ಕೆ.ಆರ್.ಪೇಟೆ: ಕಾಮುಕ ವೃದ್ದನಿಂದ ಬಾಲಕಿ ಮೇಲೆ ಅತ್ಯಾಚಾರ
ಕೆ.ಆರ್.ಪೇಟೆ(ಮಂಡ್ಯ), ಜೂನ್ 05: ವೃದ್ಧ ಕಾಮುಕನೊಬ್ಬ ಆಟವಾಡಲು ಮೊಬೈಲ್ ನೀಡುವ ಮೂಲಕ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ಎಸಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ನಿವಾಸಿ ಶಿವಣ್ಣ(53) ಎಂಬಾತನೆ ಏಳು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕನಾಗಿದ್ದಾನೆ.
ಕೆ.ಆರ್.ನಗರ ತಾಲೂಕಿನ ಮಂಚನಹಳ್ಳಿ ಶಿವಣ್ಣ ಕಳೆದ 15 ವರ್ಷಗಳಿಂದ ಅಕ್ಕಿಹೆಬ್ಬಾಳು ಗ್ರಾಮದಲ್ಲಿಯೇ ವಾಸವಾಗಿದ್ದಾನೆ. ರುಕ್ಮಿಣಿ ಮತ್ತು ಲಕ್ಷ್ಮೀ ಎಂಬ ಇಬ್ಬರನ್ನು ವಿವಾಹವಾಗಿರುವ ಶಿವಣ್ಣ ಇದೀಗ ತನ್ನ ಎರಡನೇ ಪತ್ನಿ ಲಕ್ಷ್ಮೀಯೊಂದಿಗೆ ಅಕ್ಕಿಹೆಬ್ಬಾಳಿನಲ್ಲಿ ಕೃಷಿ ಕೂಲಿ ಕಾರ್ಮಿಕನಾಗಿ ಜೀವನ ನಡೆಸುತ್ತಿದ್ದಾನೆ. [ವಿಕೃತ ಕಾಮಿಯ ಕಣ್ಣಿಂದ ಪಾರಾದ ಬೆಂಗಳೂರಿನ ಅನಾಥ ಮಕ್ಕಳು!]

ಮೇ. 25ರಂದು ಮನೆಯ ಸಮೀಪದ ಏಳು ವರ್ಷದ ಬಾಲಕಿಗೆ ಆಟವಾಡಲು ಮೊಬೈಲ್ ಕೊಡುವುದಾಗಿ ಹೇಳಿ ಪುಸಲಾಯಿಸಿ ತನ್ನ ಮನೆಗೆ ಕರೆಸಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಏನೂ ಅರಿಯದ ಬಾಲಕಿ ಈ ವಿಷಯವನ್ನು ಮನೆಯಲ್ಲಿ ಹೇಳಿರಲಿಲ್ಲ.
ಕೃತ್ಯ ಎಸಗಿದ ಮಾರನೆಯ ದಿನ ಬಾಲಕಿ ಹೊಟ್ಟೆನೋವೆಂದು ಒದ್ದಾಡಿದೆ. ಆಗ ಹೆತ್ತವರು ಸಮೀಪದ ಅಕ್ಕಿಹೆಬ್ಬಾಳು ಗ್ರಾಮದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಗುವಿನ ಗುಪ್ತಾಂಗದಲ್ಲಿ ರಕ್ತ ಬಂದಿರುವುದು ಕಂಡು ಬಂದಿದ್ದರಿಂದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆ ತಿಳಿಸಿದ್ದು ಕೂಡಲೇ ಪೊಲೀಸರಿಗೆ ದೂರು ನೀಡುವಂತೆ ವೈದ್ಯರು ಸೂಚಿಸಿದ್ದಾರೆ.

ಆದರೆ, ಮಾನ ಮರ್ಯಾದೆಗೆ ಅಂಜಿದ ಹೆತ್ತವರು ಮನೆಯಲ್ಲಿ ಸಮಾಲೋಚಿಸಿ ಬಳಿಕ ದೂರು ನೀಡುವುದಾಗಿ ಹೇಳಿ ಅಲ್ಲಿಂದ ಮನೆಗೆ ಬಂದಿದ್ದಾರೆ. ಅಲ್ಲದೆ, ವಿಷಯ ಬಹಿರಂಗಗೊಂಡರೆ ಮಾನಮರ್ಯಾದೆ ಹೋಗುತ್ತದೆ ಎಂದು ತೆಪ್ಪಗೆ ಕುಳಿತಿದ್ದಾರೆ.
ಆದರೆ, ಈ ವಿಚಾರ ಗ್ರಾಮಸ್ಥರೊಬ್ಬರಿಂದ ಬಯಲಾಗಿದ್ದು, ರೊಚ್ಚಿಗೆದ್ದ ಗ್ರಾಮಸ್ಥರು ಕಾಮುಕ ಶಿವಣ್ಣನಿಗೆ ಚೆನ್ನಾಗಿ ತದಕಿದ್ದಾರೆ. ಈ ನಡುವೆ ಠಾಣೆಗೆ ಜಮಾಯಿಸಿದ ಸಾರ್ವಜನಿಕರು ಕಾಮುಕನಿಗೆ ತಕ್ಕ ಶಿಕ್ಷೆ ನೀಡುವಂತೆ ಆಗ್ರಹಿಸಿದ್ದಾರೆ. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ವಿರುದ್ಧ ಎಸ್ಸಿ, ಎಸ್ಟಿ ದೌರ್ಜನ್ಯ ಕಾಯ್ದೆ, ಅತ್ಯಾಚಾರ ಮತ್ತು ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.











Click it and Unblock the Notifications