ರಾಹುಲ್ ಜೀಗೆ ಕೆಪಿಸಿಸಿ ಕೊಟ್ಟ ಭರ್ಜರಿ ಮನವಿ
ಬೆಂಗಳೂರು, ಫೆ.19: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಎರಡು ದಿನಗಳ ಕರ್ನಾಟಕ ಪ್ರವಾಸ ಯಶಸ್ವಿಗೊಳಿಸಿರುವ ಉತ್ಸಾಹದಲ್ಲಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕರು ಒಂದು ಹೆಜ್ಜೆ ಮುಂದಿಟ್ಟು ರಾಹುಲ್ ಅವರಿಗೆ ಪ್ರಸ್ತಾವನೆ ಇಟ್ಟಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಹೇಗಿದ್ದರೂ ನೀವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತೀರಾ, ಈ ಪೈಕಿ ಕರ್ನಾಟಕ ಒಂದು ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ ಎಂದು ಕೆಪಿಸಿಸಿ ನಾಯಕರು ಮನವಿ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ಅತ್ತ ಉತ್ತರಪ್ರದೇಶದ ಅಮೇಥಿಯಲ್ಲಿ ಆಮ್ ಆದ್ಮಿ ಪಕ್ಷದವರು ಪೊರಕೆ ಹಿಡಿದುಕೊಂಡು ರಾಹುಲ್ ಗಾಂಧಿ ವಿರುದ್ಧ ಕುಮಾರ್ ವಿಶ್ವಾಸ್ ಅವರನ್ನು ನಿಲ್ಲಿಸಲು ಹೊರಟಿರುವ ಬಗ್ಗೆ ಇಲ್ಲಿ ಓದಿರುತ್ತೀರಿ. ಈಗ ಕೆಪಿಸಿಸಿ ನಾಯಕರು ರಾಹುಲ್ ಗಾಂಧಿ ಅವರ ಒಪ್ಪಿಗೆಗಾಗಿ ಕಾದು ಕುಳಿತ್ತಿದ್ದಾರೆ. ರಾಹುಲ್ ಅವರನ್ನು ಕರ್ನಾಟಕದಿಂದ ಕಣಕ್ಕಿಳಿಸುವ ಪ್ರಸ್ತಾಪ ನಿನ್ನೆ ಮೊನ್ನೆಯದ್ದಲ್ಲ ಬಹು ಕಾಲದಿಂದ ಕೆಪಿಸಿಸಿ ನಾಯಕರನ್ನು ಒಂದುಗೂಡಿಸಿದ ಒಂದು ಪ್ರಕ್ರಿಯೆ.
ಇದು ಬರೀ ಗಾಳಿಸುದ್ದಿ ಎನ್ನಲೂ ಬರುವುದಿಲ್ಲ. ರಾಹುಲ್ ಗಾಂಧಿ ಅವರು ಕರ್ನಾಟಕ ಪ್ರವಾಸ ಕೈಗೊಳ್ಳುವುದಕ್ಕೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು ಗುಟ್ಟಾಗೇನೂ ಉಳಿದಿಲ್ಲ.
ಕಾಂಗ್ರೆಸ್ಸಿಗೆ ಕರ್ನಾಟಕ ಎಂದಿದ್ದರೂ ಸುರಕ್ಷಿತ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಕರ್ನಾಟಕ ಎಂದಿದ್ದರೂ ಸುರಕ್ಷಿತವಾದ ರಾಜ್ಯ. ದೇಶದೆಲ್ಲೆಡೆ ಕಾಂಗ್ರೆಸ್ ವಿರೋಧಿ ಅಲೆ ಇದ್ದಾಗಲೂ ಇಲ್ಲಿ ಕಾಂಗ್ರೆಸ್ ಭರ್ಜರಿ ಯಶಸ್ಸು ಕಂಡ ಉದಾಹರಣೆಗಳಿವೆ. 1977ರಲ್ಲಿ ಜನತಾ ಪಾರ್ಟಿ ಅಧಿಕಾರಕ್ಕೆ ಬಂದಾಗ ರಾಜ್ಯದಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳ ಪೈಕಿ 26 ಕ್ಷೇತ್ರದಲ್ಲಿ ತನ್ನ ಬಾವುಟ ಹಾರಿಸಿತ್ತು.
