ಬೆಂಗಳೂರು-ನಾಂದೇಡ್ ರೈಲು ಅಪಘಾತಕ್ಕೆ ಕಾರಣ ಬಹಿರಂಗ
ಬೆಂಗಳೂರು, ಮಾರ್ಚ್ 07 : ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೆ ಲಾರಿ ಚಾಲಕ ಕಾರಣ ಎಂಬುದು ತನಿಖಾ ವರದಿಯಿಂದ ಬಹಿರಂಗವಾಗಿದೆ. ಈ ರೈಲು ಅಪಘಾತದಲ್ಲಿ ದೇವದುರ್ಗ ಕ್ಷೇತ್ರದ ಅಂದಿನ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಸೇರಿದಂತೆ ಐವರು ಮೃತಪಟ್ಟಿದ್ದರು.
2015ರ ಆಗಸ್ಟ್ 24ರಂದು ಆಂಧ್ರಪ್ರದೇಶದ ಮಡಕಶಿರ ಬಳಿಯ ರೈಲ್ವೆ ಕ್ರಾಸಿಂಗ್ ಬಳಿ ಗ್ರಾನೈಟ್ ತುಂಬಿದ್ದ ಲಾರಿ ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಿಂದಾಗಿ ಬೆಂಗಳೂರು ರೈಲ್ವೆ ವಲಯಕ್ಕೆ 3 ಕೋಟಿ ರೂ. ನಷ್ಟವಾಗಿದೆ ಎಂದು ವರದಿ ಹೇಳಿದೆ. [ಐವರನ್ನು ಬಲಿಪಡೆದ ರೈಲು ದುರಂತದ ಚಿತ್ರಗಳು]

ನೈಋತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಆಯುಕ್ತ ಸತೀಶ್ ಕುಮಾರ್ ಮಿತ್ತಲ್ ಅವರು ಈ ವರದಿ ಸಿದ್ಧಪಡಿಸಿದ್ದಾರೆ. ಲಾರಿಯಲ್ಲಿ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಗ್ರಾನೈಟ್ ತುಂಬಲಾಗಿತ್ತು. ಲಾರಿ ಚಾಲಕನ ಬಳಿ ಡ್ರೈವಿಂಗ್ ಲೈಸೆನ್ಸ್ ಸಹ ಇರಲಿಲ್ಲ ಎಂದು ಮಿತ್ತಲ್ ವರದಿಯಲ್ಲಿ ಹೇಳಿದ್ದಾರೆ. [ದೇವದುರ್ಗ ಉಪ ಚುನಾವಣೆ : ಗೆದ್ದವರು ಯಾರು?]
ಆಗಸ್ಟ್ 24ರಂದು ಮುಂಜಾನೆ 2.14ಕ್ಕೆ ಈ ಅಪಘಾತ ಸಂಭವಿಸಿದೆ. 21 ಟನ್ ಗ್ರಾನೈಟ್ ತುಂಬಬೇಕಿದ್ದ ಲಾರಿಯಲ್ಲಿ 4 ಟನ್ ಹೆಚ್ಚು ಕಲ್ಲು ತುಂಬಲಾಗಿತ್ತು. 40 ಕಿ.ಮೀ. ವೇಗದಲ್ಲಿ ಬಂದ ಲಾರಿ ರೈಲ್ವೆ ಕ್ರಾಸಿಂಗ್ನಲ್ಲಿ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ವರದಿ ಹೇಳಿದೆ.

ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಎಚ್ 1, ಎಸ್ 1, ಎಸ್ 2 ಮತ್ತು ಬಿ 1 ಬೋಗಿಗಳು ಹಳಿ ತಪ್ಪಿದವು. ಮೊದಲನೆ ದರ್ಜೆ ಎಚ್ 1 ಬೋಗಿಗೆ ಲಾರಿ ನೇರವಾಗಿ ಡಿಕ್ಕಿ ಹೊಡೆದಿದ್ದರಿಂದ ಅದರಲ್ಲಿದ್ದ 5 ಜನರು ಮೃತಪಟ್ಟರು. ಅಪಘಾತದಲ್ಲಿ 4 ಜನರು ಗಾಯಗೊಂಡರು ಎಂದು ವರದಿ ತಿಳಿಸಿದೆ.
ಉಪ ಚುನಾವಣೆ : ಈ ರೈಲು ಅಪಘಾತದಲ್ಲಿ ಶಾಸಕ ಎ.ವೆಂಕಟೇಶ್ ನಾಯಕ್ ಅವರು ಮೃತಪಟ್ಟಿದ್ದರಿಂದ ದೇವದುರ್ಗ ಕ್ಷೇತ್ರ ತೆರವಾಗಿತ್ತು. 2016ರ ಫೆ.13ರಂದು ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರು ಗೆಲುವು ಸಾಧಿಸಿದ್ದಾರೆ.












Click it and Unblock the Notifications