ಮಾತುಕತೆ ಮೂಲಕ ಮಹದಾಯಿ ವಿವಾದಕ್ಕೆ ತೆರೆ?
ಬೆಂಗಳೂರು, ಆಗಸ್ಟ್ 03 : ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ನ್ಯಾಯಾಧೀಕರಣದ ಹೊರಗೆ ಬಗೆಹರಿಸಿಕೊಳ್ಳಬಹುದೇ ಎಂದು ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.
ನದಿ ನೀರಿನ ವಿವಾದದಲ್ಲಿ ಮಧ್ಯಂತರ ಅರ್ಜಿ ಸಲ್ಲಿಕೆ ಮಾಡುವುದು ಬೇಡ ಎಂದು ಕಾನೂನು ತಜ್ಞರ ತಂಡ ಸರ್ಕಾರಕ್ಕೆ ಸಲಹೆ ನೀಡಿತ್ತು. ಆದರೆ, ಸರ್ವಪಕ್ಷಗಳ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಅರ್ಜಿ ಸಲ್ಲಿಸಲಾಯಿತು. ನ್ಯಾಯಾಧೀಕರಣ ಅರ್ಜಿಯನ್ನು ವಜಾಗೊಳಿಸಿತು.[ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]
ಮಧ್ಯಂತರ ಅರ್ಜಿಯಲ್ಲಿ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿದ್ದೆಲ್ಲಿ? ಎಂಬ ಬಗ್ಗೆ ಸೂಕ್ಷ್ಮವಾಗಿ ಪರಿಶೀಲನೆ ನಡೆಸುವಂತೆ ಸರ್ಕಾರ ಕಾನೂನು ತಜ್ಞರ ತಂಡಕ್ಕೆ ಸೂಚನೆ ನೀಡಿದೆ. [ಮಹದಾಯಿ ತೀರ್ಪು: ಕನ್ನಡಿಗರು ಗಮನಿಸಬೇಕಾದ್ದು ಏನು?]
ಸರ್ವಪಕ್ಷ ಸಭೆಯಲ್ಲಿ ತೀರ್ಮಾನ : ಮಹದಾಯಿ ಹೋರಾಟದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಸರ್ವಪಕ್ಷಗಳ ಸಭೆಯನ್ನು ಕರೆಯಲಿದ್ದಾರೆ. ಈ ಸಭೆಯಲ್ಲಿ ನ್ಯಾಯಾಧೀಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.[ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]
ಮಹದಾಯಿ ನ್ಯಾಯಮಂಡಳಿ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೆ?, ನ್ಯಾಯಾಧೀಕರಣದ ಹೊರಗೆ ವಿವಾದ ಬಗೆಹರಿಸಿಕೊಳ್ಳಬೇಕೆ? ಎಂಬ ಬಗ್ಗೆ ಸರ್ವಪಕ್ಷಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ.[ನ್ಯಾಯಾಧೀಕರಣದ ಮಧ್ಯಂತರ ತೀರ್ಪಿನಲ್ಲಿ ಏನಿದೆ?]
ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ನಿರ್ಧಾರ ಕೈಗೊಂಡರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದು, ಅವರ ಮಧ್ಯಸ್ಥಿಕೆಗೆ ಮನವಿ ಮಾಡಲಿದ್ದಾರೆ.
7.65 ಟಿಎಂಸಿ ನೀರನ್ನು ಮಹದಾಯಿ ನದಿ ಪಾತ್ರದಿಂದ ಮಲಪ್ರಭ ನದಿಗೆ ಹರಿಸಿಕೊಂಡು ಕುಡಿಯುವ ನೀರು ಪೂರೈಕೆ ಮಾಡಲು ಬಳಸಿಕೊಳ್ಳಲು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಮಹದಾಯಿ ನ್ಯಾಯಮಂಡಳಿ ಕಳೆದ ವಾರ ತಿರಸ್ಕರಿಸಿತ್ತು.
ಮಹದಾಯಿ ನ್ಯಾಯಮಂಡಳಿ ತೀರ್ಪು ವಿರೋಧಿಸಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಜುಲೈ 30ರಂದು ಕರ್ನಾಟಕ ಬಂದ್ ಸಹ ನಡೆದಿತ್ತು. ಸದ್ಯ, ಕರ್ನಾಟಕ ಸರ್ಕಾರ ಮುಂದಿನ ಕಾನೂನು ಹೋರಾಟದ ಬಗ್ಗೆ ಚಿಂತನೆ ನಡೆಸುತ್ತಿದೆ.
'ನದಿ ನೀರಿನ ವಿವಾದದ ಬಗ್ಗೆ ಎಲ್ಲಾ ತೀರ್ಮಾನಗಳನ್ನು ಸರ್ವಪಕ್ಷ ಸಭೆಯಲ್ಲಿಯೇ ತೆಗೆದುಕೊಳ್ಳಲಾಗುತ್ತದೆ. ಮಹದಾಯಿ ವಿವಾದದಲ್ಲಿಯೂ ಸರ್ವಪಕ್ಷಗಳ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ' ಎಂದು ಕರ್ನಾಟಕ ಸರ್ಕಾರದ ಕಾನೂನು ಸಲಹೆಗಾರ ಬ್ರಿಜೇಶ್ ಕಾಳಪ್ಪ ಹೇಳಿದ್ದಾರೆ.