ಮಹಾರಾಷ್ಟ್ರ ಮುಖಭಂಗ: ರಾಜ್ಯ ಬಿಜೆಪಿಗೆ ಅಮಿತ್ ಶಾ ಖಡಕ್ ಸೂಚನೆ
ಮಹಾರಾಷ್ಟ್ರದಲ್ಲಿ ಸಂಖ್ಯಾಬಲವಿಲ್ಲದೇ ಅಧಿಕಾರ ರಚಿಸಲು ಹೋಗಿ ಮುಖಭಂಗ ಅನುಭವಿಸಿದ ಬಿಜೆಪಿ, ಈಗ ಅದರ ಎಫೆಕ್ಟ್ ನಿಂದಾಗಿ, ಬೇರೆ ಕಡೆ ಹಿನ್ನಡೆಯಾಗದಂತೆ ನೋಡಿಕೊಳ್ಳಲು ತಂತ್ರಗಾರಿಕೆ ರೂಪಿಸುತ್ತಿದೆ.
ಪ್ರಮುಖವಾಗಿ, ಕರ್ನಾಟಕದಲ್ಲಿ ಪಕ್ಷದ ಸರಕಾರ ಉಳಿಯಲು ನಿರ್ಣಾಯಕವಾಗಿರುವ ಉಪಚುನಾವಣೆಯಲ್ಲಿ, ಇದರ ಲಾಭವನ್ನು ಕಾಂಗ್ರೆಸ್, ಜೆಡಿಎಸ್ ಪಡೆಯದೇ ಇರಲು, ರಾಜ್ಯ ಬಿಜೆಪಿ ಸೂಕ್ತ ಹೆಜ್ಜೆಯನ್ನು ಇಡಬೇಕಿದೆ.
ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಶಿವಸೇನೆಯ ವಿರುದ್ದ ಕಿಡಿಕಾರಿದ್ದಾರೆ. "ಶಿವಸೇನೆ ಜನಾದೇಶವನ್ನು ಧಿಕ್ಕರಿಸಿದೆ. ಮೂರು ಪಕ್ಷಗಳು, ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು, ತಮ್ಮ ಸಿದ್ದಾಂತಗಳನ್ನೇ ಗಾಳಿಗೆ ತೂರಿವೆ" ಎಂದು ಶಾ, ಹರಿಹಾಯ್ದಿದಿದ್ದಾರೆ.
ಶಿವಸೇನೆ - ಕಾಂಗ್ರೆಸ್ - ಎನ್ಸಿಪಿ, ಈ ಮೂರು ಪಕ್ಷಗಳ 'ಮಹಾ ವಿಕಾಸ ಆಘಾಡಿ' ಹೆಸರಿನಲ್ಲಿನ ಸರಕಾರ, ಇಂದು (ನ 28) ಅಧಿಕೃತವಾಗಿ, ಅಸ್ತಿತ್ವಕ್ಕೆ ಬರಲಿದೆ. ಉದ್ಧವ್ ಠಾಕ್ರೆ, ಇಂದು, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಫಡ್ನವೀಸ್, ಅಜಿತ್ ಪವಾರ್ ಪ್ರಮಾಣವಚನ
ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ವಿಫಲಗೊಂಡ ನಂತರ, ವಿರೋಧ ಪಕ್ಷಗಳು, ಬಿಜೆಪಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದೆ. ಈಗ ಸಿದ್ದಾಂತದ ಬಗ್ಗೆ ಮಾತನಾಡುವ ಬಿಜೆಪಿ, ಅದ್ಯಾವ ಸಿದ್ದಾಂತದ ಮೇಲೆ, ಅಜಿತ್ ಪವಾರ್ ಜೊತೆ, ಬೆಳ್ಲಂಬೆಳಗ್ಗೆ ಪ್ರಮಾಣವಚನ ಸ್ವೀಕರಿಸಲು ಅನುಮತಿ ನೀಡಿತು ಎಂದು ತಿರುಗೇಟು ನೀಡುತ್ತಿದೆ

