ಲೋಕ ಚುನಾವಣೆ: ಮಹಿಳೆಯರಿಗೆ ಈ ಬಾರಿಯೂ ನಿರಾಸೆ

ಮೊನ್ನೆ ಯುವ ಮಹಿಳಾ ನಾಯಕಿಯೊಬ್ಬರು ತಾವು ಚುನಾವಣೆಗೆ ಸ್ಪರ್ಧಿಸಬಯಸುವುದಾಗಿ ಸ್ವತಃ ಘೋಷಿಸಿದರೂ 'ಅಂತಹ ಯಾವುದೇ ಆಸೆ ಇಟ್ಟುಕೊಳ್ಳಬೇಡಿ. ಅಲ್ಲಿ ಈಗಾಗಲೇ ಹಳೆಯ ಹುಲಿಯೊಬ್ಬರು ಕಣದಲ್ಲಿ ತಾಲೀಮು ನಡೆಸುತ್ತಿದ್ದಾರೆ. ನಿಮಗೆಲ್ಲಾ ಟಿಕೆಟ್ ನೀಡಲಾಗುವುದಿಲ್ಲ' ಎಂದು ಪಕ್ಷದ ನಾಯಕರು ಅದಾಗಲೇ ಗದರಿಕೊಂಡಿದ್ದಾರೆ.
ಅಂದಹಾಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ (2009) ರಾಜ್ಯದಿಂದ 19 ಮಹಿಳೆಯರು ಸ್ಪರ್ಧಿಸಿದ್ದರು. ಆದರೆ ಬಳ್ಳಾರಿಯಿಂದ ಒಬ್ಬ ಶಾಂತಾ ಮಾತ್ರವೇ ಗೆಲ್ಲುವಲ್ಲಿ ಶಕ್ತರಾಗಿದ್ದಾರೆ. 2004ರಲ್ಲಂತೂ ಕೇವಲ 10 ಮಹಿಳೆಯರು ಕಣಕ್ಕಿಳಿದಿದ್ದರು. ಅದರಲ್ಲಿ ತೇಜಸ್ವಿನಿ ರಮೇಶ್ ಮತ್ತು ಮನೋರಮಾ ಮಧ್ವರಾಜ್ ಅವರು ಮಾತ್ರೆ ಗೆದ್ದುಬಂದಿದ್ದರು.
ಅಂದಹಾಗೆ ರಾಜ್ಯದಲ್ಲಿ ಪುರುಷ ಮತ್ತು ಮಹಿಳಾ ಮತದಾರರು ಬಹುತೇಕ ಸಮ-ಸಮ ಸಂಖ್ಯೆಯಲ್ಲಿದ್ದಾರೆ. ಆದರೂ ಇಲ್ಲಿ ಗೆಲುವೊಂದೇ ರಾಜಕೀಯ ಪಕ್ಷಗಳ ಮಾಣದಂಡವಾಗುತ್ತದೆ. ಆದರೆ 'ಹಣ ಬಲ, ತೋಳ್ಬಲದ ಮುಂದೆ ನಾವು ನಿಸ್ತೇಜರಾಗುತ್ತೇವೆ' ಎಂಬುದು ಎಲ್ಲ ಪಕ್ಷಗಳ ಮಹಿಳಾ ನಾಯಕರುಗಳು ಸ್ಪಷ್ಟ ಅಭಿಮತ.
ರಾಜ್ಯ ಬಿಜೆಪಿ ಪಕ್ಷವನ್ನು ಮೊದಲು ಗಣನೆಗೆ ತೆಗೆದುಕೊಂಡರೆ ಈ ಬಾರಿ ಒಬ್ಬೇ ಒಬ್ಬರಿಗೆ ಮಹಿಳಾ ಕೋಟಾದಲ್ಲಿ ಟಿಕೆಟ್ ನೀಡುವ ಲಕ್ಷಣಗಳಿವೆ. ಸಾಮಾಜಿಕ ನ್ಯಾಯ ಮತ್ತು ಮಹಿಳಾ ಹಕ್ಕುಗಳ ಬಗ್ಗೆ ದೊಡ್ಡ ದೊಡ್ಡ ಭಾಷಣ ಮಾಡುವ ಕಾಂಗ್ರೆಸ್ ಪಕ್ಷವೂ ಇದಕ್ಕಿಂತ ಭಿನ್ನವೇನೂ ಇಲ್ಲ.
ಕಾಂಗ್ರೆಸ್ಸಿನಲ್ಲಿ ನಟಿ ರಮ್ಯಾಗೆ ಮತ್ತೆ ಟಿಕೆಟ್ ನೀಡುವುದು ಬಹುತೇಕ ಖಚಿತವಾಗಿದೆ. ಅದನ್ನು ಬಿಟ್ಟರೆ ಮಾಜಿ ಪೊಲೀಸ್ ಅಧಿಕಾರಿ ಲಕ್ಷ್ಮಿ ನಿಂಬಾಳ್ಕರ್ ಅವರಿಗೆ ಬೆಳಗಾವಿಯಿಂದ ಸ್ಪರ್ಧಿಸಲು ಅವಕಾಶ ದಕ್ಕಬಹುದು. ಅಂದರೆ ಕಾಂಗ್ರೆಸ್ ಪಕ್ಷವು ಈ ಬಾರಿ ಇಬ್ಬರು ಮಹಿಳೆಯರಿಗೆ ಟಿಕೆಟ್ ನೀಡಬಹುದಷ್ಟೇ. ಇನ್ನು ಜೆಡಿಎಸ್ಸಿನಿಂದ ಅನಿತಾ ಕುಮಾರಸ್ವಾಮಿ ಮತ್ತು ಶಕುಂತಲಾ ಬಂಗಾರಪ್ಪ ಅವರಿಬ್ಬರಿಗೆ ಮಾತ್ರ ಟಿಕೆಟ್ ನೀಡುವ ಲಕ್ಷಣಗಳಿವೆ.
ಕಾಂಗ್ರೆಸ್ಸಿನ ಮಹಿಳಾ ಮೋರ್ಚಾದವರು ತಮಗೆ ಕನಿಷ್ಠ 5 ಟಿಕೆಟ್ಟುಗಳನ್ನಾದರೂ ನೀಡಿ ಎಂದು ಕೇಳುತ್ತಲೇ ಇದ್ದಾರೆ. ಆದರೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರು ಗೆಲುವೊಂದೇ ಮೂಲಮಂತ್ರ. ಇಪ್ಪತ್ತೆಂಟೂ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗಳು ದೊರೆತರೆ ಅಲ್ಲೆಲ್ಲಾ ಮಹಿಳೆಯರನ್ನೆ ಕಣಕ್ಕಿಳಿಸುತ್ತೇವೆ ಎನ್ನುತ್ತಾರೆ.
ಈ ಮಧ್ಯೆ, AICC ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸದ್ಯದಲ್ಲೇ ಭೇಟಿ ಮಾಡಿ ಮಹಿಳೆಯರಿಗೆ ತಕ್ಕ ಪ್ರಾತಿನಿಧ್ಯ ನೀಡುವಂತೆ ಕೋರುವುದಾಗಿ ಕಾಂಗ್ರೆಸ್ ಮಹಿಳಾ ಮೋರ್ಚಾ ಮುಖ್ಯಸ್ಥೆ ಮಂಜುಳಾ ನಾಯ್ಡು ಹೇಳಿದ್ದಾರೆ.












Click it and Unblock the Notifications