ಚನ್ನಗಿರಿಗೆ ಬಿಜೆಪಿಯ ಹೊಸ ಅಭ್ಯರ್ಥಿ, ಸ್ಪರ್ಧಿಸಲು ಸಿದ್ಧ ಎಂದ ನಾಯಕ!
ಬೆಂಗಳೂರು, ಮಾರ್ಚ್ 10; ಚನ್ನಗಿರಿಯ ಬಿಜೆಪಿ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಪ್ರಕರಣದ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಚುನಾವಣೆ ಹತ್ತಿರವಿರುವಾಗಲೇ 40 ಲಕ್ಷ ಹಣದೊಂದಿಗೆ ಆತ ಲೋಕಾಯುಕ್ತರಿಗೆ ಸಿಕ್ಕಿಬಿದಿದ್ದಾರೆ. ಬಳಿಕ ಮನೆಯಲ್ಲಿ 6 ಕೋಟಿ ಹಣ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಶಾಸಕರು ಸಹ ಮೊದಲ ಆರೋಪಿ, ಸದ್ಯ ಮಧ್ಯಂತರ ಜಾಮೀನು ಪಡೆದಿದ್ದಾರೆ.
ಚುನಾವಣೆ ಸಮಯದಲ್ಲಿ ಈ ಪ್ರಕರಣ ಕರ್ನಾಟಕ ಬಿಜೆಪಿಗೆ ಭಾರೀ ಮುಜುಗರ ತಂದಿದೆ. ಚನ್ನಗಿರಿಯ ನಾಲ್ಕು ಬಾರಿಯ ಶಾಸಕ ಕೆ. ಮಾಡಾಳು ವಿರೂಪಾಕ್ಷಪ್ಪಗೆ ಈ ಬಾರಿಯ ಚುನಾವಣೆ ಟಿಕೆಟ್ ಸಿಗುವುದಿಲ್ಲವೇ? ಎಂಬ ಚರ್ಚೆ ಸಾಗಿದೆ. ಇದರ ನಡುವೆಯೇ ಪಕ್ಷ ಹೊಸ ಮುಖಕ್ಕೆ ಟಿಕೆಟ್ ಕೊಟ್ಟು ಮುಂದೆಯೂ ಆಗಬಹುದಾದ ಮುಜುಗರ ತಪ್ಪಿಸಿಕೊಳ್ಳಲು ಮುಂದಾಗಿದೆ.

ಚನ್ನಗಿರಿ ಮೂಲದ ಧನಂಜಯ್ ಸರ್ಜಿ ಶಿವಮೊಗ್ಗದ ಖ್ಯಾತ ವೈದ್ಯರು. ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿರುವ ಅವರು ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಆದರೆ ಈಗ ಕೆ. ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಿಂದ ಬಿಜೆಪಿಗೆ ತಲೆನೋವು ಆರಂಭವಾಗಿದೆ. ಆದ್ದರಿಂದ ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳ್ ಕುಟುಂಬ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಲು ಚಿಂತನೆ ನಡೆದಿದೆ. ಆಗ ಡಾ. ಧನಂಜಯ್ ಸರ್ಜಿ ಹೆಸರು ಕೇಳಿಬಂದಿದೆ.
ಈ ಹಿಂದೆ ಅವಿಭಜಿತ ಶಿವಮೊಗ್ಗ ಜಿಲ್ಲೆ ಇದ್ದಾಗ ಚನ್ನಗಿರಿ ಜಿಲ್ಲೆಯ ಭಾಗವಾಗಿತ್ತು. ಚನ್ನಗಿರಿ ಮತ್ತು ಶಿವಮೊಗ್ಗ ವಾಣಿಜ್ಯ ಮತ್ತು ಭಾವನಾತ್ಮಕವಾಗಿಯೂ ನಂಟು ಹೊಂದಿದೆ. ಧನಂಜಯ್ ಸರ್ಜಿಯವರಿಗೆ ಚನ್ನಗಿರಿಯ ಟಿಕೆಟ್ ನೀಡಲು ಕ್ಷೇತ್ರದ ಪಕ್ಷದ ಹಿತೈಷಿಗಳು, ಬಿಜೆಪಿಯ ಪ್ರಮುಖ ನಾಯಕರು ಸಹ ಒಪ್ಪಿಗೆ ನೀಡಿದ್ದಾರೆ ಎಂಬುದು ಸುದ್ದಿ. ಆದರೆ ಕೆ. ಮಾಡಾಳು ವಿರೂಪಾಕ್ಷಪ್ಪ ತನಗೆ ಟಿಕೆಟ್ ಕೊಡದಿದ್ದರೆ ಪುತ್ರನಿಗೆ ಟಿಕೆಟ್ ನೀಡಿ ಎಂಬ ಬೇಡಿಕೆ ಇಟ್ಟಿದ್ದಾರೆ ಎಂಬ ಮಾತಿದೆ.

