ಉತ್ತರಕ್ರಿಯೆ ನಡೆಸಲು ಬಂದ ಮಗ ನೇತ್ರಾವತಿ ನದಿ ಪಾಲಾದ
ಉಪ್ಪಿನಂಗಡಿ (ದ.ಕ ಜಿಲ್ಲೆ), ಜೂ.12: ಕಾಣೆಯಾದ ತಂದೆಗೆ ಸದ್ಗತಿ ಕೋರಲು ದುಬೈನಿಂದ ಬಂದ ಮಗ ನದಿಪಾಲಾದ ದಾರುಣ ಘಟನೆ ಬುಧವಾರ (ಜೂ 11) ಉಪ್ಪಿನಂಗಡಿ ನೇತ್ರಾವತಿ ನದಿಯ ಸಂಗಮ ತಾಣದಿಂದ ವರದಿಯಾಗಿದೆ.
ತಂದೆಯ ಸದ್ಗತಿ ಕಾರ್ಯ ನಡೆಸಿ ನದಿಯಲ್ಲಿ ಸ್ನಾನಕ್ಕಿಳಿದ ಕಾರ್ಕಳ ತಾಲೂಕು ನೆಲ್ಲಿಕಾರಿನ ಪ್ರಶಾಂತ್ (24) ನೇತ್ರಾವತಿ ನದಿಯ ಸೆಳೆತಕ್ಕೆ ಕೊಚ್ಚಿ ಹೋಗಿದ್ದಾರೆ. ಈ ಭೀಕರ ದೃಶ್ಯ ಪ್ರಶಾಂತ್ ಅವರ ತಾಯಿ ಮತ್ತು ಸಂಬಂಧಿಕರ ಕಣ್ಣ ಮುಂದೆಯೇ ನಡೆದಿದೆ.
ಕಾರ್ಕಳ ತಾಲೂಕು ನೆಲ್ಲಿಕಾರಿನ ಸುಂದರ ಪೂಜಾರಿ ಎಂಬವರು 20 ವರ್ಷಗಳ ಹಿಂದೆ ಕಾಣೆಯಾಗಿದ್ದರು. ಇತ್ತೀಚೆಗೆ ಅವರ ಕುಟುಂಬದಲ್ಲಿ ನೆಮ್ಮದಿಯಿಲ್ಲ ಎನ್ನುವ ಕಾರಣಕ್ಕಾಗಿ ಅವರ ಕುಟುಂಬಸ್ಥರು ಜ್ಯೋತಿಷಿಯೊಬ್ಬರ ಬಳಿ ಭವಿಷ್ಯ ಕೇಳಲು ಹೋಗಿದ್ದರು.

ಜ್ಯೋತಿಷಿ, ಕಾಣೆಯಾದ ತಂದೆ ಬದುಕಿ ಉಳಿದಿರುವುದು ಅನುಮಾನ. ಮಕ್ಕಳು ಪಿಂಡಪ್ರದಾನ ಮಾಡಿ ಅವರಿಗೆ ಉತ್ತರಕ್ರಿಯೆ ಮಾಡಬೇಕೆಂದು ಸಲಹೆ ನೀಡಿದ್ದಾರೆ. ಜ್ಯೋತಿಷಿಯವರ ಮಾತಿನಂತೆ ದುಬೈನಲ್ಲಿ ಉದ್ಯೋಗದಲ್ಲಿದ್ದ ಅವರ ಮಗ ಪ್ರಶಾಂತ್ ಉತ್ತರಕ್ರಿಯೆ ನಡೆಸಲು ಊರಿಗೆ ಬಂದಿದ್ದರು.
ಹತ್ತು ದಿನಗಳ ಹಿಂದೆ ಪ್ರಶಾಂತ್ ಉಪ್ಪಿನಂಗಡಿಗೆ ಬಂದು ತಂದೆಯ ಉತ್ತರ ಕ್ರಿಯೆಯ ಕೆಲಸಕಾರ್ಯ ಆರಂಭಿಸಿದ್ದರು. ಹುಲ್ಲಿನ ಮೂಟೆಯಲ್ಲಿ ಮಾಡಿದ ಪ್ರತಿಮೆಯನ್ನು ನದಿ ತಟದಲ್ಲಿ ದಹನ ಮಾಡಿ ನೇತ್ರಾವತಿ ಸಂಗಮ ತಾಣದಲ್ಲಿ ಸ್ನಾನ ಮಾಡಿ ಹೋಗಿದ್ದರು. ಆ ಬಳಿಕ ಬುಧವಾರ ತಂದೆಯ ಉತ್ತರಕ್ರಿಯಾದಿಗಳನ್ನು ನಡೆಸಲು ಮತ್ತೆ ತಾಯಿ, ಅಕ್ಕ ಮತ್ತಿತರ ಹತ್ತುಮಂದಿ ಸಂಬಂಧಿಕರ ಜತೆ ಬಂದಿದ್ದರು.
ಬುಧವಾರ ಬೆಳಗ್ಗೆ ಕ್ರಿಯೆ ಕರ್ಮಾದಿಗಳನ್ನು ಮುಗಿಸಿ ಹತ್ತು ದಿನಗಳ ಹಿಂದೆ ಸ್ನಾನ ಮಾಡಿದ ನದಿ ಪ್ರದೇಶದಲ್ಲೇ ಮತ್ತೆ ಸ್ನಾನಕ್ಕೆ ಇಳಿದಿದ್ದಾರೆ. ಆದರೆ ಮಳೆಯಿಂದ ಆ ಭಾಗದಲ್ಲಿ ನದಿ ನೀರಿನ ಪ್ರಮಾಣ ಏರಿಕೆಯಾಗಿರುವುದು ಆತನಿಗಾಗಲಿ, ಸಂಬಂಧಿಕರಿಗಾಗಲಿ ಗಮನಕ್ಕೆ ಬರಲೇ ಇಲ್ಲ. ನದಿಗೆ ಸ್ನಾನಕ್ಕೆ ಇಳಿದ ತಕ್ಷಣವೇ ಪ್ರಶಾಂತ್ ನದಿಯೊಳಗೆ ಮುಳುಗಿದ್ದಾರೆ.
ಸುದ್ದಿ ತಿಳಿದ ಊರಿನ ಈಜುಗಾರರು ನದಿ ಪಾತ್ರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಅಗ್ನಿಶಾಮಕ ದಳ ಕೂಡಾ ನದಿಯಲ್ಲಿ ಹುಡುಕಾಟ ನಡೆಸಿದರೂ ಶವ ಇದುವರೆಗೂ ಪತ್ತೆಯಾಗಿಲ್ಲ.












Click it and Unblock the Notifications