ಇದಾದ ಬಳಿಕ ಇಂದಿರಾ ಗಾಂಧಿ ಅವರಿಗೆ ರಾಜಕೀಯವಾಗಿ ಮರು ಹುಟ್ಟು ನೀಡಿದ್ದು ಕರ್ನಾಟಕದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಎಂಬ ಅರಿವು ಸೋನಿಯಾ ಗಾಂಧಿ ಅವರಿಗೂ ಇದೆ.

ಪ್ರಮುಖ ರಾಜಕೀಯ ಮುಖಂಡರು ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ತಂತ್ರಗಾರಿಕೆ. ಸೋನಿಯಾ ಗಾಂಧಿ ಅವರು ಕೂಡಾ 1999ರಲ್ಲಿ ರಾಯ್ ಬರೇಲಿಯಲ್ಲಿ ಸ್ಪರ್ಧಿಸುತ್ತಲೇ ಕರ್ನಾಟಕದ ಬಳ್ಳಾರಿಯಲ್ಲಿ 'ಕೈ' ಬೀಸಿ ಮತದಾರರನ್ನು ಸೆಳೆದಿದ್ದರು.
ಈಗ ಆಂಧ್ರಪ್ರದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಎದ್ದಿದೆ. ಕೇರಳ, ತಮಿಳುನಾಡಿನಲ್ಲಿ ಕಾಂಗ್ರೆಸ್ ನೆಲೆ ಹುಡುಕುವುದು ಕಷ್ಟ. ಹೀಗಾಗಿ ಕರ್ನಾಟಕವೇ ಗಾಂಧಿ ಮನೆತನದ ಪೋಷಕ ಕ್ಷೇತ್ರವಾಗಬಲ್ಲುದು ಎಂದು ಕೆಪಿಸಿಸಿ ಲೆಕ್ಕಾಚಾರ.
ಕರ್ನಾಟಕ ಭೇಟಿ ಯಶಸ್ವಿ: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರ ಬೆಳಗಾವಿ ಸಮಾವೇಶ, ಮೈಸೂರಿನಿಂದ ಮಂಡ್ಯ ತನಕ ರೋಡ್ ಶೋ, ತುಮಕೂರಿನಲ್ಲಿ ಮಹಿಳಾ ಸಮಾವೇಶ ಎಲ್ಲವೂ ಜೆಡಿಎಸ್ ಗೆ ಚುರುಕು ಮುಟ್ಟಿಸಿದೆ. ಹೀಗಾಗಿ ಗೆಲುವಿನ ಸಂಭ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಬಹುದು ಎಂದು ಕೆಪಿಸಿಸಿ ನಾಯಕರು ಹೈಕಮಾಂಡ್ ಬಳಿ ಹೇಳಲು ಹೊರಟ್ಟಿದ್ದಾರೆ.
ರಾಹುಲ್ ಗಾಂಧಿ ಅವರು ಹಿರಿಯ ನಾಯಕ ಎಸ್ಸೆಂ ಕೃಷ್ಣ ಅವರ ಆಶೀರ್ವಾದ ಬೇಡಿದ್ದು ಮಂಡ್ಯದ ಜನತೆಗೆ ಥ್ರಿಲ್ ಕೊಟ್ಟಿದೆ. ಬೆಂಗಳೂರು ವಿವಿಯಲ್ಲಿನ ರಾಹುಲ್ -ವಿದ್ಯಾರ್ಥಿಗಳ ಸಂವಾದವೂ ಸಕ್ಸಸ್ ಆಗಿದೆ. ಯಶಸ್ಸಿನ ಅಲೆ ರಾಹುಲ್ ಅವರನ್ನು ಮೇಲಕ್ಕೇರಿಸಲಿದೆ. ಅಲ್ಲದೇ ರಾಹುಲ್ ಕಣಕ್ಕಿಳಿದರೆ ಇನ್ನಷ್ಟು ಯುವ ಮತದಾರರ ಮತಗಳನ್ನು ಸೆಳೆಯುವುದು ಸುಲಭ ಎಂಬುದು ಕೆಪಿಸಿಸಿ ನಾಯಕರ ಎಣಿಕೆ. ಅಂತಿಮ ನಿರ್ಧಾರ ಸೋನಿಯಾ ಹಾಗೂ ರಾಹುಲ್ ಅವರಿಗೆ ಬಿಟ್ಟಿದ್ದು.











Click it and Unblock the Notifications