ರಾಜ್ಯ ಬಿಜೆಪಿಗೆ, ಅಮಿತ್ ಶಾ ಖಡಕ್ ಸೂಚನೆ
ಕರ್ನಾಟಕದಲ್ಲಿ, ಜೆಡಿಎಸ್ ಮತ್ತು ಕಾಂಗ್ರೆಸ್ ಇದೇ ವಿಚಾರವನ್ನು ಪ್ರಸ್ತಾವಿಸುತ್ತಿದೆ. ಜೊತೆಗೆ, ಅಜಿತ್ ಪವಾರ್ ಅವರಿಗೆ ಇಡಿ, ಕ್ಲೀನ್ ಚಿಟ್ ನೀಡಿದ ಬಗ್ಗೆಯೂ ಸಭೆಯಲ್ಲಿ ಟೀಕಿಸುತ್ತಿದೆ. ಮಹಾರಾಷ್ಟ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕ್ಷೇತ್ರಗಳಲ್ಲೂ ಉಪಚುನಾವಣೆ ನಡೆಯುತ್ತಿರುವುದರಿಂದ, ರಾಜ್ಯ ಬಿಜೆಪಿಗೆ, ಅಮಿತ್ ಶಾ ಖಡಕ್ ಸೂಚನೆ ರವಾಸಿದ್ದಾರೆ.

ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸೂಚನೆ
"ಮಹಾರಾಷ್ಟ್ರದ ವಿದ್ಯಮಾನಗಳಿಂದ ಪಕ್ಷಕ್ಕೆ ಹಿನ್ನಡೆಯಾಗದಂತೆ ನೋಡಿಕೊಳ್ಳಿ. ತುರ್ತಾಗಿ ಏನು ಕ್ರಮ ತೆಗೆದುಕೊಳ್ಳಬೇಕೋ, ಅದರ ಕಡೆ ಗಮನ ಹರಿಸಿ" ಎಂದು ಅಮಿತ್ ಶಾ, ಸಿಎಂ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಸೂಚನೆ ನೀಡಿದ್ದಾರೆಂದು ತಿಳಿದು ಬಂದಿದೆ.

ಅರವಿಂದ ಲಿಂಬಾವಳಿ ತುರ್ತು ಸಭೆ
"ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಚುನಾವಣಾ ನಿರ್ವಹಣಾ ಸಮಿತಿ ಸಭೆಯನ್ನು ಕರೆದು ಅವಲೋಕನ ನಡೆಸಿ" ಎನ್ನುವ ಸೂಚನೆಯೂ ಕೇಂದ್ರದಿಂದ ಬಂದಿದೆ. ಹಾಗಾಗಿ, ಬುಧವಾರ (ನ 27) ಅರವಿಂದ ಲಿಂಬಾವಳಿ ತುರ್ತು ಸಭೆಯನ್ನು ಕರೆದಿದ್ದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಪ್ರಚಾರ
ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಪೈಕಿ, ಮಹಾರಾಷ್ಟ್ರ ಗಡಿಭಾಗದ ಅಥಣಿ ಮತ್ತು ಗೋಕಾಕ್ ಕೂಡಾ ಸೇರಿದೆ. ಈಗಾಗಲೇ, ಆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಬಿರುಸಿನ ಪ್ರಚಾರ ನಡೆಸುತ್ತಿದೆ. ಮಹಾ ವಿದ್ಯಮಾನ, ಮತದಾರರಲ್ಲಿ ಪ್ರಭಾವ ಬೀರದಂತೆ, ನೋಡಿಕೊಳ್ಳಿ ಎನ್ನುವ ಫರ್ಮಾನು ದೆಹಲಿಯಿಂದ, ರಾಜ್ಯ ಬಿಜೆಪಿಗೆ ಬಂದಿದೆ.












Click it and Unblock the Notifications