ಐದು ಸಕ್ಕರೆ ಕಾರ್ಖಾನೆಗಳಿಗೆ ಮಂಡ್ಯ ಡಿಸಿ ನೋಟಿಸ್
ಮಂಡ್ಯ, ಡಿಸೆಂಬರ್, 16: ಸಕ್ಕರೆ ಕಾರ್ಖಾನೆಗಳು ಸರ್ಕಾರ ನಿಗದಿಪಡಿಸಿದಂತೆ ಹಣ ಪಾವತಿಸುತ್ತಿಲ್ಲ. ಭಾಗಶಃ ಮಾತ್ರ ಪಾವತಿಸಿ ವಂಚನೆ ಮಾಡುತ್ತಿದ್ದಾರೆ ಎಂದು ಮಂಡ್ಯ ಜಿಲ್ಲೆಯ ಐದು ಸಕ್ಕರೆ ಕಾರ್ಖಾನೆಗಳ ವಿರುದ್ಧ ರೈತರು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ನೋಟಿಸ್ ಹೊರಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಾದ ಕೊಪ್ಪ ಎನ್ಎಸ್ಎಲ್, ಕೆ.ಎಂ. ದೊಡ್ಡಿ ಚಾಂಷುಗರ್, ಕೆ.ಆರ್.ಪೇಟೆಯ ಐಸಿಎಲ್ ಮತ್ತು ಪಾಂಡವಪುರದ ಪಿಎಸ್ಎಸ್ ಕೆ ಕಾರ್ಖಾನೆ ಮತ್ತು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿರುವ ಬನ್ನಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿ ಡಾ. ಅಜಯ್ ನಾಗಭೂಷಣ್ ನೋಟಿಸ್ ನೀಡಿದ್ದಾರೆ.[ಮಂಡ್ಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಾರ್ಮಿಕ ಆತ್ಮಹತ್ಯೆ]
ನೋಟಿಸ್ ನಲ್ಲಿ ಜಿಲ್ಲಾಧಿಕಾರಿ ಹೇಳಿದ್ದೇನು?
ಪ್ರಸಕ್ತ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಸರ್ಕಾರದ ಆದೇಶದಂತೆ ಪ್ರತಿ ಟನ್ ಕಬ್ಬಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಎಫ್ ಆರ್ ಪಿ(Fair Remunerative Package) ದರದಂತೆ ಹಣ ಪಾವತಿಸಲು ಕೂಡಲೇ ಕ್ರಮವಹಿಸಬೇಕು. ಕಾರ್ಖಾನೆಗಳು ಕಾನೂನು ರೀತ್ಯಾ ಹಣ ಪಾವತಿಸಬೇಕು ಎಂದು ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನಲ್ಲಿ ಸೂಚಿಸಿದ್ದಾರೆ.
ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬು ಖರೀದಿ ಮತ್ತು ನಿಯಂತ್ರಣ ಅಧಿನಿಯಮದ ಪ್ರಕಾರ, ಕಬ್ಬು ಸರಬರಾಜು ಮಾಡಿದ 14 ದಿನಗಳ ಒಳಗೆ ಹಣ ಪಾವತಿಸಬೇಕು. ಆದಾಗ್ಯೂ ಬಾಕಿ ಇರುವ ಹಣವನ್ನು ವಿಳಂಬ ಅವಧಿಗೆ ಶೇ. 15ರಂತೆ ಬಡ್ಡಿ ಸೇರಿಸಿ ಸಂಬಂಧಿಸಿದ ರೈತರಿಗೆ ಹಣ ನೀಡಬೇಕು ಎಂದು ಅಧಿನಿಯಮದಲ್ಲಿ ನಿರ್ದೇಶಿಸಲಾಗಿದೆ.[ಸಿದ್ದರಾಮಯ್ಯ ಸರ್ಕಾರಕ್ಕೆ ಸಕ್ಕರೆ ಕಾಯಿಲೆ!]
ಸರ್ಕಾರದ ಆದೇಶವನ್ನು ಪಾಲಿಸದಿದ್ದರೆ ಕಾರ್ಖಾನೆಯಲ್ಲಿ ಉತ್ಪಾದಿಸುವ ಸಕ್ಕರೆಯನ್ನು ಮುಟ್ಟುಗೋಲು ಹಾಕಿಕೊಂಡು ರೈತರಿಗೆ ಬಾಕಿ ಇರುವ ಹಣವನ್ನು ಪಾವತಿಸಲು ಕ್ರಮವಹಿಸಲಾಗುವುದು. ಇದನ್ನು ಅಂತಿಮ ಎಚ್ಚರಿಕೆ ಎಂದು ಪರಿಗಣಿಸುವಂತೆ ನೋಟಿಸ್ ನಲ್ಲಿ ಸೂಚಿಸಲಾಗಿದೆ.