ಬೆಂಗಳೂರು ಟು ಕೊಯಮತ್ತೂರು ಗಿರಿಧರ್ ಕಾಮತ್ 'ನಟರಾಜ ಸರ್ವೀಸ್'
ಕೊಯಮತ್ತೂರು, ಸೆಪ್ಟೆಂಬರ್ 12: ಕರ್ನಾಟಕ-ತಮಿಳುನಾಡಿನಲ್ಲಿ ಕಾವೇರಿ ವಿವಾದ ಭುಗಿಲೆದ್ದಿದ್ದರೆ, ಬೆಂಗಳೂರಿನ ವ್ಯಕ್ತಿಯೊಬ್ಬರು ಸಂತೋಷ ಹಾಗೂ ಆರೋಗ್ಯ ರಕ್ಷಣೆಯ ಸಂದೇಶ ಹೊತ್ತು ನಡೆದು, ಸೈಕಲ್ ತುಳಿದು ಬೆಂಗಳೂರಿನಿಂದ ಕೊಯಮತ್ತೂರು ತಲುಪಿದ್ದಾರೆ.
ಬೆಂಗಳೂರಿನ, 46 ವರ್ಷದ ಗಿರಿಧರ್ ಕಾಮತ್ ತಮ್ಮ ಹುಟ್ಟಿದ ದಿನವನ್ನು ವಿಶೇಷವಾಗಿ ಆಚರಿಸಿಕೊಳ್ಳುವ ಸಲುವಾಗಿ 400 ಕಿ.ಮೀ. ದೂರದ ಈ ಪ್ರಯಾಣವನ್ನು ಆರು ದಿನದಲ್ಲಿ ಮುಗಿಸುವ ಗುರಿ ಹಾಕಿಕೊಂಡು ಆರಂಭಿಸಿದ್ದರು.[ತಮಿಳುನಾಡು-ಕರ್ನಾಟಕ ನಡುವೆ ಬಸ್ ಸಂಚಾರ ಸ್ಥಗಿತ]
ಹಳ್ಳಿ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು, ಕೊಯಮತ್ತೂರಿನ ಇಶಾ ವಿದ್ಯಾಶಾಲೆಗಾಗಿ ಹಣ ಸಂಗ್ರಹಿಸಬೇಕು ಎಂಬ ಗುರಿಯಿಟ್ಟುಕೊಂಡು ಈ ಪ್ರಯಾಣ ಆರಂಭಿಸಿದವರು ಗಿರಿಧರ್. "ನಾನು 200 ಕಿಲೋಮೀಟರ್ ನಡೆದೆ. ಆದರೆ ಪಾದದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಾಕಿ 200 ಕಿಲೋಮೀಟರ್ ಸೈಕಲ್ ತುಳಿದೆ" ಎಂದರು ಗಿರಿಧರ್.
"ನಾನು ಹಲವು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದೇನೆ. ದಿನಕ್ಕೆ ಹತ್ತು ಕಿ.ಮೀ. ನಡೀತೀನಿ. ಬೆಂಗಳೂರಿನಿಂದ ಚೆನ್ನೈಗೆ ಮುನ್ನೂರೈವತ್ತು ಕಿ,ಮೀ. ಓಡಿ ತಲುಪಿದ್ದೇನೆ. ಬೆಂಗಳೂರಿನಿಂದ ಹೈದರಾಬಾದ್ ಹಾಗೂ ಮೈಸೂರಿಗೂ ಹಲವು ಬಾರಿ ಓಟದ ಮೂಲಕವೇ ತಲುಪಿದ್ದೇನೆ" ಎನ್ನುತ್ತಾರೆ ಗಿರಿಧರ್.
ಗಿರಿಧರ್ ಜತೆಗೆ ಅವರ ಪತ್ನಿ ಹಾಗೂ ಮಕ್ಕಳು ಕೂಡ ಸಾಥ್ ನೀಡಿದರು. ಅವರ ಪತ್ನಿ ಕೆಲ ದೂರ ಹೆಜ್ಜೆ ಹಾಕಿದ್ದಾರೆ. ಆ ನಂತರ ಜೀಪ್ ನಲ್ಲಿ ತೆರಳಿದ್ದಾರೆ. "ನಮಗೆ ಅವರ ಮೇಲೆ ತುಂಬ ವಿಶ್ವಾಸ ಇದೆ. ನಮ್ಮ ಜೊತೆಗೆ ಯಾವುದೇ ಆಂಬ್ಯುಲೆನ್ಸ್, ವೈದ್ಯರ ತಂಡ ಇಲ್ಲ. ನೀರು, ಹಣ್ಣು, ರಾಗಿಯಿಂದ ಮಾಡಿದ ಆಹಾರ ಪದಾರ್ಥ ತೆಗೆದುಕೊಂಡು ಹೊಗ್ತಿದೀವಿ" ಎಂದವರು ಗಿರಿಧರ್ ಪತ್ನಿ ರಾಧಾ.[ಅಂತರ್ಜಾಲದಲ್ಲಿ ಕಾವೇರಿಗಾಗಿ ಹರಿದಾಡಿದ ಬೆಸ್ಟ್ ಟ್ರಾಲ್ಸ್]
ದಿನಕ್ಕೆ ಎಂಟು ಗಂಟೆ ವಿರಾಮ. ಮತ್ತು ಹನ್ನೆರಡು ಗಂಟೆ ಓಟ. ದೊಡ್ಡ ಸವಾಲೆಂದರೆ ಹಳ್ಳಿಗಾಡಿನಲ್ಲಿ ಮಂಜುಗಡ್ಡೆ ಸಿಗೋದಿಲ್ಲ. ಇಂಥ ದೂರದ ಓಟಕ್ಕೆ ಅದು ತುಂಬ ಅವಶ್ಯಕ ಎನ್ನುತ್ತಾರೆ ಗಿರಿಧರ್. ಸದ್ಗುರುಗಳ ಜನ್ಮದಿನವಾದ ಸೆಪ್ಟೆಂಬರ್ ಮೂರರಂದು ತಮ್ಮ ಪ್ರಯಾಣ ಆರಂಭಿಸಿದ ಗಿರಿಧರ್, ಅವರ ಜನ್ಮದಿನವಾದ 9ರಂದು ಪೂರ್ತಿ ಮಾಡಿದರು.
ಗೊಂಬೆ ಕಾರ್ಖಾನೆ ಮಾಲೀಕರಾದ ಗಿರಿಧರ್ ಅಳಂದೊರೈನಲ್ಲಿರುವ ಇಶಾ ವಿದ್ಯಾ ಶಾಲೆ ತಲುಪಿದ ನಂತರ, ತಮಗೆ ಗೊತ್ತಿರುವ ಮ್ಯಾಜಿಕ್ ಟ್ರಿಕ್ ಗಳನ್ನು ತೋರಿಸಿ ರಂಜಿಸಿದರು.