'ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ'
ಬೆಂಗಳೂರು, ಜುಲೈ, 30: "ಸುಮ್ಮನಿರಿ, ನಾವ್ ಇಲ್ಲಿ ನಮಗಾಗಿ ಬಂದಿಲ್ಲ, ಗೋವಾ ಸರ್ಕಾರಕ್ಕೆ ಯಾಕೆ ಧಿಕ್ಕಾರ ಹಾಕ್ತೀರಾ? ನಮಗೆ ನಾವೇ ಧಿಕ್ಕಾರ ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ... ನಾವ್ ಇಲ್ಲಿಗೆ ಸುಮ್ಮನೆ ಕುಳಿತುಕೊಳ್ಳಲ್ಲ, ದೆಹಲಿಗೆ ಬೇಕಾದರೂ ತೆರಳಿ ಹೋರಾಟ ಮಾಡ್ತೇವೆ" ಹೀಗೆಂದು ಪಕ್ಕಾ ಜೋಗಿ ಶೈಲಿಯಲ್ಲೆ ಆಕ್ರೋಶ ಹೊರಹಾಕಿದ್ದು ನಟ ಶಿವರಾಜ್ ಕುಮಾರ್.
ನಾವು ಶಕ್ತಿ ಪ್ರದರ್ಶನ ಮಾಡಬೇಕಾಗಿಲ್ಲ. ನಮ್ಮನ್ನು ನೋಡಿ ಬೇರೆಯವರು ನಗುವಂತಾಗಿದೆ. ಜೋಕರ್ ಗಳಾಗಿ ಬದಲಾಗುತ್ತಾ ಇದ್ದೇವೆ. ಇದಕ್ಕೆಲ್ಲ ಹೋರಾಟದಿಂದಲೇ ಉತ್ತರ ನೀಡಬೇಕು ಎಂದು ಶಿವರಾಜ್ ಕುಮಾರ್ ಹೇಳಿದರು.[ನೀರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದ ಕನ್ನಡ ತಾರೆಯರು]
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸುರಿಯುವ ಮಳೆಯಲ್ಲೆ ನಿಂತು ಕನ್ನಡ ಹೋರಾಟಗಾರನ್ನು ಉದ್ದೇಶಿಸಿ ಮಾತನಾಡಿದ ಕರುನಾಡ ಚಕ್ರವರ್ತಿ, ನಾವು ನೆನೆಯುತ್ತಿದ್ದೇವೆ, ನೀವು ನೆನೆಯುತ್ತಿದ್ದೀರಿ..ಆದರೆ ಅಲ್ಲಿ ಉತ್ತರ ಕರ್ನಾಟಕದ ಜನ ನೀರಿಗಾಗಿ ಕಾಯುತ್ತಿದ್ದಾರೆ. ಕನ್ನಡ ಚಿತ್ರರಂಗದ ಬೆಂಬಲ ಯಾವಾಗಲೂ ಹೋರಾಟಕ್ಕೆ ಇದ್ದೇ ಇರುತ್ತದೆ ಎಂದು ಹೇಳಿದರು.
ಯಾವ ಸಮಸ್ಯೆ ಪರಿಹಾರ ಆಗಲ್ಲ
ನಾವು ಹೀಗೆ ಕುಳಿತಿದ್ದರೆ ಯಾವ ಸಮಸ್ಯೆ ಪರಿಹಾರ ಆಗಲ್ಲ. ಹೋರಾಟ ಮಾಡುವ ರೀತಿಯನ್ನು ಬದಲಾವಣೆ ಮಾಡಿಕೊಳ್ಳಬೇಕಿದೆ.
ಗೋವಾ ಸುಖವಾಗಿರುತ್ತೆ
ನಾವು ಇಲ್ಲಿ ಗೋವಾಕ್ಕೆ ಧಿಕ್ಕಾರ ಕೂಗಿದರೆ ಗೋವಾಕ್ಕೆ ಏನು ಆಗಲ್ಲ. ಇಲ್ಲಿ ಮೆರವಣಿಗೆ ಮಾಡುವ ಬದಲು ದೆಹಲಿಗೆ ತೆರಳಿ ಹೋರಾಟ ಮಾಡೋಣ.
ಒಳ್ಳೆ ರೀತಿಯಲ್ಲಿ ಹೋಗೋಣ
ಬೇರೆಯವರ ಮೇಲೆ ಆರೋಪ ಮಾಡುತ್ತ, ಗಲಭೆ ಮಾಡುತ್ತ ಹೋರಾಟ ಮಾಡುವುದು ಬೇಡ. ಒಳ್ಳೆ ರೀತಿಯಲ್ಲೇ ಮುಂದುವರಿಯೋಣ. ಅದೇ ಕನ್ನಡ ನಾಡಿಗೆ ಹೆಮ್ಮೆ.
ಕಲಾವಿದರನ್ನು ತಮಾಷೆ ಮಾಡ್ತಾರೆ!
ನೀವಿಲ್ಲಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತ ನಮಗೆ ಜೈಕಾರ ಹಾಕುತ್ತಿದ್ದಿರಿ. ಆದರೆ ನಿಜವಾಗಿ ಸಮಸ್ಯೆ ಬಗೆಹರಿಸಬೇಕಾದವರು ಇದನ್ನು ಟಿವಿಯಲ್ಲಿ ನೋಡಿ ತಮಾಷೆ ಮಾಡಿ ನಗುತ್ತಿದ್ದಾರೆ.
ಒಂದು ನಿಮಿಷ ಸುಮ್ಮನಿರಿ
ಶಿವರಾಜ್ ಕುಮಾರ್ ಭಾಷಣ ಆರಂಭ ಮಾಡುವುದಕ್ಕೂ ಮುನ್ನ ಹೋರಾಟಗಾರರ ಘೋಷಣೆ ಮೀತಿ ಮೀರರಿತ್ತು. ದಯವಿಟ್ಟು ಒಂದು ನಿಮಿಷ ಸುಮ್ಮನಿರಿ ಎಂದು ವಿನಂತಿ ಮಾಡಿಕೊಂಡೆ ಶಿವರಾಜ್ ಕುಮಾರ್ ಮಾತು ಆರಂಭಿಸಿದರು
ನಿನಗೆ ಭಾಳ್ ಪ್ರೀತಿ ಬಿಡಪ್ಪಾ
ಲಾರಿಯ ಮೇಲೆ ನಿಂತು ಮಳೆಯಲ್ಲೇ ಶಿವಣ್ಣ ಮಾತನಾಡುತ್ತಿದ್ದರೆ ಕೆಳಗಿದ್ದ ವ್ಯಕ್ತಿಯೊಬ್ಬ ಕನ್ನಡದ ಘೊಷಣೆ ಕೂಗುತ್ತಿದ್ದ. ಮಾತನಾಡುತ್ತಲೇ " ನಿನಗೇ ನಮ್ಮೆಲ್ಲರಿಗಿಂತ ಜಾಸ್ತಿ ಪ್ರೀತಿ ಕರ್ನಾಟಕದ ಮೇಲಿದೆ" ಬಿಡಪ್ಪಾ ಎಂದು ಹೇಳಿ ಶಿವರಾಜ್ ಕುಮಾರ್ ಮಾತು ಮುಂದುವರಿಸಿದರು.