ಡಾ. ಧನಂಜಯ್ ಸರ್ಜಿ ಮಾತು; ಚನ್ನಗಿರಿಯಿಂದ ಟಿಕೆಟ್ ಕೊಡುವ ವಿಚಾರದ ಬಗ್ಗೆ ಡಾ. ಧನಂಜಯ್ ಸರ್ಜಿ ಮಾತನಾಡಿದ್ದಾರೆ, "ನಾನೊಬ್ಬ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಬಿಜೆಪಿಯ ಸಂಘಟನೆಯಲ್ಲೇ ಬೆಳೆದು ಬಂದವನು. ಪಕ್ಷಕ್ಕೆ ನಿಷ್ಠೆಯಿಂದ ಇದ್ದೇನೆ, ಶಿವಮೊಗ್ಗ ಜಿಲ್ಲೆ ಪ್ರಣಾಳಿಕೆ ಸಂಗ್ರಹ ಸಂಚಾಲಕನ ಜವಾಬ್ದಾರಿಯನ್ನು ಪಕ್ಷ ನೀಡಿದೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಚುನಾವಣಾ ಕಾರ್ಯಗಳನ್ನು ನೋಡಿಕೊಳ್ಳಿ ಎಂದು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
"ಈ ಹಿಂದೆ ಜನರು ಹಲವು ಸಲ ಚನ್ನಗಿರಿಯಿಂದ ಚುನಾವಣೆಗೆ ಸ್ಪರ್ಧಿಸಿ ಎಂದು ನನನ್ನು ಒತ್ತಾಯಿಸಿದ್ದರು. ಚನ್ನಗಿರಿಯಲ್ಲೇ ನಾನು ಹುಟ್ಟಿ ಬೆಳೆದವ, ಕುಟುಂಬಗಳು ಅಲ್ಲೇ ಇದೆ, ಸ್ನೇಹಿತರು, ಸಂಬಂಧಿಕರು ಆಪ್ತರು ಸೇರ ಶೇ 80ರಷ್ಟು ಜನರು ಅಲ್ಲೇ ಇದ್ದಾರೆ. ತುಂಬಾ ಜನರು ಇದೇ ವಿಚಾರವಾಗಿ ಕರೆ ಮಾಡಿದ್ದಾರೆ, ಭೇಟಿಯಾಗುತ್ತಿದ್ದಾರೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷ ನೀಡುವ ಸೂಚನೆಗೆ ಬದ್ಧನಾಗಿರುತ್ತೇನೆ" ಎಂದು ಧನಂಜಯ್ ಸರ್ಜಿ ಸ್ಪಷ್ಟಪಡಿಸಿದ್ದಾರೆ.
ಹಲವರ ಹೆಸರು ಇದೆ; ಚನ್ನಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಹಾಲಿ ಶಾಸಕರ ಕೈ ತಪ್ಪಿದರೆ ಯಾರಿಗೆ ಸಿಗುತ್ತದೆ?. ಹಲವು ಹೆಸರುಗಳು ಕೇಳಿಬರುತ್ತಿವೆ, ಧನಂಜಯ್ ಸರ್ಜಿ, ಎಂಎಲ್ಸಿ ರುದ್ರೇಗೌಡ, ಹಾಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನ, ಸ್ಥಳೀಯ ಮುಖಂಡ ತುಮಕೊಸ್ ಮಾಜಿ ಅಧ್ಯಕ್ಷರೂ ಆಗಿರುವ ಎಚ್. ಎಸ್. ಶಿವಕುಮಾರ್ ಹೆಸರಿದೆ. ಪಕ್ಷ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಿದರೆ ಬೇರೆ ಅಭ್ಯರ್ಥಿ ಯಾರೂ ಎಂಬುದು ಪ್ರಶ್ನೆ. ಎಚ್. ಎಸ್. ಶಿವಕುಮಾರ್ ಮತ್ತು ರುದ್ರೇಗೌಡ ಇಬ್ಬರೂ ಸಹ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆಪ್ತರು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್ಡಿಎಲ್) ಟೆಂಡರ್ಗೆ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತರ ಕೈಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಪ್ರಕರಣದಲ್ಲಿ ಅವರು ಆರೋಪಿ ನಂಬರ್ 1. ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಗುರುವಾರ ಲೋಕಾಯುಕ್ತ ಕಚೇರಿಗೆ ಶಾಸಕರು ವಿಚಾರಣೆಗೂ ಹಾಜರಾಗಿದ್ದರು. 2018ರ ಚುನಾವಣೆಯಲ್ಲಿ ಅವರು ಚನ್ನಗಿರಿ ಕ್ಷೇತ್ರದಲ್ಲಿ 73,794 ಮತಗಳನ್ನು ಪಡೆದು ಜಯಗಳಿಸಿದ್ದಾರೆ.












Click it and Unblock the Notifications