ಲೋಕಸಭೆ ಚುನಾವಣೆ 2024; ಜೆಡಿಎಸ್ಗೆ ಐದು ಕ್ಷೇತ್ರ ನೀಡಿದ ಬಿಜೆಪಿ; ಕ್ಷೇತ್ರಗಳು ಯಾವುವು, ಅಭ್ಯರ್ಥಿಗಳು ಯಾರು?
ಬೆಂಗಳೂರು, ಫೆಬ್ರವರಿ.23: ರಾಜ್ಯ ಚುನಾವಣಾ ಕಣ ರಂಗೇರುತ್ತಿದ್ದು, ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ- ಜೆಡಿಎಸ್ ಮೈತ್ರಿ ರಣತಂತ್ರಗಳನ್ನು ಹೂಡುತ್ತಿವೆ. ಇನ್ನು, ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ ಬಿಜೆಪಿಯು ಜೆಡಿಎಸ್ಗೆ ಐದು ಲೋಕಸಭಾ ಕ್ಷೇತ್ರಗಳನ್ನು ನೀಡಿದೆ.
ಮೈತ್ರಿ ಒಪ್ಪಂದದ ಭಾಗವಾಗಿ ಅಭ್ಯರ್ಥಿಗಳ ವಿನಿಮಯವನ್ನು ಸಹ ಒಳಗೊಂಡಿರಬಹುದು ಎಂದು ಪಕ್ಷದ ಶಾಸಕಾಂಗ ನಾಯಕ ಎಚ್ಡಿ ಕುಮಾರಸ್ವಾಮಿ ಅವರ ಆಪ್ತ ಮೂಲಗಳು ತಿಳಿಸಿವೆ. ಜೆಡಿಎಸ್ಗೆ ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರಿನಲ್ಲಿ ಆಯ್ಕೆ ಮಾಡಲು ಮುಕ್ತ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಗುರುವಾರ (ಫೆಬ್ರವರಿ 22) ರಂದು ನವದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚುನಾವಣಾ ಒಪ್ಪಂದ ಮತ್ತು ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ.
ಜೆಡಿಎಸ್ಗೆ ಐದು ಕ್ಷೇತ್ರ, ಅಬ್ಯರ್ಥಿಗಳು ಯಾರು?
ಬಿಜೆಪಿ - ಜೆಡಿಎಸ್ನ ಸೀಟು ಹಂಚಿಕೆ ಒಪ್ಪಂದವು ಅಭ್ಯರ್ಥಿಗಳ ವಿನಿಮಯವನ್ನು ಒಳಗೊಂಡಿರುವ ಸಾಧ್ಯತೆಯಿದೆ. "ಹಾಸನ, ಮಂಡ್ಯ ಮತ್ತು ಕೋಲಾರದಲ್ಲಿ ಜೆಡಿಎಸ್ ಪಕ್ಷದಿಂದಲೇ ಅಭ್ಯರ್ಥಿ ಇರಲಿದ್ದಾರೆ. ಆದರೆ, ಬೆಂಗಳೂರು ಗ್ರಾಮಾಂತರದಿಂದ ಜೆಡಿಎಸ್ ಅಭ್ಯರ್ಥಿ ಬಿಜೆಪಿ ಚಿಹ್ನೆಯ ಮೇಲೆ ಸ್ಪರ್ಧಿಸುವ ಸಾಧ್ಯತೆಯಿದೆ. ತುಮಕೂರಿನಲ್ಲಿ ಜೆಡಿಎಸ್ ಚಿಹ್ನೆನಿಂದ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸಬಹುದು" ಎಂದು ಮೂಲವೊಂದು ವಿವರಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ತನ್ನ ಅಸ್ತಿತ್ವವೇ ಕುಸಿದು ಹೋಗುವ ಆತಂಕದಲ್ಲಿರುವ ಜೆಡಿಎಸ್ ಔಪಚಾರಿಕವಾಗಿ ಬಿಜೆಪಿ ನೇತೃತ್ವದ ಎನ್ಡಿಎಗೆ ಸೆಪ್ಟೆಂಬರ್ 2023 ರಲ್ಲಿ ಸೇರ್ಪಡೆಯಾಯಿತು. ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಕೇಸರಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ.

ಉಳಿಸಿಕೊಳ್ಳಲಿದೆಯಾ ಜೆಡಿಎಸ್ ತನ್ನ ಭದ್ರಕೋಟೆ?
ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಹಾಸನದಲ್ಲಿ ಈಗಾಗಲೇ ಜೆಡಿಎಸ್ ಸಂಸದರಿದ್ದಾರೆ. ಒಕ್ಕಲಿಗರ ಹೃದಯಭಾಗ ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಸಂಸದರಾಗಿದ್ದಾರೆ. ಕೋಲಾರದಲ್ಲಿ ಬಿಜೆಪಿ ಸಂಸದರಿದ್ದಾರೆ. ಮೂಲಗಳ ಪ್ರಕಾರ, ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಬಯಸಿದ್ದಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ಅಳಿಯ ಡಾ.ಮಂಜುನಾಥ್ ಅವರು ಪ್ರಸ್ತುತ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ್ ಅವರು ಹೊಂದಿರುವ ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿಯ ಚಿಹ್ನೆಯ ಮೇಲೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳು ದಟ್ಟವಾಗಿವೆ.
ತುಮಕೂರಿನಲ್ಲಿ ಬಿಜೆಪಿಯ ಹಿರಿಯ ಮುಖಂಡ ವಿ ಸೋಮಣ್ಣ ಜೆಡಿಎಸ್ ಚಿಹ್ನೆಯ ಅಭ್ಯರ್ಥಿಯಾಗಲಿದ್ದಾರೆ ಎಂಬ ಊಹಾಪೋಹವಿದೆ. ಈ ನಿರ್ಧಾರಗಳು ಜಾತಿ ಲೆಕ್ಕಾಚಾರ ಮತ್ತು ಹಿಂದಿನ ಚುನಾವಣೆಗಳಲ್ಲಿ ಜಾತಿವಾರು ಮತ್ತು ಪಕ್ಷವಾರು ಮತ ಹಂಚಿಕೆ, ಗೆಲುವಿನ ಸಾಮರ್ಥ್ಯ ಮತ್ತು ಅಭ್ಯರ್ಥಿಯ ವೈಯಕ್ತಿಕ ವರ್ಷಸ್ಸನ್ನು ಒಳಗೊಂಡಿರುವ ಇತರ ಸಮೀಕ್ಷೆಯ ಮೇಲೆ ಆಧರಿಸಿದೆ.
ಕುಮಾರಸ್ವಾಮಿ ಅವರು ತಮ್ಮ ಪುತ್ರನೊಂದಿಗೆ ಬುಧವಾರ ದಿಢೀರ್ ದೆಹಲಿಗೆ ತೆರಳಿದ್ದರು. ಖ್ಯಾತ ನ್ಯಾಯಶಾಸ್ತ್ರಜ್ಞ ಫಾಲಿ ಎಸ್ ನಾರಿಮನ್ ಅವರಿಗೆ ಗೌರವ ಸಲ್ಲಿಸಲು ಭೇಟಿ ನೀಡಿದ್ದರೂ, ಕೂಡ ಗುರುವಾರ, ತಂದೆ-ಮಗ ಇಬ್ಬರೂ ಅಮಿತ್ ಶಾ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ಬಗ್ಗೆ ಚರ್ಚಿಸಿದ್ದರು.
ಫೆಬ್ರವರಿ ಅಂತ್ಯದಲ್ಲಿ ಬಿಜೆಪಿ- ಜೆಡಿಎಸ್ ಮಾತುಕತೆ
ಈ ತಿಂಗಳ ಅಂತ್ಯದಲ್ಲಿ ಬಿಜೆಪಿಯು ಜೆಡಿಎಸ್ನೊಂದಿಗೆ ಮಾತುಕತೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಬಿಜೆಪಿ ಮಂಡ್ಯವನ್ನು ಉಳಿಸಿಕೊಳ್ಳಲು ಬಯಸಿದೆ ಎಂಬ ವರದಿಗಳ ನಂತರ ಅಮಿತ್ ಶಾ ಅವರನ್ನು ಭೇಟಿ ಮಾಡಲು ಎಚ್ ಡಿ ಕುಮಾರಸ್ವಾಮಿ ತೆರಳಿದ್ದರು ಎನ್ನುವುದು ವಿಶೇಷ.
ಮಂಡ್ಯದಲ್ಲಿ ಬಿಜೆಪಿ ಸುಮಲತಾ ಅವರನ್ನು ಬಿಜೆಪಿ ಕಣಕ್ಕಿಳಿಸುತ್ತದೆ ಎಂಬ ವರದಿಗಳಿಂದ ಮಂಡ್ಯದ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಮಂಡ್ಯ ಕ್ಷೇತ್ರದ ಬಗ್ಗೆ ನಮ್ಮ ನಾಯಕರು ದೃಢವಾಗಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹವಿದ್ದು, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದಾರೆ.
(ಮಾಹಿತಿ : ಡೆಕ್ಕನ್ ಹೆರಾಲ್ಡ್)












Click it and Unblock the Notifications