ಮುಡಾ ಹಗರಣ ಆರೋಪಿ ಕೆಬ್ಬಳ್ಳಿ ಆನಂದ್ ಗೆ 'ಡಾನ್' ಬೆದರಿಕೆ?
ಮಂಡ್ಯ, ಜ. 31: ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ಗಳ ಹಣ ದುರುಪಯೋಗದ ಆರೋಪ ಎದುರಿಸುತ್ತಿರುವ ಕೆ. ಆನಂದ್ ಅಲಿಯಾಸ್ ಕೆಬ್ಬಳ್ಳಿ ಆನಂದ್ ಅವರಿಗೆ ಹಣ ನೀಡುವಂತೆ ಡಾನ್ ಕುಮಾರ್ ಎಂಬಾತ ಬೆದರಿಕೆ ಕರೆ ಮಾಡಿರುವ ಸುದ್ದಿ ಬೆಳಕಿಗೆ ಬಂದಿದೆ. ಈ ಬಗ್ಗೆ ಖುದ್ದು ಆನಂದ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ಕುಮಾರ್ ಅಲಿಯಾಸ್ ಡಾನ್ ಕುಮಾರ ಪ್ರತ್ಯೇಕ ಮೂರು ಮೊಬೈಲ್ ನಿಂದ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಬಗ್ಗೆ ಇದೀಗ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಗೆ ಆನಂದ್ ದೂರು ನೀಡಿದ್ದಾರೆ.[ಮಂಡ್ಯ ಮುಡಾ: 5 ಕೋಟಿ ಗೋಲ್ ಮಾಲ್ 3 ಜನ ಬಲೆಗೆ]

ಕೆಬ್ಬಳ್ಳಿ ಆನಂದ್ ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ 5 ಕೋಟಿ ರೂ. ಮತ್ತು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ(ಆರ್ ಸಿಯುಡಿಎ) ಪ್ರಾಧಿಕಾರದಿಂದ 9.9 ಕೋಟಿ ರೂ.ಗೂ ಹೆಚ್ಚು ಹಣ ದುರುಪಯೋಗ ಪ್ರಕರಣದ ಎದುರಿಸುತ್ತಿದ್ದು, ಬೇಲೇಕೇರಿ ಅದಿರು ಪ್ರಕರಣದಲ್ಲಿಯೂ ಈತನ ನಂಟಿದೆ ಎನ್ನಲಾಗುತ್ತಿದೆ. 2012ರಲ್ಲಿ ನಡೆದ ನಗರಾಭಿವೃದ್ಧಿ ಪ್ರಾಧಿಕಾರಗಳ ಹಣ ದುರುಪಯೋಗ ಪ್ರಕರಣದಲ್ಲಿ ಆನಂದ್ ಸೇರಿದಂತೆ ಎರಡೂ ಪ್ರಾಧಿಕಾರಗಳ ಅಂದಿನ ಆಯುಕ್ತರು ಸೇರಿದಂತೆ ಹಲವರು ಜೈಲ್ ಸೇರಿದ್ದರು.[ಜೆಡಿಎಸ್ ಶಾಸಕರು ಮುಡಾ ಸೈಟು ನುಂಗಿದ ಕಥೆ]
ಈ ನಡುವೆ ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿರುವ ಕುಮಾರ್ ಅಲಿಯಾಸ್ ಡಾನ್ ಕುಮಾರ ಎಂಬಾತ ಕೆಬ್ಬಳ್ಳಿ ಆನಂದ್ ಗೆ ಹಣ ನೀಡುವಂತೆ ಜನವರಿ 26 ರಿಂದ 29ರ ಅವಧಿಯಲ್ಲಿ ಅನೇಕ ಬಾರಿ ಬೆದರಿಕೆ ಕರೆಗಳನ್ನು ಮಾಡಿದ್ದಾನೆ ಎಂದು ಆನಂದ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಐಪಿಸಿ ಸೆಕ್ಷನ್ 384, 506ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಮಂಡ್ಯ ಸಬ್ ಡಿವಿಷನ್ ಡಿಎಸ್ಪಿ ಟಿಜೆ ಉದೇಶ ಅವರು ಹೇಳಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications