'ಬೆಂಕಿ' ಹೇಳಿಕೆಗೆ ಕ್ಷಮೆ ಕೋರಿದ ಸಂಸದ ನಳಿನ್ ಕುಮಾರ್
ಕಾರ್ತಿಕ್ ರಾಜ್ ಕೊಲೆ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶೀಘ್ರದಲ್ಲಿ ಬಂಧಿಸಬೇಕು. ಇಲ್ಲದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಕ್ಷಮೆ ಕೋರಿದ್ದಾರೆ
ಮಂಗಳೂರು, ಜನವರಿ 3: ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂಬ ವಿವಾದಾತ್ಮಕ ಹೇಳಿಕೆಗೆ ಸಂಸದ ನಳೀನ್ ಕುಮಾರ್ ಕಟೀಲ್ ಕ್ಷಮೆ ಕೇಳಿದ್ದಾರೆ. ಕಾರ್ತಿಕ್ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಭಾನುವಾರ ಕೊಣಾಜೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಯಾವುದೇ ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ ಎಂದು ಕಟೀಲ್ ತಿಳಿಸಿದ್ದಾರೆ.
ಜಿಲ್ಲೆಯ ಶಾಂತಿ ಕದಡುವ ಯಾವುದೇ ದುರುದ್ದೇಶ ನನ್ನ ಹೇಳಿಕೆಯಲ್ಲಿ ಇರಲಿಲ್ಲ. ಆದರೂ ನೋವಿನಿಂದ ಮಾತಿನ ಭರದಲ್ಲಿ ವ್ಯಕ್ತವಾದ ಕೆಲವು ಶಬ್ದಗಳ ಬಗ್ಗೆ ಈಗಾಗಲೇ ಮಾಧ್ಯಮಗಳ ಮೂಲಕ ವಿಷಾದ ವ್ಯಕ್ತಪಡಿಸಿದ್ದೇನೆ. ಅಮಾಯಕ ಹಿಂದೂ ಯುವಕರ ಹತ್ಯೆಯಿಂದ ಜನತೆ ಆತಂಕಕ್ಕೀಡಾಗಿದ್ದಾರೆ. ಕಾರ್ತಿಕ್ರಾಜ್ ಹತ್ಯೆ ನಡೆದು ಎರಡು ತಿಂಗಳಾದರೂ ಆರೋಪಿಗಳ ಬಂಧನವಾಗಿಲ್ಲ. ಇದರಿಂದ ಸಹಜವಾಗಿಯೇ ಕಾರ್ಯಕರ್ತರಿಗೆ ನೋವಿದೆ.[ಸಂಸದ ನಳಿನ್ ಕುಮಾರ್ ವಿರುದ್ದ ಕಾನೂನು ಕ್ರಮ : ಸಚಿವ ರೈ]

ಪೊಲೀಸ್ ಇಲಾಖೆಯನ್ನು ಎಚ್ಚರಿಸಲು ಪ್ರತಿಭಟನೆ ನಡೆಸಲಾಗಿತ್ತು. ಉದ್ದೇಶಪೂರ್ವಕವಾಗಿ ಯಾವುದೇ ಮಾತು ಆಡಿಲ್ಲ. ಜನತೆ ಭಾವನೆಯನ್ನು ಮಾತಿನ ಮೂಲಕ ವ್ಯಕ್ತಪಡಿಸಿದ್ದೇನೆ. ಮನಸ್ಸಿನ ನೋವು ವ್ಯಕ್ತಪಡಿಸುವಾಗ ಕೆಲವು ಶಬ್ದಗಳು ತಪ್ಪಾಗಿರಬಹುದು. ಇದಕ್ಕೆ ತಪ್ಪು ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.[ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ: ಸಂಸದ ಕಟೀಲ್]
ಕ್ಷೇತ್ರದ ಸಂಸದನಾಗಿ ನನ್ನ ಜವಾಬ್ದಾರಿಯ ಪೂರ್ಣ ಅರಿವಿದೆ. ಜಿಲ್ಲೆಯ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಅದೇ ರೀತಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಸರಕಾರದ ಜವಾಬ್ದಾರಿ. ಕಾರ್ತಿಕ್ರಾಜ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಎನ್ನುವುದಷ್ಟೇ ನಮ್ಮ ಆಗ್ರಹ. ನ್ಯಾಯ ಸಿಗದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಅನಿವಾರ್ಯ ಎಂದಿದ್ದಾರೆ.












Click it and Unblock the Notifications