ' ಎಂದು ಆರೋಪಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಿವಕುಮಾರ್ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿ ಸ್ಫೋಟವನ್ನು ಮುಚ್ಚಿಹಾಕಿದ್ದಾರೆ ಎಂದು ಹೇಳುವುದು ಸೂಕ್ತವಲ್ಲ ಎಂದರು.
ತನಿಖೆ ನಡೆಸದೇ ಭಯೋತ್ಪಾದಕ ಎನ್ನುವುದು ಹೇಗೆ?
ಕಳೆದ ನವೆಂಬರ್ 19 ರಂದು ಮಂಗಳೂರಿನಲ್ಲಿ ನಡೆದ ಸ್ಫೋಟವನ್ನು ಉಲ್ಲೇಖಿಸಿದ ಡಿಕೆಶಿ, ''ತನಿಖೆಯಿಲ್ಲದೆ ಇದು ಭಯೋತ್ಪಾದಕ ಕೃತ್ಯ ಎಂದು ಘೋಷಿಸಲು ಪೊಲೀಸ್ ಮಹಾನಿರ್ದೇಶಕರನ್ನು ಕೇಳಿದ್ದು ಯಾರು? ಭಯೋತ್ಪಾದಕ ಯಾರು? ಇದು ಮುಂಬೈ, ದೆಹಲಿ, ಕಾಶ್ಮೀರ ಅಥವಾ ಪುಲ್ವಾಮಾದಲ್ಲಿ ನಡೆದಂತೆ ಭಯೋತ್ಪಾದನಾ ಕೃತ್ಯವೇ?,'' ಎಂದು ಡಿಕೆಶಿ ಕಟುವಾಗಿ ಪ್ರಶ್ನಿಸಿದರು.
ತನ್ನ ಹೇಳಿಕೆಯಿಂದ ಒಬ್ಬಂಟಿಯಾದ ಡಿಕೆ ಶಿವಕುಮಾರ್!
ಆಡಳಿತಾರೂಢ ಬಿಜೆಪಿಯ ಟೀಕೆಗಳ ನಡುವೆ ಕಾಂಗ್ರೆಸ್ ನಾಯಕರು ತಮ್ಮ ಬೆಂಬಲಕ್ಕೆ ನಿಲ್ಲದಿರುವ ಬಗ್ಗೆ ಡಿಕೆಶಿ ಪ್ರತಿಕ್ರಿಯೆ ನೀಡಿದರು. ''ನನಗೆ ಯಾರೂ ಬೇಡ... ಯಾರ ಬೆಂಬಲವನ್ನೂ ಬಯಸುವುದಿಲ್ಲ. ಈ ಬಗ್ಗೆ ನನ್ನ ನಿಲುವು ಮತ್ತು ಮಾಹಿತಿ ಪಕ್ಕಾ ಆಗಿದೆ.' ''ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಹೇಳುತ್ತಿದ್ದೇನೆ, ಬಿಜೆಪಿಯು ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳಲು ಸಮಸ್ಯೆಯಿಂದ ವಿಮುಖರಾಗಲು ದೊಡ್ಡ ಪ್ರಯತ್ನ ಮಾಡಿದೆ. ಅಂತಹ ಹಲವಾರು ಪ್ರಕರಣಗಳನ್ನು ಮುಚ್ಚಿಹಾಕಿದೆ ಎಂದು ಡಿಕೆಶಿ ದೂಷಿಸಿದರು.
ಎನ್ಐಎ ಅಧಿಕಾರಿಗಳಿಂದ ಪ್ರಕರಣದ ತನಿಖೆ
ಕಳೆದ ತಿಂಗಳು ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರು ನಾಗರಿಕ ಸಂಸ್ಥೆ ನಿಯೋಜಿಸಿದ ಚಿಲುಮೆ ಟ್ರಸ್ಟ್ ಮತದಾರರ ಹೆಸರು, ಆಧಾರ್ ಸಂಖ್ಯೆ, ಮಾತೃಭಾಷೆ, ಲಿಂಗ, ಧರ್ಮ, ಜಾತಿ, ಮತದಾರರ ಗುರುತಿನ ಸಂಖ್ಯೆ ಮತ್ತು ಮತದಾರರ ವಿವರಗಳನ್ನು ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಬೆಂಗಳೂರು ನಗರ ಪೊಲೀಸರು ಪ್ರಮುಖ ಆರೋಪಿ ಚಿಲುಮೆ ಟ್ರಸ್ಟ್ನ ಸಹ ಸಂಸ್ಥಾಪಕ ಕೃಷ್ಣಪ್ಪ ರವಿಕುಮಾರ್ನನ್ನು ಬಂಧಿಸಿದ್ದಾರೆ. ಈ ಸಂಬಂಧ ಎನ್ಐಎ ಪ್ರಕರಣದ ತನಿಖೆ ನಡೆಸುತ್ತಿದೆ.