ಸದಾಶಿವ ವರದಿ: ಸಿದ್ದರಾಮಯ್ಯ ಮೊರೆ ಹೋಗಲು ಮಾದಿಗರ ತೀರ್ಮಾನ
Recommended Video

ಬೆಂಗಳೂರು, ಅಕ್ಟೋಬರ್ 5: ಒಳಮೀಸಲಾತಿಗೆ ಸಂಬಂಧಿಸಿದ ಸದಾಶಿವ ಆಯೋಗ ವರದಿ ಸಿದ್ಧವಾಗಿದ್ದು ಈ ಕುರಿತು ಸಿದ್ದರಾಮಯ್ಯ ಮೊರೆ ಹೋಗಲು ಮಾದಿಗರು ತೀರ್ಮಾನಿಸಿದ್ದಾರೆ.
ನ್ಯಾಯಮೂರ್ತಿ ಎಜೆ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ನಿರ್ಧರಿಸಿದ್ದಾರೆ, ವರದಿ ಅನುಷ್ಠಾನಕ್ಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊರೆ ಹೋಗಲು ತೀರ್ಮಾನಿಸಿದ್ದಾರೆ.
ಅಕ್ಟೋಬರ್ 12ರಂದು ನಗರದ ಅರಮನೆ ಮೈದಾನದಲ್ಲಿ ನಡೆಯಲಿರುವ ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಉದ್ಘಾಟನಾ ಸಮಾರಂಭಕ್ಕೆ ಸಮುದಾಯವನ್ನು ಸಂಘಟಿಸುವ ಸಲುವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ನಡೆದ ರಾಜ್ಯ ಮಾದಿಗ ಸಮುದಾಯದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಮಾಜಿ ಸಚಿವ ಎಚ್ ಆಂಜನೇಯ ನೇತೃತ್ವದಲ್ಲಿ ಸಭೆ
ಮಾದಿಗರ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸುವ ನ್ಯಾ. ಎಜೆ ಸದಾಶಿವ ಆಯೋಗ ವರದಿಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಕುರಿತು ಚರ್ಚೆ ನಡೆಸಲು ಮಾಜಿ ಸಚಿವ ಎಚ್ ಆಂಜನೇಯ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಪರಿಶಿಷ್ಟ ಜಾತಿಯಲ್ಲಿ ಸೌಲಭ್ಯ ವಂಚಿತ ಸಮುದಾಯಗಳಿಗೆ ಒಳಮೀಸಲಾತಿ ಕಲ್ಪಿಸುವ ಶಿಫಾರಸ್ಸುಗಳನ್ನೊಳಗೊಂಡಿರುವ ನ್ಯಾ. ಎಜೆ ಸದಾಶಿವ ಆಯೋಗ ವರದಿಯನ್ನು ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಲಾಯಿತು.

ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ಮಾದಿಗರು
ಸೌಲಭ್ಯ ವಂಚಿತರಾಗಿ ಹಿಂದುಳಿದಿರುವ ಮಾದಿಗ ಸಮಾಜವನ್ನು ಮೇಲೆತ್ತಲು ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮವನ್ನು ಮಂಜೂರು ಮಾಡಿದ ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಿಗಮ ಬೇಡ, ವರದಿ ಜಾರಿ ಮಾಡಿ
ಸಭೆಯ ಆರಂಭದಲ್ಲಿ ಕೆಲವರು ಆದಿ ಜಾಂಬವ ಅಭಿವೃದ್ಧಿ ನಿಗಮ ಸ್ಥಾಪನೆ ಕಣ್ಣೊರೆಸುವ ತಂತ್ರ ಇದರಿಂದ ಮಾದಿಗ ಸಮುದಾಯಕ್ಕೆ ಅಭಿವೃದ್ಧಿ ಸಾಧ್ಯವಿಲ್ಲ, ಇಷ್ಟು ದಿನ ಆಗಿರುವ ಅನ್ಯಾಯ ಸರಿಪಡಿಸಲೂ ಸಾಧ್ಯವಿಲ್ಲ, ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸುವುದು ಸಭೆಯ ಗುರಿಯಾಗಬೇಕು ಎಂದು ಆಗ್ರಹಿಸಿದರು.

ಪ್ರತ್ಯೇಕ ಸೌಲಭ್ಯಕ್ಕೆ ನಿಗಮ ಅಗತ್ಯ
ಸರ್ಕಾರದಿಂದ ಮಾದಿಗ ಸಮುದಾಯಕ್ಕೆ ಒಂದಷ್ಟು ಸೌಲಭ್ಯಗಳು ದೊರೆಯಬೇಕಾದರೆ ಪ್ರತ್ಯೇಕ ನಿಗಮ ಮಂಡಳಿ ಅಗತ್ಯವಿದೆ. ಹಾಗಾಘಿ ಅ.12ರಂದು ನಡೆಯುವ ನಿಗಮದ ಉದ್ಘಾಟನಾ ಸಮಾರಂಭಕ್ಕೆ ಸಮುದಾಯದ ಹೆಚ್ಚು ಜನರು ಭಾಗವಹಿಸಬೇಕೆಂದು ಕರೆ ನೀಡಿದರು.











Click it and Unblock the Notifications