ಮಹಾದಾಯಿ ವಿವಾದ: ಚರ್ಚೆಗೆ ಬನ್ನಿ ಎಂದು ಎಚ್ಡಿಕೆಯಿಂದ ಆಹ್ವಾನ
ಬೆಂಗಳೂರು, ಸೆ. 27: ಕರ್ನಾಟಕ ಮತ್ತು ಗೋವಾ ನಡುವೆ ಉಂಟಾಗಿರುವ ನದಿ ನೀರು ಹಂಚಿಕೆ ವಿವಾದ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಗೋವಾದ ಮುಖಂಡರೊಡನೆ ಚರ್ಚೆ ನಡೆಸಲು ಮಾಜಿ ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿ ಅವರು ಮುಂದಾಗಿದ್ದಾರೆ.
ಕಳಸಾ-ಬಂಡೂರಿ ಕುಡಿಯುವ ನದಿ ನೀರು ಯೋಜನೆ ಅನುಷ್ಠಾನ ಹಾಗೂ ಮಹದಾಯಿ ನದಿ ನೀರು ಬಿಕ್ಕಟ್ಟಿನ ಬಗ್ಗೆ ಚರ್ಚೆ ನಡೆಸಲು ಸಮಯ ನಿಗದಿಪಡಿಸಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಗೋವಾದ ವಿರೋಧ ಪಕ್ಷದ ನಾಯಕರು ಹಾಗೂ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.[ಕಳಸಾ-ಬಂಡೂರಿ ಹೋರಾಟಕ್ಕೆ ಕೈ ಜೋಡಿಸಿದ ಕರ್ನಾಟಕ]
ಇದಲ್ಲದೆ ಗೋವಾದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ನಾರಾಯಣ ಸಿಂಗ್ ರಾಣೆ ಹಾಗೂ ಪ್ರದೇಶ ಗೋವಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಲುಜಿನೋ ಫಲೇರಿಯೋಗೆ ಪ್ರತ್ಯೇಕ ಪತ್ರ ಬರೆದಿದ್ದಾರೆ.

ಕರ್ನಾಟಕದ ಐದು ಜಿಲ್ಲೆಗಳಿಗೆ ಮಹದಾಯಿ ನದಿಯಿಂದ ಕಳಸಾ-ಬಂಡೂರಿ ನಾಲಾ ಮೂಲಕ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಆದ್ದರಿಂದ ಪ್ರಕರಣವನ್ನು ನ್ಯಾಯಾಧಿಕರಣದಿಂದ ಹೊರಗಿಟ್ಟು ಸಮಸ್ಯೆ ಪರಿಹರಿಸಲು ಉಭಯ ರಾಜ್ಯಗಳ ನಾಯಕರು ಮುಂದಾಗಬೇಕೆಂದು ಪತ್ರದಲ್ಲಿ ಕೋರಿದ್ದಾರೆ.[ಏನಿದು ಕಳಸಾ-ಬಂಡೂರಿ ಯೋಜನೆ?]
ರಾಜ್ಯದಲ್ಲಿ ಬರಗಾಲವಿದೆ: ಕರ್ನಾಟಕದಲ್ಲಿ ಇಂದು 27 ಜಿಲ್ಲೆಗಳಲ್ಲಿ ಬರಗಾಲ ಭೀಕರವಾಗಿ ಆವರಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಇದರ ಪರಿಸ್ಥಿತಿ ಊಹೆಗೂ ನಿಲುಕದಂತಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕರಣದ ಅಂತಿಮ ತೀರ್ಪು ಬರುವವರೆಗೂ ಕಾಯದೆ ಮಾತುಕತೆ ಮೂಲಕವೇ ಪರಿಹರಿಸಿಕೊಳ್ಳುವುದು ಒಳಿತು ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ. [ಮಹದಾಯಿ ಪರಿಹಾರಕ್ಕೆ ಸರ್ಕಾರ ಬದ್ಧ: ಎಂಬಿ ಪಾಟೀಲ್]

'ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪತ್ರ ಬರೆದಿದ್ದೇನೆ. ಈವರೆಗೂ ನನಗೆ ಸಮಯಾವಕಾಶ ನಿಗದಿಯಾಗಿಲ್ಲ. ಉಭಯ ನಾಯಕರು ಮಾತುಕತೆಗೆ ಸಮಯ ನಿಗದಿಪಡಿಸಿದರೆ ಗೋವಾಕ್ಕೆ ಬರುವುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.[ರಾಜಕಾರಣಿಗಳೇ, ಉತ್ತರ ಕರ್ನಾಟಕ ಬಾಯಾರಿದೆ!]
ಈ ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಉತ್ತರ ಕರ್ನಾಟಕದಲ್ಲಿ ಚಳವಳಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪರಿಸ್ಥಿತಿ ಕೈ ಮೀರುವ ಮೊದಲು ಮಾತುಕತೆ ಮೂಲಕವೇ ಸಮಸ್ಯೆ ಇತ್ಯರ್ಥಪಡಿಸಿ ಉಭಯ ರಾಜ್ಯಗಳು ಸೌಹಾರ್ದಯುತವಾಗಿರಲು ಹೊಸ ಮುನ್ನುಡಿ ಬರೆಯೋಣ ಎಂದು ಪತ್ರದಲ್ಲಿ ಕೋರಿಕೊಂಡಿದ್ದಾರೆ.












Click it and Unblock the Notifications