ಮಂಡ್ಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಕಾರ್ಮಿಕ ಆತ್ಮಹತ್ಯೆ
ಮಂಡ್ಯ, ಡಿಸೆಂಬರ್, 04 : ಮಂಡ್ಯ ಜಿಲ್ಲೆಯ ಕೋರಮಂಡಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಧೋರಣೆ ವಿರುದ್ಧ ಆಕ್ರೋಶಗೊಂಡ ಕೆ.ಆರ್.ಪೇಟೆ ತಾಲೂಕಿನ ಕಾರ್ಮಿಕರು ಪ್ರತಿಭಟನೆ ನಡೆಸಿದ್ದು, ಅವರಲ್ಲಿ ಒಬ್ಬ ಆತ್ಮಹತ್ಯೆಗೆ ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋರಮಂಡಲ್ ಕಾರ್ಖಾನೆಯ ಕಾರ್ಮಿಕ ಪುಟ್ಟರಾಜು ಸೇರಿದಂತೆ ಏಳು ಮಂದಿ ಕಾರ್ಮಿಕರನ್ನು ಕಾರ್ಖಾನೆ ಆಡಳಿತ ಮಂಡಳಿ ಕಳೆದ 2 ತಿಂಗಳ ಹಿಂದೆ ವಿನಾಕಾರಣ ಅಮಾನತು ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಪುಟ್ಟರಾಜು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.[ಅಧಿಕಾರಿ ಕಿರಿಕಿರಿ ತಾಳಲಾರದೆ ಕೆಎಸ್ಆರ್ ಟಿಸಿ ಚಾಲಕ ಆತ್ಮಹತ್ಯೆ]
ಕೋರಮಂಡಲ್ ಸಕ್ಕರೆ ಕಾರ್ಖಾನೆಗೆ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿ ಗ್ರಾಮದ ಭದ್ರಶೆಟ್ಟಿಯವರು ಜಮೀನು ನೀಡಿದ್ದಕ್ಕಾಗಿ ಅವರ ಮಗ ಪುಟ್ಟರಾಜುವಿಗೆ ಕಾರ್ಖಾನೆಯಲ್ಲಿ ಕೆಲಸ ನೀಡಲಾಗಿತ್ತು. ಕಾರ್ಖಾನೆಯ ಆರಂಭ ದಿನಗಳಿಂದಲೂ ಕೆಲಸ ಮಾಡುತ್ತಿದ್ದ ಪುಟ್ಟರಾಜು ಸೇರಿದಂತೆ 7 ಮಂದಿಯನ್ನು ಆಡಳಿತ ಮಂಡಳಿ ಕೆಲಸದಿಂದ ತೆಗೆದಿದ್ದರು.
ಅಮಾನತು ಮಾಡಿದ್ದರಿಂದ ಪುಟ್ಟರಾಜು ಕೆಲಸ, ಸಂಬಳವಿಲ್ಲದೆ ಸಂಸಾರ ನಡೆಸಲು ಕಷ್ಟಪಡುತ್ತಿದ್ದರು. ಇದರಿಂದ ಬೇಸತ್ತು ಬುಧವಾರ ಸಂಜೆ ಕಾರ್ಖಾನೆ ಸಮೀಪವಿರುವ ತಮ್ಮ ಜಮೀನಿನ ಬಳಿ ವಿಷ ಸೇವಿಸಿದ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.[ತಾಯಿ ಮಕ್ಕಳಿಗೆ ವಿಷವಿಕ್ಕಿದ ಕಿತ್ತು ತಿನ್ನುವ ಬಡತನ]
ಕಾರ್ಮಿಕರನ್ನು ವಿನಾಕಾರಣ ಅಮಾನತ್ತು ಮಾಡಿ ಎರಡು ತಿಂಗಳು ಕಳೆದರೂ ಸಮಸ್ಯೆಯನ್ನು ಬಗೆಹರಿಸಲು ಮುಂದಾಗದ ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆಯ ಕಾರ್ಮಿಕ ವಿರೋಧಿ ಧೋರಣೆಯಿಂದ ಕಾರ್ಮಿಕರು ಅನ್ಯ ಮಾರ್ಗವಿಲ್ಲದೆ ವಿಷ ಸೇವಿಸುವಂತಾಗಿದೆ ಎಂದು ಕಾರ್ಮಿಕರು ಅಸಹಾಯಕತೆ ತೋಡಿಕೊಂಡಿದ್ದಾರೆ.